ತಮಿಳಿಗೆ ಕರುಪ್ಪು..ಮಲಯಾಳಂಗೆ ದೃಶ್ಯಂ-3..ಕನ್ನಡಕ್ಕೆ ಯಾರು ಗುರು ಅನ್ನೋ ಪ್ರಶ್ನೆ ಚಿತ್ರರಂಗವನ್ನ ಬಹಳ ಕಾಡ್ತಿದೆ. ಸ್ಯಾಂಡಲ್ವುಡ್ ಸಿಕ್ಕಾಪಟ್ಟೆ ಮಂಕಾಗಿಬಿಟ್ಟಿದೆ. ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ, ಇಂಡಸ್ಟ್ರಿ ಅಕ್ಷರಶಃ ಮಂಕಾಗಿದೆ. ಇದು ಯಾರ ಜವಾಬ್ದಾರಿ..? ಇದರ ನೈತಿಕ ಹೊಣೆ ಹೊರಬೇಕಾದವರು ಯಾರು..?
ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ ಕನ್ನಡ ಚಿತ್ರರಂಗ ಬಿಕೋ ಅನ್ನುತ್ತಿದೆ. ಒಂದ್ಕಡೆ ಥಿಯೇಟರ್ಗಳಿಗೆ ಒಳ್ಳೆಯ ಸಿನಿಮಾಗಳಿಲ್ಲ. ಮತ್ತೊಂದ್ಕಡೆ ಜನ ಥಿಯೇಟರ್ಗೆ ಬರ್ತಿಲ್ಲ. ಹೀಗಿರುವಾಗ ಚಿತ್ರರಂಗದ ಏಳಿಗೆ ಹೇಗೆ ನೀವೇ ಹೇಳಿ. ಅಂದಹಾಗೆ ಪಕ್ಕದ ತಮಿಳು ಚಿತ್ರರಂಗದಲ್ಲಿ ಸೂರ್ಯ ನಟನೆಯ ಕರುಪ್ಪು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಮಲಯಾಳಂನಲ್ಲಿ ಮೋಹನ್ಲಾಲ್ರ ದೃಶ್ಯಂ-3 ಸೂಪರ್ ಹಿಟ್ ಆಗಿದೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದಾದ್ರೂ ಹಿಟ್ ಬೇಡ್ವಾ..?
ತಮಿಳಿಗೆ ಕರುಪ್ಪು..ಮಲಯಾಳಂಗೆ ದೃಶ್ಯಂ3..ಕನ್ನಡಕ್ಕೆ..?!
ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ ಇಂಡಸ್ಟ್ರಿ ಬಿಕೋ
ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾ ಮಾಡಿದ ಸುದೀಪ್ ರೆಸ್ಟ್ ಮೋಡ್ಗೆ ಹೋಗಿಬಿಟ್ರು. ಅಪ್ಪು ಹೋದ ಮೇಲೆ ಆ ಸ್ಥಾನ ತುಂಬುವ ಮತ್ತೊಬ್ಬ ಸ್ಟಾರ್ ಬರಲೇ ಇಲ್ಲ. ಡಿಬಾಸ್ ದರ್ಶನ್ ಕೊಲೆ ಕೇಸ್ನಲ್ಲಿ ಒಳಕ್ಕೆ ಹೋಗಿಬಿಟ್ರು. ರಕ್ಷಿತ್ ಶೆಟ್ಟಿ ಅಜ್ಞಾತವಾಸದಲ್ಲಿದ್ದಾರೆ. ಯಶ್ ಹಾಗೂ ರಿಷಬ್ ಶೆಟ್ಟಿ ಚಿತ್ತ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸಿನಿಮಾಗಳು. ಆದ್ರೆ ನಮ್ಮ ಕನ್ನಡ ಚಿತ್ರೋದ್ಯಮದ ಕಥೆ ಏನಾಗಬೇಕು..? ಪಾತಾಳಕ್ಕೆ ಕುಸಿದಿರೋ ಸ್ಯಾಂಡಲ್ವುಡ್ನ ಲಿಫ್ಟ್ ಮಾಡಬೇಕಿರೋದು ಯಾರು..? ಇದರ ನೈತಿಕ ಹೊಣೆ ಯಾರು ಹೊರಬೇಕು..? ಹೀಗೇ ಆದಲ್ಲಿ ಕನ್ನಡ ಚಿತ್ರರಂಗ ಇತಿಹಾಸದ ಪುಟಗಳು ಸೇರಿದ್ರೂ ಅಚ್ಚರಿಯಿಲ್ಲ.
