ಪತಿಯ ಹುಟ್ಟುಹಬ್ಬದಂದು ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಲಹೆ ನೀಡಿದ ಶ್ರೀದೇವಿ

Untitled design 2026 04 23T181655.016

ಬೆಂಗಳೂರು: ಸ್ಯಾಂಡಲ್‌ವುಡ್‌ನ ಯುವ ನಟ ಯುವ ರಾಜ್‌ಕುಮಾರ್ ಮತ್ತು ಅವರ ಪತ್ನಿ ಶ್ರೀದೇವಿ ಬೈರಪ್ಪ ಅವರ ವೈವಾಹಿಕ ಜೀವನದ ಬಿರುಕು ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿದೆ. 2019ರಲ್ಲಿ ವಿವಾಹವಾದ ಈ ಜೋಡಿ, ಕೆಲವೇ ವರ್ಷಗಳಲ್ಲಿ ದೂರವಾಗುವ ಹಂತಕ್ಕೆ ತಲುಪಿದೆ. ಯುವ ರಾಜ್‌ಕುಮಾರ್ ನಟಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಗಂಭೀರ ಆರೋಪವನ್ನು ಶ್ರೀದೇವಿ ಮಾಡಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಇದೇ ವೇಳೆ, ಇಂದು (ಏಪ್ರಿಲ್ 23) ಯುವ ರಾಜ್‌ಕುಮಾರ್ ಅವರ ಜನ್ಮದಿನವಾಗಿದೆ. ಈ ವಿಶೇಷ ದಿನದಂದು ಶ್ರೀದೇವಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪತಿಯೊಂದಿಗಿನ ಹಳೆಯ ಫೋಟೋವನ್ನು ಹಂಚಿಕೊಂಡು, ಬರಹದ ಮೂಲಕ ಮಹಿಳೆಯರಿಗೆ ಸಲಹೆಗಳನ್ನು ನೀಡಿದ್ದಾರೆ. ತಮ್ಮ ಸಂಬಂಧದ ಕಹಿ ಅನುಭವಗಳನ್ನು, ಇದೀಗ ಸಾಮಾಜಿಕ ಕಳಕಳಿಯೊಂದಿಗೆ ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದ್ದಾರೆ.

‘ಮಗಳಿಗೆ ಮದುವೆ ಆಚರಣೆ ಕಲಿಸಿದ್ದೇವೆ, ಹಕ್ಕುಗಳಲ್ಲ’
ಶ್ರೀದೇವಿ ತಮ್ಮ ಬರಹದ ಪ್ರಾರಂಭದಲ್ಲೇ ನೋವು ವ್ಯಕ್ತಪಡಿಸಿದ್ದಾರೆ. “ನಾವು ನಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಲು ಸಿದ್ಧಪಡಿಸುತ್ತೇವೆ. ಆದರೆ, ದುಃಖದ ಸಮಯದಲ್ಲಿ ಅವರ ಹಕ್ಕುಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಕಲಿಸಿಕೊಡುವುದಿಲ್ಲ. ನಾವು ಆಚರಣೆಗಳನ್ನು ಕಲಿಸಿದ್ದೇವೆ, ಹೋರಾಡುವುದನ್ನು ಅಲ್ಲ.” ತಾವು ಅನ್ಯಾಯ ಎದುರಿಸುತ್ತಿರುವ ಮಹಿಳೆಯರಿಗಾಗಿ ಎರಡು ಪ್ರಮುಖ ಸಂದೇಶಗಳನ್ನು ಅವರು ಮುಂದಿಟ್ಟಿದ್ದಾರೆ.

