ರಾಮಾಯಣ ವೈಭವ ಜೋರು..ವರ್ಲ್ಡ್ ದುನಿಯಾದಲ್ಲಿ ರಾಮನ ತೇರು

ರಘುಕುಲ ತಿಲಕ ರಾಮನಾಗಿ ರಣ್‌ಬೀರ್‌ ಕಪೂರ್ ಮಿಂಚು

Untitled design 2026 04 02T172134.119

ರಾಮ ನಾಮ ಹಾಡಿರೋ ರಾಮ ಬರುವನು.. ಅವನ ಹಿಂದೆ ಹನುಮನು ಇದ್ದೆ ಇರುವನು.. ಈ ಮಾತು ಅಕ್ಷರಶಃ ಸತ್ಯ. ಯಾಕಂದ್ರೆ ಇಂದು ಹನುಮ ಜಯಂತಿ. ಅದೇ ಕಾರಣಕ್ಕೆ 4 ಸಾವಿರ ಕೋಟಿ ಬಜೆಟ್‌‌ನಲ್ಲಿ ತಯಾರಾಗ್ತಿರೋ ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ ರಾಮಾಯಣದ ರಾಮ ಟೀಸರ್ ಲೋಕಾರ್ಪಣೆಯಾಗಿದೆ. ಇಷ್ಟಕ್ಕೂ ಹೇಗಿದೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್‌ರ ಕನಸಿನ ಕೂಸು..? ಹಾಲಿವುಡ್‌‌ ಮೆಚ್ಚಿದ ಟೀಸರ್‌‌ನಲ್ಲಿ ಏನೆಲ್ಲಾ ವಿಶೇಷತೆ ಇದೆ ಅನ್ನೋದ್ರ ಸ್ಪೆಷಲ್ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ..

ಇದು ಇಡೀ ವಿಶ್ವ ಸಿನಿದುನಿಯಾ ಕಾತರದಿಂದ ಕಾಯ್ತಿರೋ ಮಹಾಕಾವ್ಯ ರಾಮಾಯಣ ಚಿತ್ರದ ಟೀಸರ್ ಝಲಕ್. ಹನುಮ ಜಯಂತಿ ವಿಶೇಷ ಮರ್ಯಾದಾ ಪುರುಷ ಶ್ರೀರಾಮನನ್ನ ಇಂಟ್ರಡ್ಯೂಸ್ ಮಾಡುವತ ಸಣ್ಣದೊಂದು ದೃಶ್ಯಗುಚ್ಚ ರಿವೀಲ್ ಆಗಿದ್ದು, ಇಡೀ ವಿಶ್ವ ಸಿನಿದುನಿಯಾ ಈ ಚಿತ್ರದ ಬಗ್ಗೆ ಮಾತನಾಡ್ತಿದೆ. ಯಾಕಂದ್ರೆ ಈ ಟೀಸರ್ ಎರಡು ದಿನಗಳ ಹಿಂದೆಯೇ ಮೊದಲು ಲಾಂಚ್ ಆಗಿದ್ದು ಲಾಸ್ ಏಂಜಲೀಸ್‌‌ನಲ್ಲಿ. ನಂತ್ರ ನಿನ್ನೆ ಮುಂಬೈ ಇದೀಗ ಯೂಟ್ಯೂಬ್ ಮೂಲಕ ಲೋಕಾರ್ಪಣೆ ಆಗಿದೆ.

