ಮೇ 12 ರಿಂದ ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ “ಸ್ನೇಹದ ಕಡಲಲ್ಲಿ”

ಪ್ರೀತಂ ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದ ಈ ಧಾರಾವಾಹಿಯ ಪ್ರಮುಖಪಾತ್ರಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್, ಚಂದು ಗೌಡ ಹಾಗೂ ಕಾವ್ಯ ಮಹದೇವ್ ನಟನೆ

Web 2025 05 09t102527.645

ಕನ್ನಡಿಗರಿಗೆ ಮನೋರಂಜನೆಯ ರಸದೌತಣ ನೀಡುತ್ತಿರುವ ಮನೋರಂಜನಾ ವಾಹಿನಿ‌ ಸ್ಟಾರ್ ಸುವರ್ಣದಲ್ಲಿ ಇದೇ ಸೋಮವಾರದಿಂದ ಹೊಚ್ಚ ಹೊಸ ಧಾರಾವಾಹಿ “ಸ್ನೇಹದ ಕಡಲಲ್ಲಿ” ಆರಂಭವಾಗಲಿದೆ. ಮೇ12 ರ ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಧಾರಾವಾಹಿ ತಂಡದ ಸದಸ್ಯರು ಮಾತನಾಡಿದರು.

ನಾನು 2003 ರಲ್ಲಿ ನನ್ನ ಜರ್ನಿ ಶುರು ಮಾಡಿದ್ದು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಎಂದು ಮಾತನಾಡಿದ ನಿರ್ದೇಶಕ ಪ್ರೀತಂ ಶೆಟ್ಟಿ, ಈಗ ಸ್ಟಾರ್ ಸುವರ್ಣ ವಾಹಿನಿಗಾಗಿ “ಸ್ನೇಹದ ಕಡಲಲ್ಲಿ” ಎಂಬ ಧಾರಾವಾಹಿ ನಿರ್ದೇಶಿಸುತ್ತಿದ್ದೇನೆ. ಅವಕಾಶ ನೀಡಿದ ಸ್ಟಾರ್ ಸುವರ್ಣ ವಾಹಿನಿಗೆ ಧನ್ಯವಾದ. ಇನ್ನೂ, ಈ ಧಾರಾವಾಹಿಯಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟ ಸುಮನ್ ತಲ್ವಾರ್ ಅವರು ಅಭಿನಯಿಸುತ್ತಿದ್ದಾರೆ. ಇದು ಸುಮನ್ ಅವರು ಅಭಿನಯಿಸುತ್ತಿರುವ ಮೊದಲ ಕನ್ನಡ ಧಾರಾವಾಹಿ ಕೂಡ. ಚಂದು ಗೌಡ ನಾಯಕನಾಗಿ ಕಾವ್ಯ ಮಹದೇವ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ADVERTISEMENT
ADVERTISEMENT

ಧಾರಾವಾಹಿಗಳಲ್ಲಿ ಒಂದು ಮದುವೆಯನ್ನು ಒಂದು ವಾರ ತೋರಿಸುತ್ತೀರಾ ಎಂಬ ಮಾತು‌ ಕೇಳಿ ಬರುತ್ತದೆ. ಆದರೆ ನಮ್ಮ ಧಾರಾವಾಹಿಯಲ್ಲಿ ಕೇವಲ ನಾಲ್ಕು ನಿಮಿಷಗಳಲ್ಲಿ ಮದುವೆ ಸನ್ನಿವೇಶ ಮುಕ್ತಾಯವಾಗುತ್ತದೆ. ಸಾಮಾನ್ಯವಾಗಿ ಧಾರಾವಾಹಿಗಳ ಹಿನ್ನೆಲೆ ಸಂಗೀತದಲ್ಲಿ ಸಿನಿಮಾ ಹಾಡುಗಳನ್ನು ಬಳಸಿಕೊಳ್ಳುವುದು ವಾಡಿಕೆ. ಆದರೆ ನಾವು ಹೊಸ ಹಾಡನ್ನು ಸಿದ್ದ ಮಾಡಿದ್ದೇವೆ‌. ಹೀಗೆ ಹಲವು ವಿಶೇಷಗಳಿರುವ ಈ ಧಾರಾವಾಹಿ ಇದೇ ಸೋಮವಾರದಿಂದ ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ. ನಮ್ಮ ಪಿಂಗಾರ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿದೆ ಎಂದರು.