ಸಲಹೆ 1: ಸುಳ್ಳಾರೋಪ ಎದುರಿಸುವಾಗ ತಾಳ್ಮೆ ಕಳೆದುಕೊಳ್ಳಬೇಡಿ
ದಾಂಪತ್ಯದಲ್ಲಿ ಸುಳ್ಳು ಆರೋಪಗಳನ್ನು ಎದುರಿಸುತ್ತಿರುವ ಮಹಿಳೆಯರು ತಮ್ಮಲ್ಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಶ್ರೀದೇವಿ ಹೇಳಿದ್ದಾರೆ. “ಯಾವುದೇ ಆರೋಪವನ್ನು ಸಾಬೀತುಪಡಿಸಬೇಕಾದ ಜವಾಬ್ದಾರಿ ಆರೋಪಿಸುವವರದೇ ಹೊರತು ನಿಮ್ಮದಲ್ಲ. ಮಹಿಳೆಯರನ್ನು ಅವಮಾನಿಸುವುದು ಕೇವಲ ಅಗ್ಗದ ತಂತ್ರ ಮಾತ್ರ. ನ್ಯಾಯಾಲಯ ಕಥೆಗಳನ್ನಲ್ಲ, ಸಾಕ್ಷಿಗಳನ್ನಷ್ಟೇ ನಂಬುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಲಹೆ 2: ಸೋಶಿಯಲ್ ಮೀಡಿಯಾ ಒತ್ತಡಕ್ಕೆ ಮಣಿಯಬೇಡಿ
ತಮ್ಮ ಫೋಟೋಗಳನ್ನು ತೆಗೆದುಹಾಕುವಂತೆ ಒತ್ತಡ ಹೇರುವ ಪ್ರಸಂಗಗಳನ್ನು ಪ್ರಸ್ತಾಪಿಸಿರುವ ಶ್ರೀದೇವಿ, “ಮದುವೆಯಾದ ನಂತರ ಅಕ್ರಮ ಸಂಬಂಧ ಇಡುವುದು ಅಥವಾ ಸ್ವತಂತ್ರವಾಗಿ ಬೇರೆಯವರೊಂದಿಗೆ ಓಡಾಡುವುದು ಕಾನೂನುಬದ್ಧವಲ್ಲ” ಎಂದು ಹೇಳಿದ್ದಾರೆ. “ಪ್ರತಿಯೊಂದು ನೋವು ಗಾಯದ ರೂಪದಲ್ಲಿ ಕಾಣಿಸುವುದಿಲ್ಲ. ಪ್ರತಿಯೊಂದು ಮೌನಕ್ಕೂ ಒಂದು ಬೆಲೆ ಇರುತ್ತದೆ. ನಿಮ್ಮ ಮೇಲಿನ ನಂಬಿಕೆಯನ್ನು ಕಾಪಾಡಿಕೊಳ್ಳಿ” ಎಂದು ಅವರು ಹೇಳಿದ್ದಾರೆ.

ಸಮಾಜಕ್ಕೆ ಶ್ರೀದೇವಿ ಮನವಿ
ತಮ್ಮ ಬರಹದ ಕೊನೆಯ ಭಾಗದಲ್ಲಿ, ಶ್ರೀದೇವಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. “ನಮ್ಮ ಪೀಳಿಗೆಯೊಂದಿಗೇ ಈ ಅವಮಾನಗಳು ಕೊನೆಗೊಳ್ಳಬೇಕು. ನಮ್ಮ ಮುಂದಿನ ಹೆಣ್ಣುಮಕ್ಕಳಿಗೆ ಈ ಸಮಾಜ ಸುರಕ್ಷಿತವಾಗಿರಬೇಕು. ನಾವು ಮೌನವನ್ನು ಮುರಿಯುವಾಗಲೇ ಬದಲಾವಣೆ ಆರಂಭವಾಗುತ್ತದೆ.” ಇದೇ ವೇಳೆ, ಪತಿಯ ಜನ್ಮದಿನದಂದು ಹಳೆಯ ಸುಂದರ ಫೋಟೋವನ್ನು ಹಂಚಿಕೊಂಡಿದ್ದು, ಮಹಿಳೆಯರಿಗೆ ಸಂದೇಶವೊಂದನ್ನು ನೀಡಿದ್ದಾರೆ.

Exit mobile version