ಶಾರೂಖ್ ಅದೇ ಗಿಮಿಕ್.. ಪುಷ್ಪ ಡೈರೆಕ್ಟರ್‌ಗೆ ಬಿಗ್ ಬಕೆಟ್

ಅಂದು ಅಟ್ಲೀ.. ಇಂದು ಸುಕುಮಾರ್.. ಕಿಲಾಡಿ ಖಾನ್..!

Untitled design 2025 06 18t185525.422

ಗೆಲ್ಲೋಕೆ ಅಂತ ಬಾಲಿವುಡ್ ಬಾದ್‌ಷಾ ಮಾಡಿಕೊಂಡಿರೋ ಸ್ಟ್ರ್ಯಾಟಜಿ ವರ್ಕೌಟ್ ಆಗಿದೆ. ಅದೇ ಕಾರಣದಿಂದ ಈಗಲೂ ಅದೇ ಗಿಮಿಕ್‌ಗಳನ್ನ ಮಾಡೋಕೆ ಮುಂದಾಗ್ತಿದ್ದಾರೆ ಕಿಂಗ್ ಖಾನ್. ಸದ್ಯ ಪುಷ್ಪ ಡೈರೆಕ್ಟರ್ ಸುಕುಮಾರ್‌ಗೆ ಗಾಳ ಹಾಕಿರೋ ಶಾರೂಖ್ ಪ್ಲ್ಯಾನ್ ಇಲ್ಲಿದೆ.

ಶಾರುಖ್ ಖಾನ್.. ಬಾಲಿವುಡ್ ಸೂಪರ್ ಸ್ಟಾರ್‌ಗಳಲ್ಲೇ ಬೃಹತ್ ಕಿಲಾಡಿ, ಭಲೇ ಚತುರ. ಒಳ್ಳೆಯ ಕಲಾವಿದ, ಸ್ಫುರದ್ರೂಪಿ ನಟ, ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋ ನಟ. ಇದರಲ್ಲಿ ಯಾವುದೇ ಡೌಟ್ ಇಲ್ಲ. ಹಾಗಂತ ಈತ ಮಾಡಿದ ಎಲ್ಲಾ ಸಿನಿಮಾಗಳು ಗೆದ್ದಿಲ್ಲ. ಗೆಲ್ಲೋಕೆ ಸಾಧ್ಯವೂ ಇಲ್ಲ. ಅದೇ ಕಾರಣದಿಂದ ಬ್ಯಾಕ್ ಟು ಬ್ಯಾಕ್ ಸರಣಿ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದರು ಬಾಲಿವುಡ್ ಬಾದ್‌ಷಾ.

ADVERTISEMENT
ADVERTISEMENT

ಕೊರೋನಾ ಸಮಯದಲ್ಲಿ ಪಠಾಣ್ ಹಾಗೂ ಜವಾನ್ ಅನ್ನೋ ಎರಡೂ ಸಿನಿಮಾಗಳು ಶಾರೂಖ್‌ಗೆ ಕೈ ಹಿಡಿದವು. ಇನ್ ಫ್ಯಾಕ್ಟ್ ಬಾಲಿವುಡ್‌ನ ಕೈ ಹಿಡಿದು, ಮಾನ ಕಾಪಾಡಿದ್ದೇ ಈ ಎರಡು ಚಿತ್ರಗಳು. ಹೌದು.. ಸೌತ್ ಸಿನಿಮಾಗಳ ಹಾವಳಿಯಿಂದ ಬಾಲಿವುಡ್ ಅಕ್ಷರಶಃ ಪ್ರಪಾತಕ್ಕೆ ಬಿದ್ದಿತ್ತು. ಸೌತ್ ಸಿನಿಮಾಗಳ ಕಥೆ, ಮೇಕಿಂಗ್‌ಗೆ ಹಿಂದಿ ಚಿತ್ರಪ್ರೇಮಿಗಳು ಕೂಡ ಫಿದಾ ಆಗಿದ್ರು. ಹಾಗಾಗಿಯೇ ಪಠಾಣ್ ಹಾಗೂ ಜವಾನ್ ಒಂಥರಾ ಬಾಲಿವುಡ್‌ಗೆ ಬೂಸ್ಟರ್ ಡೋಸ್ ಆದವು.

