ನಟ ಮೋಹನ್ ಲಾಲ್ ಮುಸ್ಲಿಂ ಸಮುದಾಯದ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೂ ಮೋಹನ್ ಲಾಲ್ ಅವರೇನೂ ಮುಸ್ಲಿಂ ಧರ್ಮಕ್ಕೆ ವಿರುದ್ಧವಾದ ಹೇಳಿಕೆ ನೀಡಿಲ್ಲ. ಆದರೆ, ಗೆಳೆಯನ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಆಗಿದ್ದೇನೆಂದರೆ ಮೋಹನ್ ಲಾಲ್ ಅಭಿನಯದ ಎಂಪುರಾನ್ ಚಿತ್ರದ ಪ್ರಚಾರಕ್ಕೂ ಮುನ್ನ ಶಬರಿಮಲೆಗೆ ಹೋಗಿದ್ದರು. ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದರು. ಅಷ್ಟೇ ಅಲ್ಲ, ಮೋಹನ್ ಲಾಲ್ ಈ ಸಂಧರ್ಭದಲ್ಲಿ ಸದ್ಯಕ್ಕೆ ಅನಾರೋಗ್ಯದಿಂದ ಬಳಲುತ್ತಿರುವ ಗೆಳೆಯ ನಟ ಮಮ್ಮೂಟಿ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಅದೇ ಈಗ ತಪ್ಪಾಗಿದೆ.
ಮೋಹನ್ ಲಾಲ್ ಶಬರಿಮಲೆಗೆ ಹೋಗಿದ್ಧಾಗ ಮಮ್ಮೂಟಿಯ ಮೂಲ ಹೆಸರು ಮಹಮ್ಮದ್ ಕುಟ್ಟಿ, ಹೆಸರಲ್ಲಿ ವಿಶಾಖಂ ಉಷಾ ಪೂಜೆ ಮಾಡಿಸಿದ್ದಾರೆ. ವಿವಾದ ಆಗಿರೋದೇ ಇದು.ಗೆಳೆಯನ ಚೇತರಿಕೆಗಾಗಿ ಮಾಡಿಸಿದ ಪೂಜೆಯಲ್ಲಿ ಧರ್ಮ ಹುಡುಕಲಾಗಿದೆ. ಓ ಅಬ್ದುಲ್ಲಾ ಎಂಬ ಮುಸ್ಲಿಂ ವ್ಯಕ್ತಿ, ಪತ್ರಕರ್ತ ಇದನ್ನು ಪ್ರಶ್ನೆ ಮಾಡಿದ್ದಾನೆ. ಮಹಮ್ಮದ್ ಕುಟ್ಟಿ ಮುಸ್ಲಿಂ. ಆತನ ಹೆಸರಲ್ಲಿ ಶಬರಿಮಲೆಯಲ್ಲಿ ಪೂಜೆ ಮಾಡಿಸುವುದು ಧರ್ಮಕ್ಕೆ ಎಸಗಿದ ಅಪಚಾರ. ಇದೊಂದು ಕ್ರೈಂ. ಅಲ್ಲಾನನ್ನು ಬಿಟ್ಟು ಬೇರೆ ಯಾವುದೇ ದೇವರನ್ನು ಪೂಜಿಸುವಂತಿಲ್ಲ ಎಂದಿದ್ದಾನೆ.
ಅಯ್ಯೋ.. ಗೆಳೆಯನ ಆರೋಗ್ಯಕ್ಕೆ ಮಾಡಿಸಿದ ಪೂಜೆಯಲ್ಲೂ ಧರ್ಮ ಹುಡುಕಿದ್ರಲ್ಲ.. ಕಾಂಟ್ರವರ್ಸಿ ಯಾಕೆ ಎಂದುಕೊಂಡ ಮೋಹನ್ ಲಾಲ್ ತಕ್ಷಣ ಕ್ಷಮೆ ಕೇಳಿದ್ದಾರೆ. ತಾವು ಮಾಡಿಸಿರುವ ಪೂಜೆಯಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.ಇದಾದ ಮೇಲೆ ಮಮ್ಮೂಟಿ ಆರೋಗ್ಯವಾಗಿದ್ದಾನೆ. ಸಣ್ಣ ಆರೋಗ್ಯ ಸಮಸ್ಯೆ ಇತ್ತಷ್ಟೇ, ಈಗ ಚೇತರಿಸಿಕೊಳ್ತಿದ್ದಾನೆ ಎಂದು ಹೇಳಿದ್ದಾರೆ.
