ರಶ್ಮಿಕಾ ಮಂದಣ್ಣ ಬಗ್ಗೆ ಕಿರುತರೆ ನಟಿ ಪ್ರೇರಣಾ ಬೇಸರ

2222 (9)

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇಂದು ಬಾಲಿವುಡ್‌ನ ಟಾಪ್ ನಟಿಯರ ಸಾಲಿನಲ್ಲಿದ್ದಾರೆ. ಆದರೆ ಈ ಯಶಸ್ಸಿನ ಹಾದಿ ಸುಗಮವಾಗಿರಲಿಲ್ಲ. ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಪರಿತಪ್ಪಿಸುತ್ತಿದ್ದ ರಶ್ಮಿಕಾ, ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಪಡೆದರು. ಕನ್ನಡದ ಕೆಲ ಯಶಸ್ವಿ ಚಿತ್ರಗಳ ಬಳಿಕ ಟಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ ಈ ಚೆಲುವೆ, ಇಂದು ಬಾಲಿವುಡ್‌ನ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಆದರೆ ರಶ್ಮಿಕಾ ಯಶಸ್ಸಿನ ಹಿಂದಿನ ಕಥೆಯೊಂದರಲ್ಲಿ ಆಕೆಯ ಆತ್ಮೀಯ ಸ್ನೇಹಿತೆ ಪ್ರೇರಣಾ ಕಂಬಂ ಕೂಡ ಒಂದು ಭಾಗವಾಗಿದ್ದಾರೆ.

ರಶ್ಮಿಕಾ ಮತ್ತು ಪ್ರೇರಣಾ ಒಂದು ಕಾಲದಲ್ಲಿ ಆತ್ಮೀಯ ಗೆಳತಿಯರಾಗಿದ್ದರು. ಮಾಡೆಲಿಂಗ್‌ನ ಆರಂಭಿಕ ದಿನಗಳಲ್ಲಿ ಒಟ್ಟಿಗೆ ಒಂದೇ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಿದ್ದ ಈ ಜೋಡಿ, ಒಡನಾಟದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದರು. ಪ್ರೇರಣಾ ಕಂಬಂ, ಕನ್ನಡದ ಹುಡುಗಿ, ಕನ್ನಡ ಚಿತ್ರರಂಗ ಮತ್ತು ಧಾರಾವಾಹಿಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ‘ಕೃಷ್ಣ ಮುಕುಂದ ಮುರಾರಿ’ ಎಂಬ ತೆಲುಗು ಧಾರಾವಾಹಿಯು ಆಕೆಗೆ ಕಿರುತೆರೆಯಲ್ಲಿ ದೊಡ್ಡ ಗುರುತಿನೊಂದಿಗೆ ಯಶಸ್ಸು ತಂದಿತ್ತು. ಇದರ ಬಳಿಕ ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿಯಾದ ಪ್ರೇರಣಾ, ಚೆನ್ನಾಗಿ ತೆಲುಗು ಕಲಿತು ಜನಪ್ರಿಯತೆ ಗಳಿಸಿದರು.

ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ಪ್ರೇರಣಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ವೇಳೆ ರಶ್ಮಿಕಾ ಜೊತೆಗಿನ ಆಕೆಯ ಸ್ನೇಹದ ವಿಚಾರ ಚರ್ಚೆಗೆ ಬಂದಿತ್ತು. ಆದರೆ ಈ ವಿಷಯ ಪ್ರೇರಣಾಗೆ ಇಷ್ವಾವಾಗುತ್ತಿರಲಿಲ್ಲ. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಕೆಲ ಸಂದರ್ಶನಗಳಲ್ಲಿ ಆಕೆ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ವಿಶೇಷವಾಗಿ Idream ಯೂಟ್ಯೂಬ್ ಚಾನಲ್‌ನ ಸಂದರ್ಶನದಲ್ಲಿ ಆಕೆ ಮಾತನಾಡಿದ ಮಾತುಗಳು ಈಗ ವೈರಲ್ ಆಗಿವೆ.

