ಲ್ಯಾಂಡ್‌ಲಾರ್ಡ್‌ಗೆ BGS ಪ್ರಕಾಶನಾಥ ಸ್ವಾಮಿಗಳ ಗುರುಬಲ

ವಿಜಯ್ ನಟನೆ, ಶಿಕ್ಷಣದ ಮಹತ್ವ, ನಿರ್ಮಾಣದ ಬಗ್ಗೆ ಪ್ರಶಂಸೆ

BeFunky collage 2026 02 01T142234.584

ಗುರುಬಲ ಒಂದಿದ್ರೆ ಸಾಕು ಯಾರು ಏನು ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಲ್ಯಾಂಡ್‌ಲಾರ್ಡ್‌ಗೆ ಬಿಜಿಎಸ್ ಪ್ರಕಾಶನಾಥ ಸ್ವಾಮಿಗಳ ಬೆಂಬಲ ಸಿಕ್ಕಿದೆ. ವಿಶೇಷ ಪ್ರದರ್ಶನದಲ್ಲಿ ಸಿನಿಮಾನ ಕಣ್ತುಂಬಿಕೊಂಡ ಗುರುಗಳು, ಸಿನಿಮಾನ ಕೊಂಡಾಡಿ, ಇಡೀ ತಂಡವನ್ನು ಶ್ಲಾಘಿಸಿದ್ದಾರೆ. ಇಷ್ಟಕ್ಕೂ ಪ್ರಕಾಶನಾಥ ಗುರುಗಳು ಹೇಳಿದ್ದೇನು..? ಅದಕ್ಕೆ ದುನಿಯಾ ವಿಜಯ್, ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದು ಹೇಗೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ.

ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ ಹಾಗೂ ರಚಿತಾ ರಾಮ್ ನಟನೆಯ ಲ್ಯಾಂಡ್‌ಲಾರ್ಡ್ ನಿಜಕ್ಕೂ ನಮ್ಮ ಕನ್ನಡ ಚಿತ್ರರಂಗದ ಪಾಲಿಗೆ ಒಂದು ಲ್ಯಾಂಡ್‌ಮಾರ್ಕ್‌ ಸಿನಿಮಾ. ಯಾಕಂದ್ರೆ ಮನರಂಜನೆಗಾಗಿ ಸಿನಿಮಾಗಳನ್ನ ಮಾಡೋರ ನಡುವೆ ಮನೋವಿಕಾಸಕ್ಕಾಗಿ ಚಿತ್ರ ಮಾಡಿದ್ದಾರೆ. ಹಾಗಂತ ಎಂಟರ್‌ಟೈನ್ಮೆಂಟ್‌ಗೇನೂ ಕಮ್ಮಿ ಇಲ್ಲ. ಎಲ್ಲಾ ಕಮರ್ಷಿಯಲ್ ಅಂಶಗಳ ನೆಲೆಗಟ್ಟಿನಲ್ಲೇ ಈ ಸಿನಿಮಾನ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್ ಜಡೇಶ್ ಕೆ ಹಂಪಿ. ಹಾಗಾಗಿಯೇ ಸಮಾಜದ ಎಲ್ಲಾ ವರ್ಗಗಳು ಈ ಚಿತ್ರಕ್ಕೆ ಅಭೂತಪೂರ್ವ ಪ್ರಶಂಸೆ, ಪ್ರತಿಕ್ರಿಯೆಗಳನ್ನ ನೀಡ್ತಿದೆ.

