“ಮರಳಿ ಮನಸಾಗಿದೆ” ಚಿತ್ರದ “ಓಡುವ ನದಿಗೆ” ಹಾಡು ಬಿಡುಗಡೆಗೊಳಿಸಿದ ನಟಿ ಪ್ರೇಮ

"ಮರಳಿ ಮನಸಾಗಿದೆ" ಚಿತ್ರದ ಕೊನೆಯ ಹಾಡಿಗೆ ಪ್ರೇಕ್ಷಕರ ಮೆಚ್ಚುಗೆ!

0 (7)

ಬೆಂಗಳೂರು: ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್.ಓ. ಮತ್ತು ತೆಲಿಗಿ ಮಲ್ಲಿಕಾರ್ಜುನಪ್ಪ ಅವರ ಚೊಚ್ಚಲ ನಿರ್ಮಾಣದ “ಮರಳಿ ಮನಸಾಗಿದೆ” ಚಿತ್ರದ ನಾಲ್ಕನೇ ಮತ್ತು “ಓಡುವ ನದಿಗೆ” ಎಂಬ ಕೊನೆಯ ಹಾಡನ್ನು ಕನ್ನಡದ ಖ್ಯಾತ ನಟಿ ಪ್ರೇಮ ಅವರು ಬಿಡುಗಡೆಗೊಳಿಸಿ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಈ ಸುಮಧುರ ಗೀತೆಯನ್ನು ಹೆಸರಾಂತ ಸಾಹಿತಿ ಕೆ. ಕಲ್ಯಾಣ್ ಬರೆದಿದ್ದು, ಅನುರಾಧ ಭಟ್ ಹಾಡಿದ್ದಾರೆ, ಮತ್ತು ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ.

A2 ಮ್ಯೂಸಿಕ್ ಮೂಲಕ ಬಿಡುಗಡೆಯಾದ ಈ ಚಿತ್ರದ ನಾಲ್ಕು ಹಾಡುಗಳು ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಪಡೆದಿವೆ. “ಓಡುವ ನದಿಗೆ” ಹಾಡು ಕೂಡ ಜನಮನ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಯನ್ನು ಕಾಣುತ್ತಿದೆ. ಈ ಚಿತ್ರವು ಯುವ ಜನರಿಗೆ ಹತ್ತಿರವಾದ ಕಥಾಹಂದರವನ್ನು ಹೊಂದಿದ್ದು, ಸಂಬಂಧಗಳ ಮೌಲ್ಯವನ್ನು ಒತ್ತಿಹೇಳುವ ಕೌಟುಂಬಿಕ ಚಿತ್ರವಾಗಿದೆ.

ಚಿತ್ರದ ಚಿತ್ರೀಕರಣವು ಮುಕ್ತಾಯವಾಗಿದ್ದು, ಪೋಸ್ಟ್-ಪ್ರೊಡಕ್ಷನ್ ಕಾರ್ಯವು ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆ. ನಿರ್ದೇಶಕ ನಾಗರಾಜ್ ಶಂಕರ್ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಮತ್ತು ಸಂಭಾಷಣೆ ಬರೆದಿದ್ದು, ವಿನು ಮನಸು ಸಂಗೀತ, ಹಾಲೇಶ್ ಎಸ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ಆಶಿತ್ ಸುಬ್ರಹ್ಮಣ್ಯ ಸಹ ನಿರ್ದೇಶನ, ಮತ್ತು ವಿಜಯ್ ಕುಮಾರ್ ಅವರ ನಿರ್ಮಾಣ ಮೇಲ್ವಿಚಾರಣೆಯನ್ನು ಹೊಂದಿದೆ.

ಚಿತ್ರದ ತಾರಾಬಳಗದಲ್ಲಿ ಅರ್ಜುನ್ ವೇದಾಂತ್, ನಿರೀಕ್ಷಾ ಶೆಟ್ಟಿ, ಸ್ಮೃತಿ ವೆಂಕಟೇಶ್, ಟಿ.ಎಸ್. ನಾಗಭರಣ, ಸ್ವಾತಿ, ಸಂಗೀತ, ಮಾನಸಿ ಸುಧೀರ್, ಭೋಜರಾಜ್ ವಾಮಂಜೂರ್, ಸೀರುಂಡೆ ರಘು ಮುಂತಾದವರು ನಟಿಸಿದ್ದಾರೆ.

Exit mobile version