ನಮಿತ್ ಮಲ್ಹೋತ್ರಾ ನಿರ್ಮಾಣದ, ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದ ಈ ರಾಮಾಯಣ, ಎರಡು ಭಾಗಗಳಲ್ಲಿ ದೃಶ್ಯರೂಪ ಪಡೆಯುತ್ತಿದೆ. ಈ ಮೂಲಕ ರಾಮಾಯಣ ತನ್ನ ಮಹತ್ವದ ಅಧ್ಯಾಯವನ್ನು ತೆರೆದಿದೆ. ಈ ಮಹಾಕಾವ್ಯದ ಫಸ್ಟ್‌ ಲುಕ್‌ನಲ್ಲಿ ರಣ್‌‌ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, 8 ಬಾರಿ ಆಸ್ಕರ್ ಅವಾರ್ಡ್‌ಗಳನ್ನ ಪಡೆದ DNEG ಹಾಗೂ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಅವ್ರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾದ ರಾಮಾಯಣ ಟೀಸರ್, 5 ಸಾವಿರ ವರ್ಷಗಳಿಂದಲೂ ಜನಮಾನಸದಲ್ಲಿರುವ ಅದ್ಭುತ ವ್ಯಕ್ತಿತ್ವವನ್ನು ಕೇಂದ್ರೀಕರಿಸಿದೆ. ಈ ಕಥೆಯೊಂದಿಗೆ ಬೆಳೆದು ಬಂದವರಿಗೆ ಇದು ಹೊಸ ದೃಷ್ಟಿಕೋನ ನೀಡಿದ್ರೆ, ಇತರರಿಗೆ ಇದು ಮೊದಲ ಬಾರಿಗೆ ಅನುಭವಿಸುವ ಅವಕಾಶವನ್ನು ಕಲ್ಪಿಸಿದೆ. ರಾಮನಂತಹ ಒಬ್ಬ ನಾಯಕ, ಇಂದಿನ ಜಗತ್ತಿನಲ್ಲಿ ಅತಿ ಅಪರೂಪ. ಆತ ಆಸೆಗಿಂತ ಕರ್ತವ್ಯವನ್ನೇ ಆರಿಸಿಕೊಂಡವನು. ಸರಿ ಎನಿಸಿದ್ದಕ್ಕಾಗಿ ಅಧಿಕಾರವನ್ನೇ ತ್ಯಜಿಸಿದವನು. ತನಗೆ ಎಲ್ಲವೂ ನಷ್ಟವಾಗುತ್ತದೆ ಅಂದ್ರೂ ಸಹ ಸರಿ ದಾರಿಯಲ್ಲಿ ನಡೆದವನು. ಮರ್ಯಾದಾ ಪುರುಷೋತ್ತಮ ಎಂದು ಕರೆಯಲ್ಪಡುವ ರಾಮ.. ದೇಶ ಭ್ರಷ್ಟತೆ, ನಷ್ಟ ಮತ್ತು ಅನ್ಯಾಯದ ನಡುವೆಯೂ ಘನತೆ, ಸಹಾನುಭೂತಿ ಮತ್ತು ನೈತಿಕ ಸ್ಪಷ್ಟತೆಯನ್ನು ಮೈಗೂಡಿಸಿಕೊಂಡವನು.

ರಾಮಾಯಣದ ಹಿರಿಮೆ ಇರುವುದು ಅದರ ಭಾವನಾತ್ಮಕ ಸಮೃದ್ಧಿಯಲ್ಲಿ. ಇದರ ತಿರುಳು ಕೇವಲ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟವಲ್ಲ. ಬದಲಾಗಿ ಇದು ನಾವು ಮಾಡುವ ಆಯ್ಕೆಗಳು, ಅದರ ಪರಿಣಾಮಗಳು ಮತ್ತು ಸರಿ ದಾರಿಯಲ್ಲಿ ನಡೆಯುವ ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ. ರಾಮನ ಪಯಣವು ಆಳವಾದ ಮಾನವೀಯತೆಯಿಂದ ಕೂಡಿದೆ ಮತ್ತು ಅದಕ್ಕೇ ನಾವು ನಿಷ್ಠರಾಗಿರಲು ಪ್ರಯತ್ನಿಸಿದ್ದೇವೆ.. ಅಂತಾರೆ ಡೈರೆಕ್ಟರ್ ನಿತೇಶ್‌ ತಿವಾರಿ.