ಲ್ಯಾಂಡ್‌ಲಾರ್ಡ್‌ಗೆ BGS ಪ್ರಕಾಶನಾಥ ಸ್ವಾಮಿಗಳ ಗುರುಬಲ

ವಿಜಯ್ ನಟನೆ, ಶಿಕ್ಷಣದ ಮಹತ್ವ, ನಿರ್ಮಾಣದ ಬಗ್ಗೆ ಪ್ರಶಂಸೆ

ಚಿತ್ರಪ್ರೇಮಿಗಳ ಜೊತೆ ರಾಜಕಾರಣಿಗಳು, ಸಿನಿಮಾ ಸ್ಟಾರ್‌ಗಳು, ತಂತ್ರಜ್ಞರು, ಸ್ವಾಮೀಜಿಗಳು ಕೂಡ ಲ್ಯಾಂಡ್‌ಲಾರ್ಡ್‌ಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಕಾರಣ ಸಮಾಜಕ್ಕೆ ಹತ್ತಿರವಾದ ವಿಷಯಗಳು ಚಿತ್ರದ ಕಥಾವಸ್ತುವಾಗಿದೆ. ಸಾಂವಿಧಾನಿಕ ಅಂಶಗಳು ಈ ಚಿತ್ರದ ಜೀವಾಳ. ಕೋಲಾರ ಭಾಷೆಯಲ್ಲಿ ಸಿನಿಮಾ ಮೂಡಿಬಂದಿದ್ದು, 80ರ ದಶಕದ ಕಾಲಘಟ್ಟದ ಹಿನ್ನೆಲೆಯಲ್ಲಿ ತಯಾರಾಗಿದೆ. ಜಮೀನ್ದಾರ ಹಾಗೂ ಕೂಲಿಕಾರರ ನಡುವಿನ ಸಂಘರ್ಷದ ಕಥೆಯಲ್ಲಿ ಭೂಮಿಗಾಗಿ ಹೋರಾಟ, ಅಕ್ಷರ ಜ್ಞಾನದ ಮಹತ್ವ, ಮೂಲಭೂತ ಹಕ್ಕುಗಳಿಗಾಗಿ ಹೋರಾಟದ ವಿಷಯಗಳು ಪ್ರಾಮುಖ್ಯತೆ ಪಡೆದಿವೆ.

ಸಿನಿಮಾಗೆ ಪ್ರಶಂಸೆ & ಪ್ರತಿಕ್ರಿಯೆಗಳ ಸುರಿಮಳೆ.. ಟೀಂ ಖುಷ್

ಸಾಮಾಜಿಕ ಕಳಕಳಿ ಸಿನಿಮಾಗಳು ಗೆಲ್ಲಬೇಕು, ವಿಜೃಂಭಿಸಬೇಕು

ಇತ್ತೀಚೆಗೆ ಬಿಜಿಎಸ್ ಹಾಗೂ ಎಸ್‌ಜೆಬಿ ಸಮೂಹ ಸಂಸ್ಥೆಗಳ ಎಂ.ಡಿ ಆದಂತಹ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳು ಈ ಲ್ಯಾಂಡ್‌ಲಾರ್ಡ್‌ ಸಿನಿಮಾನ ವೀಕ್ಷಿಸಿದರು. ಒರಾಯನ್ ಮಾಲ್‌‌ನಲ್ಲಿ ವಿಶೇಷ ಪ್ರದರ್ಶನದ ಬಳಿಕ ಮಾತನಾಡಿದ ಗುರುಗಳು, ಸಿನಿಮಾನ, ಕಲಾವಿದರ ಎಫರ್ಟ್‌‌ಗಳನ್ನ, ನಿರ್ಮಾಪಕರನ್ನ ಹಾಗೂ ನಿರ್ದೇಶಕರನ್ನ ಕೊಂಡಾಡಿದ್ರು. ಹೊಲವನ್ನು ಉಳುವವನೇ ಭೂಮಿಯ ಒಡೆಯ ಅನ್ನೋದು ಆ ಕಾಲದಲ್ಲಿ ಇತ್ತು. ಹಳ್ಳಿಗಳಲ್ಲಿ ಜಮೀನ್ದಾರರ ಕಪಿಮುಷ್ಠಿಯಲ್ಲಿ ಜಮೀನು ಇರ್ತಿತ್ತು. ಆ ಜಮೀನನ್ನ ಯಾವ ರೀತಿ ಪಡೆಯಬಹುದು ಅನ್ನೋದನ್ನ ಚೆನ್ನಾಗಿ ತೋರಿಸಿದ್ದಾರೆ ಎಂದರು.

ವಿದ್ಯಾಭ್ಯಾಸ ಪಡೆದರೆ ಅದು ಹಳ್ಳಿಗಳಲ್ಲಿ ಬದಲಾವಣೆಗೆ ಎಂತಹ ನಾಂದಿ ಹಾಡುತ್ತೆ ಅನ್ನೋದನ್ನ ಚಿತ್ರದಲ್ಲಿ ತೋರಿಸಿದ್ದಾರೆ. ಒಬ್ಬ ರೈತನಿಗೆ ಎರಡು ಎಕರೆ ಭೂಮಿ ಎಷ್ಟು ಮುಖ್ಯವಾಗುತ್ತೆ ಅನ್ನೋದನ್ನ ಚಿತ್ರದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ ಎಂದರು.

