ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟಿ ರಚಿತಾ ರಾಮ್ ವಿರುದ್ಧ ‘ಸಂಜು ವೆಡ್ಸ್ ಗೀತಾ-2’ ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಸಹಕರಿಸದ ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್ ಚೇಂಬರ್) ದೂರು ದಾಖಲಾಗಿದೆ. ಚಿತ್ರದ ನಿರ್ದೇಶಕ ನಾಗಶೇಖರ್ ಮತ್ತು ನಾಯಕ ನಟ ಶ್ರೀನಗರ ಕಿಟ್ಟಿ ದೂರು ಸಲ್ಲಿಸಿದ್ದಾರೆ.
‘ಸಂಜು ವೆಡ್ಸ್ ಗೀತಾ-2’ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ. ಆದರೆ, ನಾಯಕಿ ರಚಿತಾ ರಾಮ್ ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.
ಈ ಬಗ್ಗೆ ಕಿಡಿಕಾರಿರುವ ನಿರ್ದೇಶಕ ನಾಗಶೇಖರ್, “ರಚಿತಾ ರಾಮ್ ಚಿತ್ರದ ಪ್ರಚಾರಕ್ಕೆ ಒಂದಿಷ್ಟೂ ಸಹಕಾರ ನೀಡಿಲ್ಲ. ಇಂತಹ ಕಲಾವಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಫಿಲ್ಮ್ ಚೇಂಬರ್ ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚೇತನ್ ಚಂದ್ರ ಮತ್ತು ರಾಗಿಣಿ ದ್ವಿವೇದಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಛಲವಾದಿ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ, ಮತ್ತು ಸತ್ಯ ಹೆಗ್ಡೆ ಛಾಯಾಗ್ರಹಣ ನಿರ್ವಹಿಸಿದ್ದಾರೆ.