ಜೈಲು ಪಾಲಾಗೋದ್ರಿಂದ ಜಸ್ಟ್ ಮಿಸ್ ಕಿರಿಕ್ ಪಾರ್ಟಿ ರಕ್ಷಿತ್‌ ಶೆಟ್ಟಿ

ಬ್ಯಾಚುಲರ್ ಪಾರ್ಟಿ ತಂದ ಆಪತ್ತು.. 25 ಲಕ್ಷಕ್ಕೆ ಬಂತು ಕುತ್ತು

Untitled design 2026 04 01T192922.350

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿಗೆ ಅದ್ಯಾಕೋ ಟೈಮೇ ಸರಿ ಇಲ್ಲ ಅನಿಸ್ತಿದೆ. ಸುಮಾರು ದಿನಗಳಿಂದ ಅಜ್ಞಾತವಾಸದಲ್ಲಿರೋ ರಕ್ಷಿತ್‌‌‌ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೀತಿವೆ. ಈ ಮಧ್ಯೆ ಅವ್ರು ಜೈಲು ಪಾಲಾಗುವುದರಿಂದ ಜಸ್ಟ್ ಮಿಸ್ ಆಗಿದ್ದಾರೆ. 25 ಲಕ್ಷ ದಂಡ ವಿಧಿಸೋ ಮೂಲಕ ಡೆಲ್ಲಿ ಹೈ ಕೋರ್ಟ್ ವೆರಿ ವೆರಿ ಬಿಗ್ ಶಾಕ್ ನೀಡಿದೆ. ಇಷ್ಟಕ್ಕೂ ಯಾವ ಪ್ರಕರಣ..? ಅಂಥದ್ದೇನಾಯ್ತು ಅಂತೀರಾ..? ಈ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಬರಹಗಾರ ರಕ್ಷಿತ್ ಶೆಟ್ಟಿ ಅಕ್ಷರಶಃ ಸ್ಯಾಂಡಲ್‌ವುಡ್‌ಗೆ ಹೊಸ ಆಯಾಮ ತಂದುಕೊಟ್ಟರು. ಅದರಲ್ಲಿ ಎರಡು ಮಾತಿಲ್ಲ. ವಿಭಿನ್ನ ಆಲೋಚನೆಗಳು, ಭಿನ್ನ ಅಲೆಯ ಸಿನಿಮಾಗಳಿಂದ ನ್ಯೂ ಟ್ರೆಂಡ್ ಕೂಡ ಸೆಟ್ ಮಾಡಿದ್ರು. ಆದ್ರೆ ಅಷ್ಟೇ ವಿವಾದಗಳನ್ನ ಮೈ ಮೇಲೆ ಕೂಡ ಎಳೆದುಕೊಂಡರು. ಸದ್ಯ ಅನುಮತಿ ಇಲ್ಲದೆ ಮ್ಯೂಸಿಕ್ ಬಳಸಿದ ವಿಚಾರಕ್ಕೆ ಡೆಲ್ಲಿ ಹೈ ಕೋರ್ಟ್ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಛೀಮಾರಿ ಹಾಕಿದೆ.

ಡೆಲ್ಲಿ ಹೈ ಕೋರ್ಟ್ ರಕ್ಷಿತ್ ಶೆಟ್ಟಿಗೆ ಬರೀ ತರಾಟೆಗೆ ಮಾತ್ರ ತೆಗೆದುಕೊಂಡಿಲ್ಲ, ನ್ಯಾಯಾಂಗ ಉಲ್ಲಂಘನೆಗಾಗಿ ಜೈಲು ಪಾಲಾಗೋದನ್ನ ತಪ್ಪಿಸಿದೆ. ಬದಲಿಗೆ ಬರೋಬ್ಬರಿ 25 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ. ಯೆಸ್.. 2024ರ ಜನವರಿ 26ರಂದು ತೆರೆಕಂಡ ಬ್ಯಾಚುಲರ್ ಪಾರ್ಟಿ ಸಿನಿಮಾ ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋ ಮೂಲಕ ನಿರ್ಮಾಣ ಮಾಡಿದ್ರು. ಲೂಸ್‌ಮಾದ ಯೋಗಿ, ದಿಗಂತ್ ಹಾಗೂ ಅಚ್ಯುತ್ ನಟಿಸಿದ್ದ ಈ ಚಿತ್ರದಲ್ಲಿ MRT ಮ್ಯೂಸಿಕ್ ಕಂಪನಿ ಹಕ್ಕುಸ್ವಾಮ್ಯದ ಎರಡು ಆಡಿಯೋ ಬಿಟ್‌‌ಗಳನ್ನ ಅನುಮತಿ ಪಡೆಯದೆ ಅನಧಿಕೃತವಾಗಿ ಬಳಸಿಕೊಂಡಿದ್ರು ರಕ್ಷಿತ್ ಶೆಟ್ಟಿ.

