ಅಣ್ಣಾವ್ರ ಅಪಹರಣ & ಕ್ರೈಂ ರೇಟ್‌ ಗುಟ್ಟು..ಆಂಧ್ರ ಡಿಸಿಎಂನಿಂದ ರಟ್ಟು..!

ಉಸ್ತಾದ್ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಪವನ್ ಸ್ಟೇಟ್ಮೆಂಟ್

Untitled design 2026 03 18T135602.530

ಸಿನಿಮಾಗೂ ಕ್ರೈಂ ರೇಟ್‌ಗೂ ನೇರವಾಗಿ ಲಿಂಕ್ ಇದೆಯಂತೆ. ಈ ಬಗ್ಗೆ ಆಂಧ್ರ ಡಿಸಿಎಂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಯೆಸ್.. ಉಸ್ತಾದ್ ಟ್ರೈಲರ್ ಲಾಂಚ್ ಇವೆಂಟ್‌‌ನಲ್ಲಿ ನಮ್ಮ ನಟಸಾರ್ವಭೌಮ ಡಾ ರಾಜ್‌ಕುಮಾರ್‌‌ ಅಪಹರಣದ ದಿನಗಳನ್ನ ರೀ-ಕಾಲ್ ಮಾಡಿದ್ದಾರೆ. ಅಂದು ಕರ್ನಾಟಕ ಪೊಲೀಸರ ವರದಿ ಏನಾಗಿತ್ತು..? ಪವರ್ ಸ್ಟಾರ್ ಪವನ್ ಕಲ್ಯಾಣ್ ನೀಡಿರೋ ಆ ಅಚ್ಚರಿಯ ಸ್ಟೇಟ್‌ಮೆಂಟ್ ಏನು ಅನ್ನೋದ್ರ ಫುಲ್‌ ಡಿಟೇಲ್ಸ್‌ ಇಲ್ಲಿದೆ..

ಸಿನಿಮಾದಿಂದ ಕ್ರೈಂ ರೇಟ್ ಜಾಸ್ತಿ ಆಗಿದೆ ಅನ್ನೋ ಮಾತಿದೆ. ಅದ್ರಲ್ಲೂ ತಂತ್ರಜ್ಞಾನ ಬೆಳೆದಂತೆ ಹೊಡಿ ಬಡಿ ಕಡಿ ಸಿನಿಮಾಗಳ ಹಾವಳಿ ಹೆಚ್ಚಾಗ್ತಿದೆ. ಆ ರೀತಿಯ ರಕ್ತದೋಕುಳಿ ಹರಿಸೋ ಸಿನಿಮಾಗಳನ್ನ ಜನ ಕೂಡ ಅಷ್ಟೇ ಮುಗಿಬಿದ್ದು ನೋಡ್ತಿದ್ದಾರೆ. ಆದ್ರೆ ಇತ್ತೀಚೆಗೆ ಆಂಧ್ರ ಉಪಮುಖ್ಯಮಂತ್ರಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ನೀಡಿರೋ ಸ್ಟೇಟ್ಮೆಂಟ್ ಒಂದು ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ.

ಸಿನಿಮಾಗೂ ಕ್ರೈಂ ರೇಟ್‌ಗೂ ಸಂಬಂಧವಿದೆ. ಆದ್ರೆ ಸಿನಿಮಾದಿಂದ ಕ್ರೈಂ ರೇಟ್ ಹೆಚ್ಚಾಗಲ್ಲ. ಸಿನಿಮಾಗಳು ಇಲ್ಲದೇ ಇದ್ದಾಗ ಕ್ರೈಂ ಜಾಸ್ತಿ ಆಗುತ್ತೆ ಅಂದಿದ್ದಾರೆ. ಯೆಸ್.. ಹೈದ್ರಾಬಾದ್‌‌ನಲ್ಲಿ ನಡೆದ ಉಸ್ತಾದ್ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಬಹುದೊಡ್ಡ ಜನಸಾಗರವನ್ನ ಉದ್ದೇಶಿಸಿ ಮಾತನಾಡುತ್ತಾ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ ಪವನ್ ಕಲ್ಯಾಣ್. ಅದ್ರಲ್ಲೂ ನಮ್ಮ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ರನ್ನ ಉದಾಹರಣೆ ನೀಡಿ ಮಾತನಾಡಿರೋದು ಇಂಟರೆಸ್ಟಿಂಗ್.