ಸಾವನ್ನೇ ಗೆದ್ದು ಬಂದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಇನ್ನೆಷ್ಟು ಸಿನಿಮಾ ಮಾಡಬೇಕು. ಅವರಿಗಿರೋ ಉತ್ಸಾಹ ಉಳಿದವರಲ್ಲಿ ಇಲ್ಲವೇಕೆ..? ಈ ಇಳಿವಯಸ್ಸಿನಲ್ಲಿ ಅವರು ಕನ್ನಡ ಅಲ್ಲದೆ ಪರಭಾಷೆಗಳಲ್ಲೂ ಮಿಂಚು ಹರಿಸುತ್ತಿದ್ದಾರೆ. ದುನಿಯಾ ವಿಜಯ್ ತಮ್ಮ ಮಕ್ಕಳನ್ನ ಲಾಂಚ್ ಮಾಡೋದ್ರ ಮೂಲಕ ನಟನೆ, ನಿರ್ದೇಶನದಲ್ಲಿ ತೊಡಗಿಸಿಕೊಂಡು ಬ್ಯುಸಿ ಆಗಿದ್ದಾರೆ. ಧ್ರುವ ಸರ್ಜಾ ಮಾಡಿದ ಸಿನಿಮಾಗಳು ಜನಕ್ಕೆ ರುಚಿಸುತ್ತಿಲ್ಲ. ಗಣೇಶ್ ಸಿನಿಮಾಗಳು ಬೇಗ ತೆರೆಗೆ ಬರ್ತಿಲ್ಲ. ಡಾಲಿಗೆ ಹಿಟ್ ಸಿಕ್ಕಿ ವರ್ಷಗಳೇ ಕಳೆಯಿತು. ಉಪೇಂದ್ರ ಪ್ರಜಾಕೀಯದಲ್ಲಿ ಬ್ಯುಸಿ. ಸೋ.. ಮುಂದೆ ಗತಿ ಏನು..? ಈ ಸತ್ಯವನ್ನ ನಾವೆಲ್ಲಾ ಒಪ್ಪಿಕೊಳ್ಳಲೇಬೇಕಿದೆ.
ಅಧಃಪತನದತ್ತ ಚಿತ್ರೋದ್ಯಮ..ನೈತಿಕ ಹೊಣೆ ಯಾರದ್ದು..?
ಅಪ್ಪು ಹೋದ್ರು..ದಚ್ಚು ಒಳಗೋದ್ರು..ರಕ್ಷಿತ್ ಅಜ್ಞಾತವಾಸ
ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದ ಸ್ಟಾರ್ಗಳು ನಿಜಕ್ಕೂ ನಮ್ಮ ಸ್ಯಾಂಡಲ್ವುಡ್ನ ಪ್ರಪಾತಕ್ಕೆ ತಳ್ಳುತ್ತಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಜೋಗಿ ಪ್ರೇಮ್, ಬಹದ್ದೂರ್ ಚೇತನ್, ಪವನ್ ಒಡೆಯರ್, ಎಪಿ ಅರ್ಜುನ್, ಸಂತೋಷ್ ಆನಂದ್ರಾಮ್, ಶಶಾಂಕ್, ನರ್ತನ್ ಅಂತಹ ಡೈರೆಕ್ಟರ್ಗಳು ಒಳ್ಳೆಯ ಕಂಟೆಂಟ್ ಮೇಲೆ ಫೋಕಸ್ ಮಾಡಬೇಕಿದೆ. ಕಥೆ ಗಟ್ಟಿಯಾಗಿದ್ರೆ ಸಿನಿಮಾ ಕೂಡ ಚೆನ್ನಾಗಿರಲಿದೆ. ಮಲಯಾಳಂ ಸಿನಿಮಾಗಳನ್ನ ನೋಡಿ ಆಹಾ ಓಹೋ ಅಂತ ಕೇಕೆ ಹಾಕುವ ನಾವುಗಳು ಏನು ಮಾಡ್ತಿದ್ದೀವಿ ಅನ್ನೋದ್ರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ನಿರ್ಮಾಪಕರು ಅಕ್ಷರಶಃ ಸಿನಿಮಾಗಳಿಗೆ ಬಂಡವಾಳ ಹಾಕೋಕೆ ಮುಂದೆ ಬರ್ತಿಲ್ಲ. ಕೆವಿಎನ್ ಅಂತಹ ಬಿಗ್ ಬ್ಯಾನರ್ಗೇ ಹಿಟ್ಸ್ ಸಿಗ್ತಿಲ್ಲ. ಕೆಜಿಎಫ್, ಕಾಂತಾರ ಬಳಿಕ ಹೊಂಬಾಳೆ ಕೂಡ ಸೈಲೆಂಟ್ ಆಗಿ ಬಿಟ್ಟಿದೆ. ಸಣ್ಣ ಬಜೆಟ್ ಸಿನಿಮಾಗಳ ಸಕ್ಸಸ್ ರೇಟ್ ತೀರಾ ಕಡಿಮೆ. ನಮ್ಮಲ್ಲಿ ಬರವಣಿಗೆ ಕೊರತೆಯಾ..? ಕಥೆಗಳ ಕೊರತೆಯಾ..? ಸಿನಿಮಾ ಮಾಡುವ ನಿರ್ದೇಶಕ, ನಿರ್ಮಾಪಕ ಹಾಗೂ ಸ್ಟಾರ್ಗಳ ಮನಸ್ಥಿತಿ ಬದಲಾಗಬೇಕಾ..? ಒಂದೂ ತಿಳಿಯುತ್ತಿಲ್ಲ. ಇದು ಹೀಗೆಯೇ ಮುಂದುವರೆದಲ್ಲಿ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಚಂದನವನ. ಈ ಮಹತ್ವದ ಸಮಸ್ಯೆಯಿಂದ ಸ್ಯಾಂಡಲ್ವುಡ್ನ ಯಾರು ಪಾರು ಮಾಡ್ತಾರೆ..? ಹೇಗೆ ದಡ ಸೇರಿಸ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