ಗಾಳಿಮಾತು ಚಿತ್ರದ ಒಮ್ಮೆ ನಿನ್ನನ್ನು ಹಾಡಿನ ಆಡಿಯೋ ಬಿಟ್‌‌ ಅನ್ನು 31 ಸೆಕೆಂಡ್ ಹಾಗೂ ದ್ವಾರಕೀಶ್ ನಟನೆಯ ನ್ಯಾಯ ಎಲ್ಲಿದೆ ಚಿತ್ರದ ನ್ಯಾಯ ಎಲ್ಲಿದೆ ಅನ್ನೋ ಬಿಟ್‌‌ನ 7 ಸೆಕೆಂಡ್ ಆಡಿಯೋ ಬಳಸಿಕೊಂಡಿತ್ತು ಬ್ಯಾಚುಲರ್ ಪಾರ್ಟಿ ಚಿತ್ರತಂಡ. ಇದು ಚಿತ್ರಮಂದಿರದಲ್ಲಿ ರಿಲೀಸ್ ಆಗಿ, ನಂತ್ರ ಓಟಿಟಿಗೆ ಬಂದ ಬಳಿಕ ಎಂಆರ್‌ಟಿ ಮ್ಯೂಸಿಕ್ ಕಂಪನಿ ಗಮನಕ್ಕೆ ಬಂದಿದ್ದು, ಕೂಡಲೇ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ರು.

ಸ್ಟೇಷನ್‌ಗೆ ವಿಚಾರಣೆಗೆ ಬಂದ ರಕ್ಷಿತ್ ಶೆಟ್ಟಿ, ಅಂದು ಕಾಪಿ ರೈಟ್ ಯಾವ ರೂಪದಲ್ಲಿ ಹಾಕ್ತಾರೆ ಅನ್ನೋದೇ ಗೊತ್ತಾಗ್ತಿಲ್ಲ. ಇದು ಅದ್ಯಾವ ರೂಪದ ಕಾಪಿರೈಟ್ ಅನ್ನೋದೇ ಯಕ್ಷ ಪ್ರಶ್ನೆ. ಹಣ ಮಾಡೋಕೆ ಒಂದಷ್ಟು ಮ್ಯೂಸಿಕ್ ಕಂಪನಿಗಳು ಉದ್ದೇಶ ಪೂರ್ವಕವಾಗಿ ಹೀಗೆ ಮಾಡ್ತಿವೆ ಅಂತ ಸ್ಟೇಷನ್ ಮುಂದೆ ಹೇಳಿಕೆ ಕೂಡ ನೀಡಿದ್ರು.

ಆದ್ರೆ ಎಂಆರ್‌ಟಿ ಮ್ಯೂಸಿಕ್ ಕಂಪನಿ ಮಾತ್ರ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು. ಅದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ಜೊತೆ ನಡೆದ ಹಣಕಾಸಿನ ಸೆಟಲ್ಮೆಂಟ್ ಮಾತುಕತೆಗಳು ವಿಫಲವಾಗಿದ್ದವು. ಯಾವಾಗ ಪ್ರಕರಣ ಕೋರ್ಟ್ ಮೆಟ್ಟಿಲೇರಿತೋ, ಆಗ ಪ್ರಕರಣ ಅತ್ಯರ್ಥ ಆಗೋ ತನಕ ನಟ ರಕ್ಷಿತ್ ಶೆಟ್ಟಿ 20 ಲಕ್ಷ ರೂಪಾಯಿ ಹಣವನ್ನ ಡೆಪಾಸಿಟ್ ಇಡಬೇಕು ಅಂತ ಮಧ್ಯಂತರ ಆದೇಶ ನೀಡಿತ್ತು ಕೋರ್ಟ್. ಅದ್ರಂತೆ 2024ರ ಆಗಸ್ಟ್‌ನಲ್ಲಿ ರಕ್ಷಿತ್ 20 ಲಕ್ಷ ಡೆಪಾಸಿಟ್ ಇಟ್ಟರು. ಇದೀಗ ಡೆಲ್ಲಿ ಹೈ ಕೋರ್ಟ್‌ನ ನ್ಯಾಯಧೀಶರಾದ ತೇಜಸ್ ಕಾರಿಯಾ ಅವರು ಮಹತ್ವದ ಆದೇಶ ನೀಡಿದ್ದು, ಇದು ಕಾಪಿರೈಟ್ ಅನ್ನೋದು ಪ್ರೂವ್ ಆಗಿದೆ. ಹಾಗಾಗಿ ಠೇವಣಿ ಇಟ್ಟಿದ್ದ 20 ಲಕ್ಷ ರೂಪಾಯಿಗಳನ್ನ ಮುಟ್ಟುಗೋಲು ಹಾಕಿಕೊಂಡು, ಇನ್ನೂ 5 ಲಕ್ಷ ಹೆಚ್ಚುವರಿ ದಂಡ ಕೂಡ ವಿಧಿಸಿ ಆದೇಶ ನೀಡಿದೆ.

