ಇಂಡೋ-ಪಾಕ್ ಯುದ್ಧಗಳ ಮೇಲೆ ತಯಾರಾಗಿರೋ ಒಂದೊಂದು ಸಿನಿಮಾ ಕೂಡ ಒಂದೊಂದು ಮುತ್ತು. ಮಾಸ್ಟರ್ಪೀಸ್ ಸಿನಿಮಾಗಳಾಗಿ ಇತಿಹಾಸ ಸೃಷ್ಟಿಸಿರೋ ಅವುಗಳ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೇನೇ. ಆ ರೋಚಕ ಘಟನೆಗಳನ್ನ ತೆರೆಗೆ ತರೋಕೆ ಡೈರೆಕ್ಟರ್ಸ್ ಮಾಡಿದ ಸಂಶೋಧನೆ, ತಯಾರಿಕೆ, ನಟರುಗಳ ಹಾರ್ಡ್ವರ್ಕ್, ಡೆಡಿಕೇಷನ್ ನಿಜಕ್ಕೂ ಗ್ರೇಟ್. ಮತ್ತಷ್ಟು ರಿಯಲ್ ಹೀರೋಗಳ ರಿಯಲ್ ಕಥೆಗಳ ಚಿತ್ರಣ ನಿಮಗಾಗಿ ಕಾಯ್ತಿದೆ..
2021ರಲ್ಲಿ ರಿಲೀಸ್ ಆದ ಬಯೋಗ್ರಫಿಕಲ್ ವಾರ್ ಸಿನಿಮಾ ಶೇರ್ ಶಾ. 1999ರ ಜುಲೈ 7ರಂದು ಕಾರ್ಗಿಲ್ ಯುದ್ಧದಲ್ಲಿ ಮಡಿದ ಪರಮವೀರ ಚಕ್ರ ವಿಜೇತ ಇಂಡಿಯನ್ ಆರ್ಮಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಕುರಿತ ನೈಜ ಘಟನೆ ಆಧಾರಿತ ಬಯೋಪಿಕ್. ವಿಷ್ಣುವರ್ಧನ್ ನಿರ್ದೇಶನದ ಈ ಸಿನಿಮಾದಲ್ಲಿ ವಿಕ್ರಮ್ ಬಾತ್ರಾ ಪಾತ್ರಕ್ಕೆ ಜೀವ ತುಂಬಿದ್ದು ಸಿದ್ದಾರ್ಥ್ ಮಲ್ಹೋತ್ರ. ಕೊರೋನಾದಿಂದಾಗಿ ಡೈರೆಕ್ಟ್ ಅಮೆಜಾನ್ಗೆ ಬಂದ ಈ ಸಿನಿಮಾಗೆ ಅಭೂತಪೂರ್ವ ಪ್ರಶಂಸೆ ಸಿಕ್ಕಿತ್ತು.
ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು, ಕಾರ್ಗಿಲ್ ಶಿಖರಗಳನ್ನ ಏರಿ, ನೂರಾರು ಮಂದಿ ಪಾಕ್ ಸೈನಿಕರನ್ನ ಹೊಡೆದುರುಳಿಸಿದ ಯೋಧನಾಗಿ ಅಬ್ಬರಿಸಿದ್ದರು. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡುಗರ ಕಣ್ಣಲ್ಲಿ ನೀರು ತರಿಸಿತ್ತು.
ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ಅಟ್ಯಾಕ್ ವೇಳೆ ಹುಲಿಯಂತೆ ಹೋಟೆಲ್ ಒಳಗೆ ನುಗ್ಗಿ, ಉಗ್ರರಿಗೆ ಮುಕ್ತಿ ಕಲ್ಪಿಸಿ, ಕೊನೆಗೆ 2008ರ ನವೆಂಬರ್ 28ರಂದು ತಾನೂ ಕೊನೆಯುಸಿರೆಳೆದ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಕುರಿತ ಸಿನಿಮಾ ಮೇಜರ್. ಅಡವಿ ಶೇಶ್ ನಮ್ಮ ಬೆಂಗಳೂರಿನ ಯಲಹಂಕ ಮೂಲದ ಸಂದೀಪ್ ಉನ್ನಿ ಕೃಷ್ಣನ್ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಈ ಸಿನಿಮಾ 26/11 ಅಟ್ಯಾಕ್ನ ಕಣ್ಣಿಗೆ ಕಟ್ಟಿದಂತೆ ಎಳೆ ಎಳೆಯಾಗಿ ಬಿಚ್ಚಿಡೋ ಕಾರ್ಯ ಮಾಡಿತ್ತು. ಈ ಬಯೋಪಿಕ್ಗೆ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿತ್ತು.
