ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: 10 ಕೋಟಿ ರೂ. ಹಣ ನೀಡುವಂತೆ ಲಾರೆನ್ಸ್ ಗ್ಯಾಂಗ್ ಧಮ್ಕಿ

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ ರಣವೀರ್ ಸಿಂಗ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ. 10 ಕೋಟಿ ರೂಪಾಯಿ ಹಣವನ್ನು ನೀಡುವಂತೆ ಒತ್ತಾಯಿಸಿ ಅವರ ಮ್ಯಾನೇಜರ್‌ಗೆ ವಾಯ್ಸ್ ನೋಟ್ ಕಳುಹಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ.

ಮುಂಬೈ ಅಪರಾಧ ವಿಭಾಗದ ಮೂಲಗಳ ಪ್ರಕಾರ, ಅಮೆರಿಕ ಮೂಲದ ಒಂದು ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಮೂಲಕ ಈ ಧ್ವನಿಯನ್ನು ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆ ವಾಯ್ಸ್ ನೋಟ್‌ನಲ್ಲಿ ಬಿಷ್ಣೋಯಿ ಗ್ಯಾಂಗ್‌ನ ಆಪ್ತ ಸಹಚರ ಎಂದು ಗುರುತಿಸಲಾದ ಹ್ಯಾರಿ ಬಾಕ್ಸರ್ ಧ್ವನಿ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ಸಂಖ್ಯೆಯ ಮೂಲವನ್ನು ಪತ್ತೆಹಚ್ಚಲು ಅಧಿಕಾರಿಗಳು ಅಮೆರಿಕದ ಸಂಬಂಧಿತ ಸಂಸ್ಥೆಗಳೊಂದಿಗೆ ಅಧಿಕೃತ ಸಂಪರ್ಕ ಹೊಂದಿದ್ದಾರೆ.

ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದಲ್ಲಿ ಇತ್ತೀಚೆಗೆ ನಡೆದ ಗುಂಡಿನ ದಾಳಿಯ ಬಳಿಕವೇ ಈ ಬೆದರಿಕೆ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ ನಡೆದ ಕೆಲವೇ ದಿನಗಳಲ್ಲಿ ರಣವೀರ್ ಸಿಂಗ್ ಅವರ ಮ್ಯಾನೇಜರ್‌ಗೆ ಬೆದರಿಕೆ ಕರೆ ಮತ್ತು ವಾಯ್ಸ್ ನೋಟ್ ಬಂದಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.

ಬೆದರಿಕೆ ಬಂದ ತಕ್ಷಣ ರಣವೀರ್ ಸಿಂಗ್ ಅವರ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅವರ ನಿವಾಸ ಮತ್ತು ಕಚೇರಿ ಪ್ರದೇಶಗಳಲ್ಲಿ ಪೊಲೀಸ್ ಕಾವಲು ಹೆಚ್ಚಿಸಲಾಗಿದೆ. ಅಪರಾಧ ವಿಭಾಗವು ನಟರ ಮ್ಯಾನೇಜರ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ. ಈವರೆಗೆ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲದಿದ್ದರೂ, ಪ್ರಾಥಮಿಕ ತನಿಖೆ ಚುರುಕುಗೊಂಡಿದೆ.

ನಟ ರಣವೀರ್ ಸಿಂಗ್ ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ‘ಧುರಂಧರ್  ದಿ ರಿವೆಂಜ್’ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರೊಂದಿಗೆ ಆರ್. ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಕೂಡ ಅಭಿನಯಿಸಿದ್ದಾರೆ. ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

‘ಧುರಂಧರ್’ ಚಿತ್ರವು ಎರಡು ಭಾಗಗಳ ಸರಣಿಯಾಗಿದ್ದು, ರಹಸ್ಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತ ಕಥೆಯನ್ನು ಹೊಂದಿದೆ. ಭಾರತವನ್ನು ಗುರಿಯಾಗಿಸಿಕೊಂಡು ರಚಿಸಲಾದ ಅಂತರಾಷ್ಟ್ರೀಯ ಭಯೋತ್ಪಾದಕ ಜಾಲವನ್ನು ನಾಶಮಾಡುವ ಪ್ರಯತ್ನದಲ್ಲಿ ಪಾಕಿಸ್ತಾನ ಮತ್ತು ಕರಾಚಿಯ ಕ್ರಿಮಿನಲ್ ಸಿಂಡಿಕೇಟ್‌ಗಳೊಳಗೆ ನುಸುಳುವ ಭಾರತೀಯ ರಹಸ್ಯ ಏಜೆಂಟ್ ಕಥೆಯನ್ನು ಈ ಚಿತ್ರ ತೋರಿಸುತ್ತದೆ.

ಈ ನಡುವೆ ರಣವೀರ್ ಸಿಂಗ್ ಅವರಿಗೆ ಬಂದಿರುವ ಬೆದರಿಕೆ ಪ್ರಕರಣ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಷ್ಣೋಯಿ ಗ್ಯಾಂಗ್‌ನ ಹೆಸರಿನಲ್ಲಿ ಬಂದಿರುವ ಈ ಧಮ್ಕಿ ನಿಜವಾಗಿಯೂ ಗ್ಯಾಂಗ್‌ನಿಂದ ಆಗಿದೆಯೇ ಅಥವಾ ಮತ್ತೊಬ್ಬರ ದುರುದ್ದೇಶಿತ ಪ್ರಯತ್ನವೇ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ..

Exit mobile version