ಎರಡೂ ಚಿತ್ರಗಳು ತಲಾ ಸಾವಿರಾರು ಕೋಟಿ ಕಲೆಕ್ಷನ್ ಮಾಡೋ ಮೂಲಕ ಶಾರೂಖ್ ಗತ ವೈಭವವನ್ನು ವಾಪಸ್ ತಂದುಕೊಟ್ಟವು. ನಂತರ ಬಂದಂತಹ ಡಂಕಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಡುಮ್ಕಿ ಹೊಡೆದಿದೆ. ಅಂದಹಾಗೆ ಕಿಂಗ್ ಅನ್ನೋ ಸಿನಿಮಾ ಮಾಡ್ತಿರೋ ಶಾರೂಖ್, ಅದರ ಮೂಲಕ ಮಗಳನ್ನ ದೊಡ್ಡ ಮಟ್ಟಕ್ಕೆ ಬಿಟೌನ್‌‌ನಲ್ಲಿ ಲಾಂಚ್ ಮಾಡ್ತಿದ್ದಾರೆ. ಪಠಾಣ್ ಡೈರೆಕ್ಟರ್ ಸಿದ್ದಾರ್ಥ್ ಆನಂದ್ ಜೊತೆ ಮಗದೊಮ್ಮೆ ಮೋಡಿ ಮಾಡ್ತಿರೋ ಶಾರೂಖ್‌ಗೆ ತನ್ನದೇ ಟೈಟಲ್ ಸಿನಿಮಾ ಕೈ ಹಿಡಿಯುತ್ತಾ ಅನ್ನೋದು ಕಾದು ನೋಡಬೇಕಿದೆ.

ಈ ಮಧ್ಯೆ ಮತ್ತೊಬ್ಬ ಸೌತ್ ಡೈರೆಕ್ಟರ್‌ಗೆ ಗಾಳ ಹಾಕಿದ್ದಾರೆ ಖಾನ್. ಹೌದು.. ತಮಿಳಿನ ಅಟ್ಲೀ ಮೂಲಕ ಜವಾನ್ ಸಿನಿಮಾ ಸಾವಿರ ಕೋಟಿ ಕಲೆಕ್ಷನ್ ಮಾಡಿತ್ತು. ಹಾಗಾಗಿ ಮತ್ತೆ ಅದೇ ಗಿಮಿಕ್ ಮಾಡೋಕೆ ಸಜ್ಜಾಗಿದ್ದಾರೆ. ಕಳೆದ ವರ್ಷ ಪುಷ್ಪ-2 ಸಿನಿಮಾದಿಂದ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದ್ದ ಟಾಲಿವುಡ್‌ನ ಸುಕುಮಾರ್‌ಗೆ ತನಗೊಂದು ಚಿತ್ರ ಮಾಡಿಕೊಡುವಂತೆ ಹಿಂದೆ ಬಿದ್ದಿದ್ದಾರಂತೆ ಖಾನ್.

ಆರ್ಯ, ಆರ್ಯ-2, ರಂಗಸ್ಥಳಂ, ಪುಷ್ಪ, ಪುಷ್ಪ-2 ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಕ್ಸಸ್‌‌ಫುಲ್ ಸಿನಿಮಾಗಳನ್ನ ಕೊಡ್ತಾ ಬರ್ತಿರೋ ಸುಕುಮಾರ್‌ಗೆ ದುಂಬಾಲು ಬಿದ್ದಿರೋದು ಇಂಟರೆಸ್ಟಿಂಗ್. ಆದ್ರೆ ಪುಷ್ಪ-2 ಬಳಿಕ ಸುಕುಮಾರ್ ಈಗಾಗ್ಲೇ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾಗೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಂಗಸ್ಥಳಂ ಚಿತ್ರದ ಬಳಿಕ ಸುಕುಮಾರ್-ಚರಣ್ ಮಗದೊಮ್ಮೆ ಪ್ರೇಕ್ಷಕರನ್ನ ರಂಜಿಸೋಕೆ ಸಜ್ಜಾಗಿದ್ದಾರೆ. ಅದರ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳೋಕೆ ನೋಡ್ತಿರೋ ಖಾನ್‌‌ಗೆ ನಿಜಕ್ಕೂ ಸುಕುಮಾರ್ ಡೇಟ್ಸ್ ಕೊಡ್ತಾರಾ ಅನ್ನೋದು ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version