ಗುಜರಾತ್ನ ಕಚ್ನಲ್ಲಿರೋ ಭುಜ್ ಏರ್ಬೇಸ್ ಮೇಲೆ 1971ರ ಇಂಡೋ-ಪಾಕ್ ವಾರ್ ವೇಳೆ ಪಾಕಿಸ್ತಾನ್ ಆರ್ಮಿ ದಾಳಿ ನಡೆಸುತ್ತೆ. ಅದಕ್ಕೆ ಪ್ರತಿದಾಳಿ ನಡೆಸಲು ರನ್ವೇ ಇಲ್ಲದಂತೆ ನಾಶ ಮಾಡಲು ಮುಂದಾಗುವ ಪಾಕಿಗಳ ವಿರುದ್ದ ಒಬ್ಬೇ ಒಬ್ಬ ಇಂಡಿಯನ್ ಆರ್ಮಿ ಆಫೀಸರ್ ದಿಟ್ಟವಾಗಿ ನಿಂತುಕೊಳ್ತಾರೆ. ಸ್ಕ್ವ್ಯಾಡ್ರನ್ ಲೀಡರ್ ವಿಜಯ್ ಕಾರ್ಣಿಕ್, ಅಂದು ಅಲ್ಲಿನ 300 ಮಂದಿ ಸ್ಥಳೀಯ ಮಹಿಳೆಯರಿಂದ ರನ್ ವೇ ಸಿದ್ಧಗೊಳಿಸೋ ಸಾಹಸಮಯ ನೈಜ ಘಟನೆ ಆಧಾರಿತ ಚಿತ್ರವಿದು.
ಅಜಯ್ ದೇವಗನ್ ಈ ಸಿನಿಮಾದಲ್ಲಿ ವಿಜಯ್ ಕಾರ್ಣಿಕ್ ಪಾತ್ರಕ್ಕೆ ಜೀವ ತುಂಬಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಭಾರತ ಸರ್ಕಾರಕ್ಕೆ ಸಾಥ್ ನೀಡುವ ನಿಷ್ಠಾವಂತ ಆರ್ಮಿ ಆಫೀಸರ್ ಆಗಿ ಕಮಾಲ್ ಮಾಡಿದ್ದರು. ಈ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಆಗಿತ್ತು.
1996ರಲ್ಲಿ ಇಂಡಿಯನ್ ಏರ್ಫೋರ್ಸ್ ಜಾಯಿನ್ ಆದ ಮೊದಲ ಮಹಿಳಾ ಪೈಲನ್ ಗುಂಜನ್ ಸಕ್ಸೇನಾ ಕುರಿತು ಕೂಡ ಸಿನಿಮಾವೊಂದು ತೆರೆಗೆ ಬಂದಿದೆ. 1999ರ ಕಾರ್ಗಿಲ್ ವಾರ್ನಲ್ಲಿ ಈಕೆಯ ಸಾಹಸಗಳು ಬೆಳಕಿಗೆ ಬಂದವು. ಆಕೆ ಪುರುಷ ಪೈಲಟ್ಗಳ ನಡುವೆ, ಪುರುಷ ಪ್ರಧಾನ ಆರ್ಮಿಯಲ್ಲಿ ಏನೆಲ್ಲಾ ಅವಮಾನ, ಅಪಮಾನಗಳನ್ನು ಎದುರಿಸಿ, ಕೊನೆಗೆ ಭೇಷ್ ಅನಿಸಿಕೊಂಡರು ಅನ್ನೋದೇ ಗುಂಜನ್ ಸಕ್ಸೇನಾ ಮೂವಿ.
2020ರಲ್ಲಿ ರಿಲೀಸ್ ಆದ ಈ ಸಿನಿಮಾದ ಟೈಟಲ್ ರೋಲ್ನಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಎಲ್ಲರ ಹುಬ್ಬೇರಿಸುವಂತಹ ಮನೋಜ್ಞ ಅಭಿನಯ ನೀಡಿದ್ದರು. ಮುಂದಿನ ಜನರೇಷನ್ಗೂ ಕೂಡ ಈ ಸಿನಿಮಾ ಒನ್ ಆಫ್ ದಿ ಬೆಸ್ಟ್ ಬಾಲಿವುಡ್ ಮೂವಿ ಅನಿಸಿಕೊಳ್ಳಲಿದೆ.
ತನ್ನ ಗರ್ಲ್ಫ್ರೆಂಡ್ಗಾಗಿ ಆರ್ಮಿ ಸೇರುವ ಹುಡುಗನೊಬ್ಬ, ಮುಂದೆ ದೇಶಕ್ಕಾಗಿ ಕಾರ್ಗಿಲ್ ಹಾಗೂ ಲಡಾಕ್ನಲ್ಲಿ ಏನೆಲ್ಲಾ ಮಾಡ್ತಾನೆ ಅನ್ನೋ ಸಿನಿಮಾನೇ ಲಕ್ಷ್ಯ. ಹೃತಿಕ್ ರೋಷನ್ ಇಲ್ಲಿ ಪಂಜಾಬ್ ರೆಜಿಮೆಂಟ್ನಲ್ಲಿ ಟ್ರೈನ್ ಆದಂತಹ ಕ್ಯಾಪ್ಟನ್ ಕರಣ್ ಶೆರ್ಗಿಲ್ ಆಗಿ ಮಿಂಚಿದ್ದಾರೆ. ಕೊಲೋನೆಲ್ ಸುನಿಲ್ ದಾಮ್ಲೆ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನೋಡುಗರ ದೇಶಪ್ರೇಮ ಹೆಚ್ಚಿಸಿದ್ದರು.
