“ಡಬಲ್ ಇಂಜಿನ್”, “ಫಾರೆಸ್ಟ್” ಖ್ಯಾತಿಯ ಚಂದ್ರಮೋಹನ್ ಅವರ ನಿರ್ದೇಶನದ “ಲವ್ ಟುವರ್ಡ್ಸ್ ಫ್ಯಾಮಿಲಿ” ಚಿತ್ರದ “ಕುಂದಾಪುರದ ಹೆಣ್ಣಿವಳು” ಎಂಬ ಹಾಡಿನ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ನಾಗಾರ್ಜುನ ಶರ್ಮ ಅವರ ರಚನೆ, ವಿಜಯ್ ಪ್ರಕಾಶ್ ಗಾಯನ ಹಾಗೂ ಆನಂದಲೀಲಾ ಅವರ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ನಟ ಮನೋರಂಜನ್ ಅನಾವರಣ ಮಾಡಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಭರ್ಜರಿ ಚೇತನ್ ಕುಮಾರ್, ನಿರ್ದೇಶಕ ಮಹೇಶ್ ಕುಮಾರ್, ನಟ ಮಂಜು ಪಾವಗಡ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಲಿಂಗರಾಜ್ ಬೀದರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ನವನಟ ಧೀರಜ್, ರಾಧೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
ನಿರ್ದೇಶಕ ಚಂದ್ರಮೋಹನ್ ಮಾತನಾಡುತ್ತ “ಫಾರೆಸ್ಟ್” ಚಿತ್ರದ ನಂತರ ಧೀರಜ್ ನಾನು ಸೇರಿ ಒಂದು ಕಥೆ ಮಾಡಿಕೊಂಡಿದ್ದೆವು. ಅದನ್ನೇ ಹೋಲುವ ಕಥೆ ಏಳುಮಲೆ ಚಿತ್ರದಲ್ಲಿತ್ತು. ನಂತರ ಬೇರೆಯದೇ ಕಥೆ ಮಾಡಿದೆವು. ಇದು ಒಂದು ಸಾವು, ತಿಥಿಯ ನಡುವೆ 11 ದಿನಗಳಲ್ಲಿ ನಡೆಯುವ ಕಥೆ. ಇದರ ಮಧ್ಯೆ ಒಂದು ಲವ್ ಸ್ಟಾರ್ಟ್ ಆಗುತ್ತೆ. ನಾಯಕ, ನಾಯಕಿ ಇಬ್ಬರ ಮೇಲೆ ಹೆಚ್ಚಿನ ಕಥೆ ಸಾಗುತ್ತದೆ. ಚಿತ್ರದಲ್ಲಿ 3 ಹಾಡುಗಳಿದ್ದು, ರಾಜೇಶ್ ಆನಂದಲೀಲಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಕುಂದಾಪುರ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದರು.
ನಾಯಕ ಧೀರಜ್ ಮಾತನಾಡಿ ಮೈಸೂರಿನ ರಂಗವಲ್ಲಿ ತಂಡದಲ್ಲಿದ್ದ ನಾನು, ನಂತರ ‘ಮದಗಜ’ದಲ್ಲಿ, ಸೀರಿಯಲ್ ಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ. ಕಳೆದ ಜುಲೈನಲ್ಲಿ ಶುರುವಾದ ಜರ್ನಿಯಿದು. ನಾನು ನಿರ್ದೇಶಕರು ಇಬ್ಬರೂ ಸೇರಿ ಪಾರ್ಕ್ ನಲ್ಲಿ ಕುಳಿತು ಕಥೆ ಶುರು ಮಾಡಿದ್ದೆವು. ಸಾಕಷ್ಟು ಚರ್ಚೆಗಳ ನಂತರ ಕಥೆ ಫೈನಲ್ ಆಯ್ತು. ನಮ್ಮ ಕನಸಿಗೆ ಬಲ ಕೊಟ್ಟಿದ್ದು ನಿರ್ಮಾಪಕರು ಎಂದು ಹೇಳಿದರು. ನಿರ್ಮಾಪಕ ಲಿಂಗರಾಜ್ ಬೀದರ್ ಮಾತನಾಡಿ ಇದು ನನ್ನ ನಿರ್ಮಾಣದ ಮೊದಲ ಚಿತ್ರ. ನಾನು ಈ ಸಿನಿಮಾ ಪ್ರಾರಂಭಿಸಲು ಕಾರಣ ನಾಯಕ ಹಾಗೂ ನಿರ್ದೇಶಕರು. ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಹೇಳಿದರು.
ನಾಯಕಿ ರಾಧೆ ಇದು ನನ್ನ ಮೊದಲ ಚಿತ್ರ. ಈಗಿನ ಜನರೇಶನ್ ಗೆ ಆಪ್ಟ್ ಆಗುವ ಕಥೆ ಎಂದರು. ಸಾಹಿತಿ ನಾಗಾರ್ಜುನ ಶರ್ಮ ಹಾಡುಗಳ ಬಗ್ಗೆ ವಿವರಿಸಿದರು.