ನಾನು ಇಲ್ಲಿ ರಾಮನನ್ನು ಪ್ರತಿನಿಧಿಸಲು ಬಂದಿಲ್ಲ. ಬದಲಾಗಿ ಅವರಿಂದ ಕಲಿಯಲು ಬಂದಿದ್ದೇನೆ. ರಾಮನ ಸರಳತೆ ಮತ್ತು ಶುದ್ಧತೆ ಅತಿ ಅಪರೂಪದ್ದು. ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನನಗೆ ಸಿಕ್ಕ ಅತ್ಯಂತ ವಿನಮ್ರವಾದ ಅನುಭವ ಎಂದಿದ್ದಾರೆ ರಣ್‌ಬೀರ್ ಕಪೂರ್.

ರಾಮನ ಕಥೆಯ ಶಕ್ತಿ ಆತ ಏನನ್ನು ಗೆದ್ದ ಎಂಬುದರಲ್ಲಿಲ್ಲ. ಬದಲಾಗಿ ಆತ ಏನನ್ನು ಬಿಟ್ಟುಕೊಟ್ಟನು ಎಂಬುದರಲ್ಲಿದೆ. ಆತ ಸುಲಭವಾದದ್ದನ್ನು ಆರಿಸಲಿಲ್ಲ. ಅಗತ್ಯವಿರುವುದನ್ನೇ ಆರಿಸಿದನು. ಆಸೆಗಿಂತ ಕರ್ತವ್ಯಕ್ಕೆ, ಸುಖಕ್ಕಿಂತ ಸತ್ಯಕ್ಕೆ ಮತ್ತು ಸ್ವಾರ್ಥಕ್ಕಿಂತ ತ್ಯಾಗಕ್ಕೆ ಆತ ಮೊದಲ ಆದ್ಯತೆ ನೀಡಿದನು. ಅದಕ್ಕಾಗಿಯೇ ಈ ಕಥೆ ಸಾವಿರಾರು ವರ್ಷಗಳಿಂದ ಜೀವಂತವಾಗಿ ಉಳಿದಯಕೊಂಡಿದೆ ಅಂದ್ರು ನಿರ್ಮಾಪಕ ನಮಿತ್ ಮಲ್ಹೋತ್ರಾ.

ಬ್ರಹ್ಮ, ವಿಷ್ಣು ಮತ್ತು ಶಿವ.. ಈ ತ್ರಿಮೂರ್ತಿಗಳು ಜಗತ್ತನ್ನು ಆಳುವ ಕಾಲದಲ್ಲಿ, ಭೂಮಿಯ ಮೇಲೆ ಅರಾಜಕತೆ ತಾಂಡವವಾಡಿದಾಗ, ಸಮತೋಲನವನ್ನು ಕಾಯ್ದುಕೊಳ್ಳಲು ವಿಷ್ಣು ‘ರಾಮ’ನಾಗಿ ಮನುಷ್ಯನ ರೂಪದಲ್ಲಿ ಅವತರಿಸುತ್ತಾನೆ. ರಾಮನ ವಿರುದ್ಧವಾಗಿ ನಿಲ್ಲುವವನೇ ಅಜೇಯ ಮತ್ತು ಅಮರ ರಾಕ್ಷಸ ರಾವಣ. ರಾವಣನು ಹೆಮ್ಮೆ ಮತ್ತು ಪ್ರತೀಕಾರದ ಕಿಚ್ಚಿನಿಂದ ಜಗತ್ತನ್ನೇ ನಡುಗಿಸುವ ಶಕ್ತಿ ಹೊಂದಿದ್ದಾನೆ. ಇಲ್ಲಿ ರಾಮನಾಗಿ ರಣ್‌ಬೀರ್, ಲಂಕೇಶ್ವರ ರಾವಣನಾಗಿ ನಮ್ಮ ಯಶ್ ಮಿಂಚಲಿದ್ದಾರೆ. ಯಶ್ ಫೇಸ್ ರಿವೀಲ್ ಮಾಡದ ಟೀಂ, ಜಸ್ಟ್ ಬ್ಯಾಕ್ ಶಾಟ್‌ನಿಂದಲೇ ಕ್ಯೂರಿಯಾಸಿಟಿ ಹೆಚ್ಚಿಸಿದೆ.