1999ರ ಆಪರೇಷನ್ ವಿಜಯ್ ಕುರಿತ ಸಿನಿಮಾ LOC ಕಾರ್ಗಿಲ್. ಭಾರತ ಹಾಗೂ ಪಾಕಿಸ್ತಾನ್ ಬಾರ್ಡರ್ಗಳಲ್ಲಿ ಒಂದಾದ ಕಾರ್ಗಿಲ್ ನಲ್ಲಿನ ಎಲ್ಓಸಿ ಅಂದ್ರೆ ಲೈನ್ ಆಫ್ ಕಂಟ್ರೋಲ್ ಕುರಿತ ಸಿನಿಮಾ ಇದಾಗಿತ್ತು. 255 ನಿಮಿಷಗಳಷ್ಟು ದೊಡ್ಡದಾದ ಈ ಸಿನಿಮಾದಲ್ಲಿ ಬಾಲಿವುಡ್ನ ಸಾಕಷ್ಟು ಮಂದಿ ಸ್ಟಾರ್ಸ್ ಬಣ್ಣ ಹಚ್ಚಿ, ಆರ್ಮಿಯಲ್ಲಿ ನಡೆಯೋ ಸಾಕಷ್ಟು ವಿಷಯಗಳನ್ನ ಈ ಚಿತ್ರದ ಮೂಲಕ ಪ್ರಸ್ತುತಪಡಿಸಿತ್ತು.
2003ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಮೊಹನಿಶ್ ಬಾಹಲ್, ಸಂಜಯ್ ದತ್, ಅಜಯ್ ದೇವಗನ್, ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಸುನೀಲ್ ಶೆಟ್ಟಿ, ಸಂಜಯ್ ಕಪೂರ್ ಸೇರಿದಂತೆ ದೊಡ್ಡ ತಾರಾಗಣವಿತ್ತು.
ಇತ್ತೀಚೆಗೆ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆದ ಶಿವಕಾರ್ತಿಕೇಯನ್ ನಟನೆಯ ಸಿನಿಮಾ ಅಮರನ್. ಜಮ್ಮು ಕಾಶ್ಮೀರದಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಕಾರ್ಯನಿರ್ವಹಿಸುವ ಸಂದರ್ಭದಲ್ಲಿನ ಕುರಿತ ಕಥಾನಕ ಇದಾಗಿತ್ತು. ಅದರಲ್ಲೂ ಮೇಜರ್ ಮುಕುಂದ್ ವರದರಾಜನ್ ಬಯೋಪಿಕ್ ಆದಂತಹ ಈ ಸಿನಿಮಾ ಆರ್ಮಿ ಆಫೀಸರ್ ಲೈಫು, ಆತನ ಲೈಫ್ನಲ್ಲಿರೋ ಕುಟುಂಬಸ್ಥರ ಪರಿಸ್ಥಿತಿಗಳನ್ನ ಸೊಗಸಾಗಿ ತೆರೆಮೇಲೆ ಕಟ್ಟಿಕೊಡಲಾಗಿತ್ತು.
ಆರ್ಟಿಕಲ್ 370, ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ ಸಿನಿಮಾಗಳು ಕೂಡ ಭಾರತ ಹಾಗೂ ಪಾಕ್ ಉಗ್ರರ ನಡುವಿನ ಸಮರಗಳ ಕುರಿತಾಗಿನ ಕಥೆಗಳನ್ನ ಹೊಂದಿವೆ. ಇನ್ನು ನಮ್ಮ ಡಾ ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ಸೂರ್ಯ, ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್ಗಳು ಆರ್ಮಿ ಆಫೀಸರ್ಗಳಾಗಿ ಸಿನಿಮಾಗಳಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ. ಇವೆಲ್ಲವುಗಳ ಉದ್ದೇಶ ಮನರಂಜನೆಯಷ್ಟೇ ಅಲ್ಲ, ದೇಶಪ್ರೇಮವನ್ನು ಸಾರುವುದು. ಇತಿಹಾಸದಲ್ಲಿ ಹುದುಗಿ ಹೋಗಿರೋ ಸಾಕಷ್ಟು ನೈಜ ಘಟನೆಗಳಿಗೆ ಸಿನಿಮಾ ರೂಪ ನೀಡುವುದಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್