ನಿರ್ಮಾಪಕ ಸತ್ಯ ಪ್ರಕಾಶ್ ಅವರು ಸಾರಥಿ ಸಿನಿಮಾ ಮಾಡಿದಾಗಿನಿಂದಲೂ ನನಗೆ ಬಹಳ ಪರಿಚಯಸ್ಥರು. ಒಳ್ಳೆಯ ಸಿನಿಮಾ ಮಾಡಿದ್ದಾರೆ. ವಿಜಯ್ ಅವರ ಅಭಿನಯ ಅದ್ಭುತ. ಕಲಾವಿದನಿಗೆ ಜಾತಿ ಇಲ್ಲ. ಎಲ್ಲರೂ ಅಭಿನಯಿಸ್ತಾರೆ. ಆದ್ರೆ ಇವರಲ್ಲಿ ವಿಶೇಷ ಶಕ್ತಿ ಇದೆ.. ಹಾಗಾಗಿ ಪಾತ್ರಕ್ಕೆ ಜೀವವನ್ನೇ ತುಂಬಿದ್ದಾರೆ ಅಂತ ಶ್ಲಾಘಿಸಿದರು.

ಇಂತಹ ಸಿನಿಮಾ, ಈ ಬಗೆಯ ಕಲಾವಿದರಿಗೆ ನಾವುಗಳು ಪ್ರೋತ್ಸಾಹ ನೀಡಬೇಕು. ಪರಭಾಷಾ ಚಿತ್ರಗಳು ಬಂದಾಗ ಒಪ್ಪುತ್ತಾರೆ.. ಕನ್ನಡಿಗರಿಗಾಗಿ..ಹಳ್ಳಿಗಳಿಗಾಗಿ ಸಿನಿಮಾ ಮಾಡಿದ್ದಾರೆ.. ತಪ್ಪದೇ ನೋಡಿ ಅಂತ ಕರೆ ನೀಡಿದ್ರು ಪ್ರಕಾಶನಾಥ ಗುರುಗಳು.

ಇನ್ನು ಸ್ವತಃ ಗುರುಗಳು ಈ ಸಿನಿಮಾ, ಅದರ ಆಶಯ ಹಾಗೂ ನಟನೆಯನ್ನ ಕೊಂಡಾಡಿದ ಪರಿಗೆ ಧನ್ಯವಾದ ತಿಳಿಸಿದ್ರು ನಾಯಕಟನ ದುನಿಯಾ ವಿಜಯ್.

ಪ್ರಕಾಶನಾಥ ಗುರುಗಳ ಪಾದಗಳಿಗೆ ವಂದಿಸುತ್ತಾ ಮಾತನಾಡಿದ ನಿರ್ಮಾಪಕ ಸತ್ಯ ಪ್ರಕಾಶ್, ಇದು ಒಂದು ವರ್ಗದ ಸಿನಿಮಾ ಅಲ್ಲ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಸಲ್ಲುವ ಸಿನಿಮಾ ಎಂದರು.

ಒಟ್ಟಾರೆ ಲ್ಯಾಂಡ್‌ಲಾರ್ಡ್‌ ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ತಿದ್ದು, ಬಾಕ್ಸ್ ಆಫೀಸ್‌‌ನಲ್ಲಿ ಕೂಡ ಸಖತ್ ಸೌಂಡ್ ಮಾಡ್ತಿದೆ. ಸದಭಿರುಚಿಯ ಚಿತ್ರಗಳು ಬಂದಾಗ ಅವುಗಳನ್ನ ಉಳಿಸಿಕೊಳ್ಳೋದು, ಅವ್ರ ಸಿನಿಮೋತ್ಸಾಹ ಹೆಚ್ಚಿಸೋದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಲ್ಯಾಂಡ್‌ಲಾರ್ಡ್‌ ಚಿತ್ರವನ್ನ ಇನ್ನೂ ಯಾರೆಲ್ಲಾ ನೋಡಿಲ್ಲವೋ ಅವರೆಲ್ಲಾ ಆದಷ್ಟು ಬೇಗ ಹತ್ತಿರದ ಥಿಯೇಟರ್‌ಗಳಲ್ಲಿ ಕುಟುಂಬ ಸಮೇತ ನೋಡಿ.

 

 

Exit mobile version