ತನ್ನ ಪರಮ ಉದ್ದೇಶದ ಅರಿವಿಲ್ಲದ ರಾಮ, ಅಯೋಧ್ಯೆಯ ನೆಚ್ಚಿನ ರಾಜಕುಮಾರನಾಗಿರುತ್ತಾನೆ. ತನ್ನ ಪ್ರೀತಿಯ ಪತ್ನಿ ಸೀತೆ ಮತ್ತು ನಿಷ್ಠಾವಂತ ಸಹೋದರ ಲಕ್ಷ್ಮಣನ ಜೊತೆ ಗೌರವಾನ್ವಿತ ಜೀವನ ನಡೆಸಲು ಬಯಸುವ ರಾಮನನ್ನು ವಿಧಿಯ ಆಟವು ವನವಾಸಕ್ಕೆ ತಳ್ಳುತ್ತದೆ. ಇದು ಮುಂದೆ ರಾವಣನೊಂದಿಗಿನ ಭೀಕರ ಯುದ್ಧಕ್ಕೆ ಮುನ್ನುಡಿ ಬರೆಯುತ್ತದೆ. ಇಲ್ಲಿ ಲಕ್ಷ್ಮಣನಾಗಿ ರವಿ ದುಬೆ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.

ಭಾರತೀಯ ಚಿತ್ರರಂಗದ ಇಬ್ಬರು ಪ್ರಭಾವಶಾಲಿ ನಟರಾದ ರಣ್‌‌ಬೀರ್ ಕಪೂರ್ ಹಾಗೂ ಯಶ್ ಪರಸ್ಪರ ಎದುರಾಳಿ ಪಾತ್ರಗಳಲ್ಲಿ ನಟಿಸುತ್ತಿರುವುದು ಈ ಚಿತ್ರದ ಕೇಂದ್ರ ಬಿಂದು. ಇವರೊಂದಿಗೆ ಸಾಯಿ ಪಲ್ಲವಿ, ಹನುಮನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಆಸ್ಕರ್ ವಿಜೇತ ಸಂಗೀತಗಾರರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರೋದು ಮತ್ತೊಂದು ಹೈಲೈಟ್.

ನಮಿತ್ ಮಲ್ಹೋತ್ರಾ ಅವ್ರ ರಾಮಾಯಣ ಭಾಗ-1 ಇದೇ 2026ರ ದೀಪಾವಳಿ ಹಬ್ಬದಂದು ಜಾಗತಿಕವಾಗಿ ತೆರೆಕಾಣಲಿದೆ. ಎರಡನೇ ಭಾಗವು ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಅಂದಹಾಗೆ, ಈ ಚಿತ್ರದ ಕಥೆ ವಾಲ್ಮೀಕಿ ಮಹರ್ಷಿಗಳ ಪವಿತ್ರ ಬರಹಗಳನ್ನು ಆಧರಿಸಿದೆ. ಒಟ್ಟಾರೆ ಲಾಸ್ ಏಂಜಲ್ಸ್‌‌ನಿಂದ ಮುಂಬೈ, ಬೆಂಗಳೂರು ತನಕ ಸೌಂಡ್ ಮಾಡ್ತಿರೋ ರಾಮಾಯಣ, ಈ ಶತಮಾನದ ಮಹಾ ದೃಶ್ಯಕಾವ್ಯಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಅನ್ನೋದಕ್ಕೆ ಈ ಟೀಸರ್ ಪ್ರತ್ಯಕ್ಷ ಸಾಕ್ಷಿ ಆಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version