ಮಡೆನೂರು ಮನು ಅ*ಚಾರ ಪ್ರಕರಣ: ಇಂದು 6ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ

Befunky collage 2025 05 23t104735.453

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಂದು (ಮೇ 26, 2025) ಮಧ್ಯಾಹ್ನ 12 ಗಂಟೆಗೆ ಆರೋಪಿಯನ್ನು ಬೆಂಗಳೂರಿನ 6ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಕೋರ್ಟ್ ಇಂದು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡುವ ಸಾಧ್ಯತೆಯಿದೆ.

ಪೊಲೀಸರು ಈಗಾಗಲೇ ಮಡೆನೂರು ಮನು ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಶಿವಮೊಗ್ಗದ ಶಿಕಾರಿಪುರದ ಮಯೂರ ಲಾಡ್ಜ್‌ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ, ಜೊತೆಗೆ ಬೆಂಗಳೂರಿನ ನಾಗರಭಾವಿ 2ನೇ ಹಂತದಲ್ಲಿರುವ ಸಂತ್ರಸ್ತೆಯ ಮನೆಯಲ್ಲೂ ಮಹಜರು ಪೂರ್ಣಗೊಳಿಸಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿಯಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಮತ್ತೆ ಕಸ್ಟಡಿಗೆ ಕೋರದಿರಲು ತೀರ್ಮಾನಿಸಿದ್ದಾರೆ.

2022ರಲ್ಲಿ ಶಿಕಾರಿಪುರದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಂಭಾವನೆ ನೀಡುವ ನೆಪದಲ್ಲಿ ತನ್ನನ್ನು ಲಾಡ್ಜ್‌ಗೆ ಕರೆದು ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾದ ಬಳಿಕ ಆರೋಪಿ ಹಾಸನದ ಶಾಂತಿಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ, ಆದರೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

Exit mobile version