ಹೈದರಾಬಾದ್: ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇಡೀ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಯುದ್ಧದ ಕಿಚ್ಚು ನೆರೆಯ ರಾಷ್ಟ್ರಗಳಿಗೂ ಹರಡುತ್ತಿರುವ ಬೆನ್ನಲ್ಲೇ, ಜೋರ್ಡನ್ನಲ್ಲಿ ಬೀಡುಬಿಟ್ಟಿದ್ದ ‘ಡ್ರ್ಯಾಗನ್’ (ತಾತ್ಕಾಲಿಕ ಶೀರ್ಷಿಕೆ) ಚಿತ್ರತಂಡವು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ತಾಯ್ನಾಡಿಗೆ ಮರಳಿದೆ.
ಜೋರ್ಡನ್ನಲ್ಲಿ ನಡೆದಿದ್ದೇನು?
ಕೆಜಿಎಫ್ ಮತ್ತು ಸಲಾರ್ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವ ಪ್ರಶಾಂತ್ ನೀಲ್, ಸದ್ಯ ಜೂನಿಯರ್ ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಅತ್ಯಂತ ಪ್ರಮುಖವಾದ ಆಕ್ಷನ್ ಸೀನ್ಗಳನ್ನು ಚಿತ್ರೀಕರಿಸಲು ಚಿತ್ರತಂಡವು ಜೋರ್ಡನ್ನ ಮರುಭೂಮಿಗೆ ತೆರಳಿತ್ತು. ಅಲ್ಲಿನ ಕಠಿಣ ಭೂಪ್ರದೇಶದಲ್ಲಿ ಹೈ-ವೋಲ್ಟೇಜ್ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು.
ಆದರೆ, ಫೆಬ್ರವರಿ ಕೊನೆಯ ವಾರದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾದ ಬೆನ್ನಲ್ಲೇ, ಜೋರ್ಡನ್ ಗಡಿ ಭಾಗಗಳಲ್ಲಿಯೂ ಉದ್ವಿಗ್ನತೆ ಕಾಣಿಸಿಕೊಂಡಿತು. ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಯಾವುದೇ ರಿಸ್ಕ್ ತೆಗೆದುಕೊಳ್ಳದ ಪ್ರಶಾಂತ್ ನೀಲ್, ನಿಗದಿತ ಸಮಯಕ್ಕಿಂತ ಮೊದಲೇ ಶೂಟಿಂಗ್ ಮುಗಿಸಿ ತಂಡದೊಂದಿಗೆ ಭಾರತಕ್ಕೆ ಮರಳಲು ನಿರ್ಧರಿಸಿದರು.
ಸುರಕ್ಷಿತವಾಗಿ ಹೈದರಾಬಾದ್ ತಲುಪಿದ ತಂಡ
ಫೆಬ್ರವರಿ 25ರ ಸುಮಾರಿಗೆ ಜೋರ್ಡನ್ ಶೆಡ್ಯೂಲ್ ಅನ್ನು ಯಶಸ್ವಿಯಾಗಿ ಮುಗಿಸಿದ ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ತಂಡವು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ತಾರಕ್ (Jr. NTR) ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಸುರಕ್ಷಿತವಾಗಿ ಮರಳಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯಕ್ಕೆ ಯುದ್ಧದ ಪರಿಸ್ಥಿತಿ ತಿಳಿಯಾಗುವವರೆಗೆ ವಿದೇಶಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗದೆ.
ಜೂ.NTR ಗೆ ಕನ್ನಡದ ರುಕ್ಮಿಣಿ ವಸಂತ್ ಜೋಡಿ
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಜೂನಿಯರ್ ಎನ್ಟಿಆರ್ ಅವರಿಗೆ ಜೋಡಿಯಾಗಿ ಕನ್ನಡದ ಬೆಡಗಿ, ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಿರ್ದೇಶಕ ಮತ್ತು ಕನ್ನಡದ ನಟಿಯ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾವು ಭಾರಿ ಕುತೂಹಲ ಮೂಡಿಸಿದೆ.





