ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪನಿಪಾಳ್ಯ ನಿರ್ದೇಶನದ, ಹಿತ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಎಲ್ಲರ ಕೈಯಲ್ಲೂ ನಾನೇ ಸ್ವಾಮಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಿನಿಮಾದ ಟ್ರೇಲರ್ ಕುತೂಹಲ ಮೂಡಿಸಿದ್ದು, ಚಿತ್ರ ಜುಲೈ 17 ರಂದು ತೆರೆ ಮೇಲೆ ಬರಲಿದೆ. ಈ ಚಿತ್ರಕ್ಕೆ ನಿರ್ದೇಶಕ ಹಾಗು ಗೀತರಚನೆಕಾರ ಕೆ.ರಾಮ್ ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ. ಟ್ರೇಲರ್ ಅನಾವರಣ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಿರ್ದೇಶಕ ಹಾಗೂ ನಟ ರಂಗಸ್ವಾಮಿ ಕಪನಿಪಾಳ್ಯ ಮಾತನಾಡಿ, “ಸರ್ವಾಂತರ್ಯಾಮಿ”, ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಮೊಬೈಲ್ ನಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಜನರ ಮುಂದೆ ತಂದಿಡುವ ಚಿತ್ರವೂ ಹೌದು. ಸಿನಿಮಾಗಳಿಗಾದರೆ ಸೆನ್ಸಾರ್ ಇದೆ. ಈ ಚಿತ್ರ ಮಕ್ಕಳು ನೋಡಬಹುದು. ನೋಡಬಾರದು ಅಂತ ಸೆನ್ಸಾರ್ ಮಂಡಳಿಯವರು ತೀರ್ಮಾನ ಮಾಡುತ್ತಾರೆ. ಆದರೆ ಈ ನಿರ್ಬಂಧ ಮೊಬೈಲ್ ಗಿಲ್ಲ. ಅದರಿಂದ ಹೆಚ್ಚಿನ ಮಕ್ಕಳ ಜೀವನ ಹಾಳಾಗುತ್ತಿದೆ. ಮಕ್ಕಳು ಮಾತ್ರವಲ್ಲದೆ, ದೊಡ್ಡವರ ಮೇಲೂ ಇದರ ಪರಿಣಾಮ ಸಾಕಷ್ಟಿದೆ. ಹಾಗಾಗಿ ಕೆಲವು ಕಡೆ ಸ್ಮಾರ್ಟ್ ಫೋನ್ ಬಳಸದೆ, ಕೀ ಪ್ಯಾಡ್ ಮೊಬೈಲ್ ಬಳಸಲು ನಿರ್ಧಾರ ಮಾಡಿದ್ದಾರೆ. ಇನ್ನೂ, ಕೆಲವು ಕಡೆ ಮೊಬೈಲ್ ನೋಡಲು ಸಮಯ ನಿಗದಿ ಮಾಡಿಕೊಂಡಿದ್ದಾರೆ. ಇಂತಹ ನಿರ್ಧಾರಗಳು ಎಲ್ಲಾ ಕಡೆ ಜಾರಿಯಾಗಲಿ. ಇದೇ ನಮ್ಮ ಚಿತ್ರದ ಮುಖ್ಯ ಕಥಾವಸ್ತು. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಜುಲೈ 17 ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ನಿರ್ಮಾಪಕಿ ಹಿತಾ ಆರ್ ಗೌಡ ಮಾತನಾಡಿ, ರಂಗಭೂಮಿ ಒಲವು ಅಪ್ಪನ ಮೇಲೆ ಇತ್ತು, ಅಪ್ಪ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು
ಇದು ನನ್ನ ಅಭಿನಯದ 65 ನೇ ಚಿತ್ರ. ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಾಲ್ಕನೇ ಚಿತ್ರ. ಇದೊಂದು ಅಪ್ಪ – ಮಗಳ ಬಾಂಧವ್ಯದ ಚಿತ್ರವೂ ಹೌದು. ನಾನು ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರಂಗಸ್ವಾಮಿ ಅವರು ಒಂದೊಳ್ಳೆ ಕಥೆ ಮಾಡಿದ್ದಾರೆ ಎಂದು ನಟ ಆಟೋ ನಾಗರಾಜ್ ಹೇಳಿದರು.
ಚಿತ್ರದಲ್ಲಿ ನಟಿಸಿರುವ ತೇಜಸ್ವಿನಿ, ಮೈರಾ, ಅಮೂಲ್ಯ ನಾರಾಯಣ್, ಸೂರ್ಯ ಪ್ರವೀಣ್, ಸಂಜನಾ, ಉಮೇಶ್ ಸಕ್ಕರೆನಾಡು, ಉಮೇಶ್ ಪುಂಗ, ಪೃಥ್ವಿರಾಜ್, ನಾಗೇಶ್ ಮುಂತಾದವರು ಹಾಗೂ ಚಿತ್ರದ ತಂತ್ರಜ್ಞರು ಕುರಿತು ಮಾಹಿತಿ ಹಂಚಿಕೊಂಡರು. ಟ್ರೇಲರ್ ಬಿಡುಗಡೆಗೂ ಮುನ್ನ ರಮೇಶ್ ಕೃಷ್ಣ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳ ಪ್ರದರ್ಶಿಸಲಾಯಿತು. ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಹಾಗೂ ದೀಪು ಎಸ್ ಸಂಕಲನ ಈ ಚಿತ್ರಕ್ಕಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಟರಾದ ಶ್ರೀಮುರಳಿ ಹಾಗೂ ನೀನಾಸಂ ಸತೀಶ್ “ಸರ್ವಾಂತರ್ಯಾಮಿ” ಚಿತ್ರದ ಟ್ರೇಲರ್ ನೋಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