ವಿಚಿತ್ರ ಎಂದರೆ ಮುಸ್ಲಿಂ ನಟ ಮಮ್ಮೂಟಿ ಹೆಸರಲ್ಲಿ ಪೂಜೆ ಮಾಡಿಸಿದ್ದಕ್ಕೆ ಕೆಲವು ಹಿಂದೂ ಸಂಘಟನೆಗಳೂ ಗರಂ ಆಗಿದ್ದವು. ಆದರೆ ಅದು ಸೋಷಿಯಲ್ ಮೀಡಿಯಾದ ಆರ್ಭಟಕ್ಕೆ ಸೀಮಿತವಾಗಿತ್ತು. ಆದರೆ ಹಿಂದೂ ಧರ್ಮಗುರುಗಳು ಕೆಲವರು ಯಾರ ಹೆಸರಲ್ಲಿ ಬೇಕಾದರೂ ಪೂಜೆ ಮಾಡಿಸಬಹುದು. ಅದರಿಂದ ಹಿಂದೂ ಧರ್ಮಕ್ಕೆ ಯಾವ ಅಪಚಾರವೂ ಆಗುವುದಿಲ್ಲ. ಅದು ಅವರವರ ನಂಬಿಕೆ ಎಂದು ಹೇಳಿದ್ದರು.
ಮಾರ್ಚ್ 18ರಂದು ಮೋಹನ್ ಲಾಲ್ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಮಾಲೆ ಧರಿಸಿ ಹೋಗಿದ್ದ ಮೋಹನ್ ಲಾಲ್ ಜೊತೆ ಎಂಪುರಾಂ ತಂಡವೇ ಹೋಗಿತ್ತು.ಇದೇ ವಾರ ಮೋಹನ್ ಲಾಲ್ ಅವರ ಎಂಪುರಾಂ ರಿಲೀಸ್ ಆಗುತ್ತಿದೆ. ಬಹುಶಃ ಇದು ಈ ವರ್ಷದ ಬಿಗ್ ಹಿಟ್ ಆಗುವ ಎಲ್ಲ ಲಕ್ಷಣಗಳನ್ನೂ ತೋರಿಸ್ತಾ ಇದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಲೂಸಿಫರ್ ಚಿತ್ರದ ಸೀಕ್ವೆಲ್ ಆಗಿರುವ ಎಂಪುರಾಂ, ಈಗಾಗಲೇ ಕ್ರೇಜ್ ಹುಟ್ಟುಹಾಕಿದೆ.
ಅಂದ ಹಾಗೆ ಮೋಹನ್ ಲಾಲ್ ಮತ್ತು ಮಮ್ಮೂಟಿ ಇಬ್ಬರೂ ಮಲಯಾಳಂ ಚಿತ್ರರಂಗದ ಆಧಾರ ಸ್ತಂಭಗಳು. ಕನ್ನಡದಲ್ಲಿ ವಿಷ್ಣುವರ್ಧನ್-ಅಂಬರೀಷ್ ನಡುವೆ ಎಂತಹ ಗೆಳೆತನವಿತ್ತೋ.. ಅದೇ ರೀತಿಯ ಗೆಳೆತನ ಮೋಹನ್ ಲಾಲ್ ಮತ್ತು ಮಮ್ಮೂಟಿ ನಡುವೆ ಇದೆ. ಚಿತ್ರಗಳಲ್ಲಿ ಸ್ಪರ್ಧೆ ಇದೆ. ಆದರೆ ಅದ್ಭುತ ಗೆಳೆತನವೂ ಇದೆ. ಆದರೆ, ಗೆಳೆಯನ ಆರೋಗ್ಯಕ್ಕಾಗಿ ಮಾಡಿಸಿದ ಪೂಜೆಯೂ ಈಗ ವಿವಾದವಾಗಿದೆ. ಪೂಜೆ ಮಾಡಿಸಿದ ತಪ್ಪಿಗೆ ಮೋಹನ್ ಲಾಲ್ ಕ್ಷಮೆ ಕೇಳುವಂತಾಗಿದೆ.