ಅಂದಹಾಗೆ ಬ್ಯಾಚುಲರ್ ಪಾರ್ಟಿ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ರಾಮು, ಇದು ನಾನು ಕಂಪೋಸ್ ಮಾಡಿರೋ ಮ್ಯೂಸಿಕ್ ಅಲ್ಲ. ಚಿತ್ರದ ಕ್ರಿಯೇಟಿವ್ ವಿಷಯಗಳನ್ನೆಲ್ಲಾ ರಕ್ಷಿತ್ ಶೆಟ್ಟಿ ಅಂಡ್ ಟೀಂ ಹ್ಯಾಂಡಲ್ ಮಾಡ್ತಿದೆ. ಸೋ.. ಅವರೇ ಆ ಆಡಿಯೋನ ಬಳಸಿದ್ದಾರೆ ಅಂತ ಅಂದೇ ಸ್ಪಷ್ಟನೆ ಕೂಡ ನೀಡಿದ್ರು. ಹಾಗಾಗಿ ಈ ಎರಡು ಆಡಿಯೋ ಬಿಟ್‌ಗಳನ್ನ ಕದ್ದ ಪ್ರಕರಣದಡಿ ಸದ್ಯ ರಕ್ಷಿತ್ ಶೆಟ್ಟಿಗೆ ಕೋರ್ಟ್ ಛೀಮಾರಿ ಹಾಕಿದೆ. ಎರಡು ವಾರದೊಳಗೆ ದಂಡ ಕಟ್ಟಲು ಆರ್ಡರ್ ಮಾಡಿದೆ.

ಸಿನಿಮಾ ಅನ್ನೋದು ಒಂದು ಕ್ರಿಯೇಟಿವ್ ಆರ್ಟ್. ಅದನ್ನ ಸ್ವಂತವಾಗಿ ಕ್ರಿಯೇಟ್ ಮಾಡಬೇಕೇ ಹೊರತು, ಯಾರೋ ಕ್ರಿಯೇಟ್ ಮಾಡಿರೋದನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳಬಾರದು. ಒಂದು ವೇಳೆ ಅನುಮತಿ ಪಡೆಯದೆ ಬಳಸಿಕೊಂಡು, ನಂತ್ರ ಅದು ಇನ್ಸ್‌ಪಿರೇಷನ್ ಗುರು ಅಂದರೂ ಸಹ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ ಜಸ್ಟೀಸ್ ಹೇಳಿದ ಪ್ರಕಾರ, ಸೆಕ್ಷನ್ 14(d)(i)(A) ಅಡಿ, ಅದು ಕ್ಲಿಯರ್ ಕಟ್ ಕಾಪಿರೈಟ್ ಅಂತ ಪರಿಗಣಿಸಲ್ಪಡುತ್ತದೆ. ಯಾವುದಾದರೂ ದೃಶ್ಯದ ಒಂದೇ ಒಂದು ಫ್ರೇಮ್ ಬಳಸಿದ್ರೂ ಸಹ ಕಾಪಿ ರೈಟ್ ಆ್ಯಕ್ಟ್‌‌ನಡಿ ಬರಲಿದೆ ಅನ್ನೋದನ್ನ ಕೋರ್ಟ್ ಸ್ಪಷ್ಟಪಡಿಸಿದೆ.

ಸೋ.. ಇನ್ಮೇಲೆ ಯಾವುದಾದರೂ ಸಿನಿಮಾದ ಆಡಿಯೋ ಅಥ್ವಾ ವಿಡಿಯೋ ತುಣುಕುಗಳನ್ನ ಬಳಸೋಕೆ ಮುನ್ನ ಫಿಲ್ಮ್ ಮೇಕರ್ಸ್ ಬಹಳ ಜಾಗ್ರತೆಯಿಂದ ಇರಬೇಕಾಗುತ್ತೆ. ಇದು ಇಳಯರಾಜ ವಿಚಾರದಲ್ಲೂ ಕೋರ್ಟ್‌‌ನಲ್ಲಿ ಪ್ರೂವ್ ಆಗಿದೆ. ಈ ಪ್ರಕರಣ ಚಿತ್ರರಂಗಕ್ಕೆ ಒಂದು ಸ್ಟ್ರಾಂಗ್ ಮೆಸೇಜ್ ಪಾಸ್ ಮಾಡಿದ್ದು, ಸಿನಿಮಾ ಮಾಡೋರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತೆ ಅನ್ನೋದ್ರ ಹಿಂಟ್ ನೀಡಿದೆ. ಇನ್ನೂ ಈ ಕುರಿತು ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ಎಂಆರ್‌ಟಿ ಮ್ಯೂಸಿಕ್ ಕಂಪನಿ, ಧರ್ಮೋ ರಕ್ಷತಿ ರಕ್ಷಿತಃ ಎಂದಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version