ನಮ್ಮ ಚಲನಚಿತ್ರೋದ್ಯಮ ಎಲ್ಲರಿಗೂ ಅವಕಾಶ ಕೊಡುತ್ತೆ. ನಿಜವಾಗಿ ಸಾಧನೆ ಮಾಡಬೇಕೆಂದು ಇಲ್ಲಿಗೆ ಬಂದವರು ಚಿತ್ರರಂಗವನ್ನು ತನ್ನ ತಾಯಿ ಎಂದು ಭಾವಿಸುತ್ತಾರೆ. ಕಲಾಮಾತೆ ಎಂದು ಆರಾಧಿಸುತ್ತಾರೆ. ಇನ್ನು ಕೆಲವರು ಬರೀ ಶೋಕಿಗಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ತನ್ನ ಹಿರಿಯರು, ಅಪ್ಪ, ಅಮ್ಮ ಕಷ್ಟಪಟ್ಟು ಕೂಡಿಟ್ಟ ಸಂಪಾದನೆಯ ಹಣವನ್ನು ವ್ಯಯಿಸುತ್ತಾರೆ. ಕಲಾಮಾತೆಯನ್ನು ಹಗುರವಾಗಿ ನೋಡುತ್ತಾರೆ.
ಇಂಥವರಿಂದಾಗಿ ಚಿತ್ರರಂಗ ಅಧೋಗತಿಗೆ ಇಳಿಯುತ್ತಿದೆ. ಇದನ್ನು ಮಟ್ಟ ಹಾಕಲು ಕಲಾಮಾತೆಯ ನಿಜವಾದ ಆರಾದಕನೊಬ್ಬ ಏನೆಲ್ಲಾ ಮಾಡುತ್ತಾನೆ, ಅಂಥವರಿಗೆ ಹೇಗೆ ಬದ್ದಿ ಕಲೊಸುತ್ತಾನೆ ಎಂಬ ಕಥಾಹಂದರ ಒಳಗೊಂಡ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ಆ ಚಿತ್ರದ ಹೆಸರು ‘ಶಿಲ್ಪಾ ಶ್ರೀನಿವಾಸ್. ಇತ್ತೀಚೆಗೆ ಈ ಚಿತ್ರಕ್ಕೆ ಹೊಸಕೊಟೆಯ ಗಟ್ಟಿಗನಬ್ಬೆ ಯಲ್ಲಿ ಚಾಲನೆ ದೊರೆಯಿತು. ನಟ, ಸಂಕಲನಕಾರ ನಾಗೇಂದ್ರ ಅರಸ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಈ ಚಿತ್ರದಲ್ಲಿ ಹಿರಿಯ ನಿರ್ಮಾಪಕರೂ ವಿತರಕರೂ ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆದ ಶಿಲ್ಪಾ ಶ್ರೀನಿವಾಸ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಮುಗಿಲ ಮಲ್ಲಿಗೆ ಸಿನಿಮಾದ ನಿರ್ದೇಶಕ ಆರ್ .ಕೆ. ಗಾಂಧಿ ಅವರು ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆ.
ಅನಿರುದ್ಧ ಶಾಸ್ತ್ರಿಅವರ ಸಂಗೀತ, ಪ್ರತಾಪ್ ಭಟ್ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಅವರ ಸಾಹಸ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ನಾಗೇಂದ್ರ ಅರಸ್ ಅವರ ಸಂಕಲನ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಕಾರ್ಜನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯಾಂಕ, ಮಾಸ್ಟರ್ ಮನ್ವಿತ್, ಮಾಸ್ಟರ್ ಅಬ್ಯಂತ್, ಶೋಭರಾಜ್, ನಾಗೇಂದ್ರ ಅರಸ್, ಕಿರಣ್ ಕುಮಾರ್ ಗಟ್ಟಿಗನಬ್ಬೆ, ಸಿ.ಟಿ. ಜಯರಾಮ್, ಹೋಸಕೋಟೆ ಶಿವಕುಮಾರ್, ಲೋಕೇಶ್, ಮಾಸ್ಟರ್ ಮನ್ವಿತ್, ಮಾಸ್ಟರ್ ಅಬ್ಯಂತ್ ಮೊದಲಾದವರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಹೊಸಕೋಟೆ, ಚಿಕ್ಕಬಳ್ಳಾಪುರ ಅಲ್ಲದೆ ಬೆಂಗಳೂರಿನ ಗಾಂಧಿನಗರದಲ್ಲಿ ಒಟ್ಟು ಎರಡು ಹಂತಗಳಲ್ಲಿ ಶಿಲ್ಪಾ ಶ್ರೀನಿವಾಸ್ ಚಿತ್ರದ ಚಿತ್ರೀಕರಣ ನಡೆಯಲಿದೆ.