ನಾನು ಚಿತ್ರರಂಗಕ್ಕೆ ಬಂದು 47 ವರ್ಷಗಳಾಯಿತು. ಕನ್ನಡ, ತಮಿಳು, ‌ತೆಲುಗು ಸೇರಿದಂತೆ 11 ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಧಾರಾವಾಹಿ ನಿರ್ದೇಶಕ ಪ್ರೀತಂ ಶೆಟ್ಟಿ ಅವರ ನಿರ್ದೇಶನದ ಚಿತ್ರದಲ್ಲೂ ನಟಿಸಿದ್ದೇನೆ. “ಸ್ನೇಹದ ಕಡಲಲ್ಲಿ” ನಾನು ನಟಿಸುತ್ತಿರುವ ಮೊದಲ ಕನ್ನಡ ಧಾರಾವಾಹಿ. ಈ ಧಾರಾವಾಹಿಯನ್ನು ಪ್ರೀತಂ ಶೆಟ್ಟಿ ಅವರೆ ನಿರ್ದೇಶಿಸುತ್ತಿದ್ದಾರೆ. ಕಥೆ ಇಷ್ಟವಾಯಿತು ಹಾಗೂ ಸ್ಟಾರ್ ಸುವರ್ಣ ವಾಹಿನಿ ಅವರು ಆಯ್ಕೆ ಮಾಡುವ ಕಂಟೆಂಟ್ ಉತ್ತಮವಾಗಿರುತ್ತದೆ. ಹಾಗಾಗಿ ನಾನು ಈ ಧಾರಾವಾಹಿಯಲ್ಲಿ ಅಭಿನಯಿಸಲು ಒಪ್ಪಿಕೊಂಡೆ ಎಂದು ನಟ ಸುಮನ್ ತಲ್ವಾರ್ ತಿಳಿಸಿದರು.

ನಾನು ಕಿರುತೆರೆಗೆ ಬಂದು ಸುಮಾರು ಹನ್ನೊಂದು ವರ್ಷಗಳಾಯಿತು. ಆನಂತರ ಕೆಲವು ಚಿತ್ರಗಳಲ್ಲೂ ನಟಿಸಿದ್ದೇನೆ. ನನಗೆ ಸಿನಿಮಾದಲ್ಲಿ ಹಾಗೂ ಧಾರಾವಾಹಿಯಲ್ಲಿ ನಟಿಸುವುದು ಎರಡೂ ಒಂದೇ. ಇನ್ನೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪ್ರೀತಂ ಶೆಟ್ಟಿ ನಿರ್ದೇಶನದ “ಸ್ನೇಹದ ಕಡಲಲ್ಲಿ” ಧಾರವಾಹಿಯ ಕಥೆ ತುಂಬಾ ಚೆನ್ನಾಗಿದೆ. ಸ್ಟಾರ್ ಸುವರ್ಣ ವಾಹಿನಿ ಅವರು ಒಳ್ಳೆಯ ಕಂಟೆಂಟ್ ಮೇಲೆ ಹೆಚ್ಚು ಗಮನ ಕೊಡುತ್ತಾರೆ. ನಿಮಗೆ 30 ನಿಮಿಷದ ಸಂಚಿಕೆ ನೋಡಿದರೂ, ಒಂದು ಸಿನಿಮಾ ನೋಡಿದ ಅನುಭವ ಆಗುತ್ತದೆ. ಶಿವರಾಜ್ ಅರಸ್ ನನ್ನ ಪಾತ್ರದ ಹೆಸರು. ದಕ್ಷಿಣ ಭಾರತದ ಖ್ಯಾತ ನಟ ಸುಮನ್ ಅವರು ಈ ಧಾರಾವಾಹಿಯಲ್ಲಿ ನನ್ನ ತಂದೆ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸವಾಗಿದೆ ಎನ್ನುತ್ತಾರೆ ನಟ ಚಂದು ಗೌಡ.

ನಾಯಕಿ ಪಾತ್ರ ನಿರ್ವಹಿಸುತ್ತಿರುವ ಕಾವ್ಯ ಮಹದೇವ್ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟಿ ಹೇಮ ಬೆಳ್ಳೂರು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Exit mobile version