ಚೆನ್ನೈ: ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಖ್ಯಾತ ನಟ ಶ್ರೀಕಾಂತ್ ಅವರನ್ನು ಡ್ರಗ್ ಕೇಸ್ ಸಂಬಂಧ ಚೆನ್ನೈನ ನುಂಗಬಾಕಕಂ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಬೆಳಗ್ಗೆ 11:30 ರಿಂದ ಆರಂಭವಾದ ಈ ವಿಚಾರಣೆಯಲ್ಲಿ ಪೊಲೀಸರು ಶ್ರೀಕಾಂತ್ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ AIADMK ಪಕ್ಷದ ಉಚ್ಚಾಟಿತ ಸದಸ್ಯ ಪ್ರಸಾದ್ ರಿಂದ ಡ್ರಗ್ ಖರೀದಿಸಿ ಬಳಸಿದ ಆರೋಪ ಶ್ರೀಕಾಂತ್ ಮೇಲೆ ಕೇಳಿಬಂದಿದೆ.
ಪ್ರಕರಣದ ಹಿನ್ನೆಲೆ
ಈ ಡ್ರಗ್ ಕೇಸ್ನ ಮೂಲವು AIADMK ಪಕ್ಷದ ಮೈಲಾಪುರ ಐಟಿ ವಿಂಗ್ನ ಉಚ್ಚಾಟಿತ ಸದಸ್ಯ ಪ್ರಸಾದ್ಗೆ ಸಂಬಂಧಿಸಿದೆ. ಈಗಾಗಲೇ ಅರೆಸ್ಟ್ ಆಗಿರುವ ಪ್ರದೀಪ್ ಕುಮಾರ್ ಎಂಬ ವ್ಯಕ್ತಿಯ ವಿಚಾರಣೆ ವೇಳೆ ಪ್ರಸಾದ್ ಹೆಸರು ಬಾಯ್ಬಿಟ್ಟಿದ್ದಾರೆ. ಪ್ರಸಾದ್ನಿಂದ ಡ್ರಗ್ ಖರೀದಿಸಿದವರಲ್ಲಿ ಶ್ರೀಕಾಂತ್ ಸೇರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದರ ಜೊತೆಗೆ, ಬೆಂಗಳೂರಿನಲ್ಲಿ ವಾಸವಿರುವ ಒಬ್ಬ ನೈಜೀರಿಯನ್ ವ್ಯಕ್ತಿಯಿಂದ ಪ್ರಸಾದ್ ಡ್ರಗ್ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶ್ರೀಕಾಂತ್ಗೆ ಸಂಬಂಧಿಸಿದ ಆರೋಪಗಳು
ತಮಿಳು ಚಿತ್ರರಂಗದಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿರುವ ಶ್ರೀಕಾಂತ್ ಮೇಲೆ ಕೊಕೇನ್ ಬಳಕೆಯ ಗಂಭೀರ ಆರೋಪವಿದೆ. ಪ್ರದೀಪ್ ಕುಮಾರ್ ತಮ್ಮ ವಾಕ್ಕುಮೂಲದಲ್ಲಿ, “ನಾನು ಶ್ರೀಕಾಂತ್ ಮತ್ತು ಇನ್ನೊಬ್ಬ ನಟನಿಗೆ ಪ್ರಸಾದ್ ಮೂಲಕ ಕೊಕೇನ್ ಸರಬರಾಜು ಮಾಡಿದ್ದೇನೆ. ಶ್ರೀಕಾಂತ್ ಕೊಕೇನ್ ಬಳಸುವುದನ್ನು ನಾನು ನೇರವಾಗಿ ನೋಡಿದ್ದೇನೆ,” ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ವಾಕ್ಕುಮೂಲವು ಶ್ರೀಕಾಂತ್ಗೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಲು ಕಾರಣವಾಗಿದೆ.
ನುಂಗಬಾಕಕಂ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಶ್ರೀಕಾಂತ್ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ವಿಚಾರಣೆಯ ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.