ಹಾಸ್ಯ ಕಲಾವಿದ ರಾಜು ತಾಳಿಕೋಟೆ ನಿಧನಕ್ಕೆ ಕೇಂದ್ರ ಸಚಿವ ಹೆಚ್‌‌.ಡಿ ಕುಮಾರಸ್ವಾಮಿ ಸಂತಾಪ

Untitled design (53)

ಕನ್ನಡ ಚಲನಚಿತ್ರ ರಂಗ ಮತ್ತು ರಂಗಭೂಮಿಯ ಹಿರಿಯ ಹಾಸ್ಯ ಕಲಾವಿದ, ನಟ ಹಾಗೂ ಕಲಾಜೀವಿ ರಾಜು ತಾಳಿಕೋಟೆ ಅವರ ನಿಧನದ ಸುದ್ದಿ ಕನ್ನಡಿಗರ ಮನಸ್ಸು ಕಲುಕಿದೆ. ಹೃದಯಾಘಾತದಿಂದ ಬಳಲುತ್ತಿದ್ದ ಅವರು ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಂದು ಕೊನೆಯುಸಿರೆಳೆದಿದ್ದಾರೆ.

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. “ಹಿರಿಯ ರಂಗ ಕಲಾವಿದ ಮತ್ತು ಪ್ರಸಿದ್ಧ ಚಲನಚಿತ್ರ ನಟ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಶ್ರೀ ರಾಜು ತಾಳಿಕೋಟೆ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಉತ್ತರ ಕರ್ನಾಟಕದ ಸೊಗಡಿನ ಹಾಸ್ಯದಿಂದ ಜನಪ್ರಿಯರಾಗಿದ್ದ ರಾಜು ಅವರ ಅಕಾಲಿಕ ನಿಧನ ಕಲಾಕ್ಷೇತ್ರಕ್ಕೆ ಬಹುದೊಡ್ಡ ನಷ್ಟ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ. ಓಂ ಶಾಂತಿ.” ಎಂದು ಬರೆದುಕೊಂಡಿದ್ದಾರೆ.

ರಾಜು ತಾಳಿಕೋಟೆ ಅವರು ಮೂಲತಃ ಬೀದರ ಜಿಲ್ಲೆಯ ತಾಳಿಕೋಟೆ ಮೂಲದವರು. ತಮ್ಮ ಮೂಲ ಹೆಸರು ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ ಎಂಬುದಾದರೂ, ಜನರು ಅವರನ್ನು “ರಾಜು” ಎಂದು ಕರೆಯುತ್ತಿದ್ದರಿಂದ ಅವರು ತಮ್ಮ ಹೆಸರಿನಲ್ಲಿ “ತಾಳಿಕೋಟೆ” ಎಂಬ ಊರಿನ ಹೆಸರನ್ನು ಸೇರಿಸಿಕೊಂಡರು. “ಜನರು ನನ್ನನ್ನು ರಾಜು ಅಂತಾ ಕರೆಯುತ್ತಿದ್ದರು. ನನ್ನ ಊರಿನ ಹೆಸರನ್ನು ಸೇರಿಸಿಕೊಂಡು ಪ್ರಸಿದ್ಧಿಯಾಯಿತು,” ಎಂದು ಅವರು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ರಾಜು ತಾಳಿಕೋಟೆ ಅವರ ತಂದೆ ಮತ್ತು ತಾಯಿ ಇಬ್ಬರೂ ರಂಗಭೂಮಿ ಕಲಾವಿದರು. ಬಾಲ್ಯದಲ್ಲೇ ರಂಗದ ವಾತಾವರಣದಲ್ಲಿ ಬೆಳೆದ ಅವರು, ತಮ್ಮ ಪೋಷಕರು ನಡೆಸುತ್ತಿದ್ದ ನಾಟಕ ಸಂಸ್ಥೆಯ ಮುಂದುವರೆದರು. ಅಮ್ಮ-ಅಪ್ಪ ನಿಧನವಾದ ಬಳಿಕ ಅಣ್ಣ ಸಂಸ್ಥೆಯನ್ನು ಮುಂದುವರಿಸಿದರು. 

ಅವರ ಬಾಲ್ಯ ವಿದ್ಯಾಭ್ಯಾಸ ಮಠದಲ್ಲಿ ನಡೆದಿತ್ತು. “ನಾನು ಮುಸ್ಲಿಂ ಆಗಿದ್ದರೂ, ಮಠದಲ್ಲಿ ಓದುತ್ತಿದ್ದೆ. ಅಲ್ಲಿ ವಿಭೂತಿ ಹಾಕಿಕೊಂಡೇ ಊಟ ಮಾಡಬೇಕಿತ್ತು, ವಚನಗಳ ಪಾಠ ಮಾಡಬೇಕಿತ್ತು. ಇಂದಿಗೂ ಹಿಂದೂ ಸ್ನೇಹಿತರ ಮನೆಗೆ ಹೋದಾಗ ವಿಭೂತಿ ಧರಿಸಿ ಊಟ ಮಾಡುತ್ತೇನೆ,” ಎಂದು ಅವರು ಹೇಳಿದ್ದರು.

ತಮ್ಮ ಶಿಕ್ಷಣವನ್ನು ಮೂರನೇ ತರಗತಿಯವರೆಗೂ ಪೂರ್ಣಗೊಳಿಸಿದ್ದ ರಾಜು, ನಂತರ ಶಾಲೆ ಬಿಟ್ಟು ಕೆಲಸಕ್ಕೆ ತೆರಳಿದರು. ಹೋಟೆಲ್‌ಗಳಲ್ಲಿ ಕೆಲಸ ಮಾಡಿದರು, ನಂತರ ಲಾರಿ ಕ್ಲೀನರ್‌ ಆಗಿಯೂ ದುಡಿದರು. ಆದರೆ ಅವರ ಮನಸ್ಸು ಸದಾ ರಂಗಭೂಮಿಯತ್ತಲೇ ಸೆಳೆಯಿತು. “ಹೋಟೆಲ್‌ನಲ್ಲಿ ಕೆಲಸ ಮಾಡುವಾಗಲೂ, ಇದು ನನ್ನ ಕೆಲಸ ಅಲ್ಲ ಅನ್ನಿಸುತ್ತಿತ್ತು. ನಾಟಕವೇ ನನ್ನ ಪ್ರಾಣ,” ಎಂದು ಅವರು ನೆನಪಿಸಿಕೊಂಡಿದ್ದರು.

Exit mobile version