ಯೆಸ್.. ಭಾರತದಲ್ಲಿ ಅದ್ರಲ್ಲೂ ಸೌತ್ ಇಂಡಿಯಾದಲ್ಲಿ ಸಿನಿಮಾ ಅನ್ನೋದು ಬಹಳ ಮುಖ್ಯ ಪಾತ್ರ ವಹಿಸುತ್ತೆ. ಸಿನಿಮಾ ಅನ್ನೋದೇ ಇಲ್ಲ ಅಂದ್ರೆ ಎಷ್ಟೊಂದು ಕ್ರೈಂ ಹೆಚ್ಚಾಗುತ್ತೆ ಅನ್ನೋದನ್ನ ನಾವು ಊಹಿಸೋಕೆ ಆಗಲ್ಲ. ವೀರಪ್ಪನ್ ಈ ಹಿಂದೆ ನಟ ರಾಜ್‌ಕುಮಾರ್ ಅವ್ರನ್ನ ಕಿಡ್ನ್ಯಾಪ್ ಮಾಡಿದಾಗ ಕ್ರೈಂ ರೇಟ್ ದಿಢೀರ್ ಅಂತ ಹೆಚ್ಚಾಗಿತ್ತಂತೆ. ಇದು ಕರ್ನಾಟಕ ಪೊಲೀಸರ ಅವಲೋಕನವಾಗಿತ್ತು. ಸಿನಿಮಾಗಳು ಹಾಗೂ ಸಿನಿಮಾ ಮಂದಿರಗಳನ್ನ ನೂರು ದಿನಕ್ಕೂ ಹೆಚ್ಚು ಕಾಲ ಬಂದ್ ಮಾಡಲಾಗಿತ್ತು. ಸಿನಿಮಾದಲ್ಲೂ ಒಂದಷ್ಟು ವಿಷಯಗಳಿರುತ್ತೆ. ಆದ್ರೆ ಜನರಿಂದ ಸಿನಿಮಾನ ಎಂದೂ ಬೇರ್ಪಡಿಸೋಕೆ ಆಗಲ್ಲ ಎಂದಿದ್ದಾರೆ.

2000ನೇ ಇಸವಿಯ ಜುಲೈ 30ರಂದು ನಟ ರಾಜ್‌‌ಕುಮಾರ್‌ ಅವ್ರನ್ನ ಕಾಡುಗಳ್ಳ ವೀರಪ್ಪನ್ ಗಾಜನೂರಿನಿಂದ ಅಪಹರಿಸಿದ್ದರು. ನವೆಂಬರ್ 15ರ ತನಕ ಬರೋಬ್ಬರಿ 108 ದಿನಗಳ ಕಾಲ ಅವ್ರನ್ನ ಕಾಡಿನಲ್ಲೇ ಇಟ್ಟುಕೊಂಡು ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳ ಜೊತೆ ಆಟ ಆಡಿದ್ರು ನರಹಂತಕ, ದಂತಚೋರ ವೀರಪ್ಪನ್. ಆಗ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಕರ್ನಾಟಕ ಅಕ್ಷರಶಃ ಸ್ತಬ್ಧವಾಗಿತ್ತು. ಸಿನಿಮಾ ಆ್ಯಕ್ಟಿವಿಟೀಸ್ ಅಷ್ಟೇ ಅಲ್ಲ, ಚಿತ್ರಮಂದಿರಗಳಿಗೂ ಬ್ರೇಕ್ ಬಿದ್ದಿತ್ತು. ನೂರಾರು ದಿನಗಳ ಕಾಲ ಸಿನಿಮಾ, ಮನರಂಜನೆ ಇದ್ಯಾವುದೂ ಇರಲಿಲ್ಲ.

ಇದನ್ನೇ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇದೀಗ ವಿವರಿಸಿ ಹೇಳಿದ್ದಾರೆ. ಮನರಂಜನೆ ಈ ದೇಶದ ಆತ್ಮ.. ಅದನ್ನ ಪ್ರೇಕ್ಷಕರಿಂದ ಬೇರ್ಪಡಿಸೋಕೆ ಆಗಲ್ಲ ಅಂದಿದ್ದಾರೆ. ಅಲ್ಲದೆ ಅವರ ಮಾತು ಅಕ್ಷರಶಃ ಸತ್ಯವೂ ಹೌದು. ಅಣ್ಣಾವ್ರ ಸಿನಿಮಾಗಳು ಅಂದ್ರೆ ಇಡೀ ಕರುನಾಡೇ ಮುಗಿಬಿದ್ದು ನೋಡ್ತಿತ್ತು. ಸಾಮಾಜಿಕ ಕಳಕಳಿಯ ಚಿತ್ರಗಳು ಅವಾಗಿದ್ದವು. ಬಂಗಾರದ ಮನುಷ್ಯ ಸಿನಿಮಾ ನೋಡಿದ ಅದೆಷ್ಟೋ ಮಂದಿ ಯುವಕರು ಸಿಟಿ ತೊರೆದು ಮತ್ತೆ ಹಳ್ಳಿ ಸೇರಿದ್ರು. ಖುಷಿಯಿಂದ ಕೃಷಿ ಕಡೆ ಮುಖ ಮಾಡಿದ್ರು. ಮುಜುಗರ ತರಿಸೋ ಅಂತಹ ಯಾವುದೇ ಕಂಟೆಂಟ್ ಅಣ್ಣಾವ್ರ ಚಿತ್ರಗಳಲ್ಲಿ ಇರುತ್ತಿರಲಿಲ್ಲ. ಸಹಜವಾಗಿಯೇ ಜನಕ್ಕೆ ಮನರಂಜನೆಯ ಕೊರತೆ ಆದಾಗ ಬೇರೆ ಬೇರೆ ಮಾರ್ಗಗಳನ್ನ ಹುಡುಕಿಕೊಳ್ತಾರೆ. ಹಾಗಾಗಿಯೇ ಆಗ ಕ್ರೈಂ ರೇಟ್ ಹೆಚ್ಚಾಗಿದ್ರೂ ಅಚ್ಚರಿಯಿಲ್ಲ ಅನ್ನೋದು ಇದರ ತಾತ್ಪರ್ಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version