ಪ್ರೇರಣಾ ಹೇಳುವಂತೆ, “ಬಿಗ್‌ಬಾಸ್‌ನಲ್ಲಿ ರಶ್ಮಿಕಾ ವಿಷಯ ಪ್ರಸ್ತಾಪವಾದಾಗ ನನಗೆ ಇಷ್ಟವಾಗಲಿಲ್ಲ. ಪದೇ ಪದೇ ಜನ ಈ ಬಗ್ಗೆ ಕೇಳುವುದು, ಸಂದರ್ಶನಗಳಲ್ಲಿ ನಮ್ಮ ಸ್ನೇಹದ ಬಗ್ಗೆ ಮಾತನಾಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಈ ವಿಚಾರದಿಂದ ನನ್ನ ವೃತ್ತಿಗೆ ಯಾವುದೇ ತೊಂದರೆಯಾಗಬಾರದೆಂದು ಬಯಸಿದ್ದೇನೆ. ನಾನು ಎಂದೂ ರಶ್ಮಿಕಾ ವಿಷಯವನ್ನು ತಾನಾಗಿ ಎತ್ತಲಿಲ್ಲ. ಯಾರು ಈ ವಿಷಯವನ್ನು ಬಿಗ್‌ಬಾಸ್ ತಂಡಕ್ಕೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ನಾಗಾರ್ಜುನ ಸರ್ ಯಾಕೆ ಇದನ್ನು ಯಾಕೆ ಕೇಳಿದ್ದರು ಎಂದು ಅರ್ಥವಾಗಲಿಲ್ಲ.”

ಮಾತು ಮುಂದುವರೆಸಿದ ಪ್ರೇರಣಾ, “ನಾಗಾರ್ಜುನ ಸರ್ ರಶ್ಮಿಕಾ ಹೆಸರನ್ನು ಎತ್ತಿದಾಗ, ಇಂಡಸ್ಟ್ರಿಯ ದೊಡ್ಡ ಸೆಲೆಬ್ರಿಟಿ ನಿಮ್ಮ ಗೆಳತಿ ಎಂದರು. ಆ ಕ್ಷಣದಿಂದ ಎಲ್ಲರೂ ಈ ವಿಷಯವನ್ನೇ ಕೇಳಲಾರಂಭಿಸಿದರು. ರಶ್ಮಿಕಾ ಈಗ ಉತ್ತುಂಗಕ್ಕೆ ಏರಿದ್ದಾರೆ. ಜನ ನಾನು ಜನಪ್ರಿಯತೆಗಾಗಿ ಆಕೆಯ ಬಗ್ಗೆ ಮಾತನಾಡುತ್ತೇನೆಂದು ಭಾವಿಸಬಹುದು. ಆದರೆ ನನಗೆ ಅಂತಹ ಉದ್ದೇಶವಿಲ್ಲ. ನನ್ನ ಸಾಧನೆಯ ಬಗ್ಗೆ ಮಾತನಾಡಲು ಸಾಕಷ್ಟು ವಿಷಯಗಳಿವೆ. ರಶ್ಮಿಕಾ ವಿಷಯವನ್ನು ಅಡ್ಡ ಇಟ್ಟುಕೊಂಡು ಮಾತನಾಡುವುದು ನನಗೆ ಇಷ್ಟವಿಲ್ಲ” ಎಂದಿದ್ದಾರೆ.

ಬಿಗ್‌ಬಾಸ್ ವೇದಿಕೆಯಲ್ಲಿ ನಟ ಸೂರ್ಯ ಅತಿಥಿಯಾಗಿ ಬಂದಾಗ, ಎಲ್ಲ ಸ್ಪರ್ಧಿಗಳನ್ನು ಪರಿಚಯಿಸಿದರು. ಆದರೆ ಪ್ರೇರಣಾ ಬಗ್ಗೆ ಮಾತನಾಡುವಾಗ “ರಶ್ಮಿಕಾ ಬಾಲ್ಯದ ಗೆಳತಿ” ಎಂದು ಕರೆದಿದ್ದು ಆಕೆಗೆ ಇಷ್ಟವಾಗಿರಲಿಲ್ಲ. “ಬೇಡವೆಂದರೂ ಆ ವಿಷಯವೇ ಬರುತ್ತಿದೆ. ಕಾರಣ, ರಶ್ಮಿಕಾ ಈಗ ದೊಡ್ಡ ತಾರೆಯಾಗಿದ್ದಾರೆ” ಎಂದು ಪ್ರೇರಣಾ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version