ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ಜನಪ್ರಿಯ ನಟಿ ಕಾವ್ಯಾ ಶಾಸ್ತ್ರಿ ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ. ಲಾಕ್ಡೌನ್ ವೇಳೆ ಹಲವಾರು ಜನರ ನೆರವಿಗೆ ಧಾವಿಸಿದ ಅವರು, ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಪ್ಲಾಸ್ಮಾ ದಾನ ಕೂಡ ಮಾಡಿದ್ದರು. ಅಲ್ಲದೇ, ಸಂಕಷ್ಟದಲ್ಲಿದ್ದ ಹಲವಾರು ಕುಟುಂಬಗಳಿಗೆ ದಿನಸಿ ವಿತರಿಸುವ ಮೂಲಕ ಸಹಾಯ ಮಾಡಿದ್ದರು.
ಈಗ, ತಮ್ಮ ತಂದೆಗಾಗಿ ಭಿಕ್ಷೆ ಬೇಡಿ ಊಟ ಮಾಡಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 2020ರ ಕೊರೊನಾ ಸಮಯದಲ್ಲಿ ತಂದೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತಿದ್ದರು. ಅದರಲ್ಲಿ ಒಂದಾಗಿರುವ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಭಿಕ್ಷೆ ಬೇಡಿ, ಅದರಿಂದಲೇ ದಿನಪೂರ್ತಿ ಊಟ ಮಾಡುವೆ ಎಂದು ಹರಕೆ ಹೊತ್ತಿದ್ದರು. ಆಹರಕೆ ನೆರವೇರಿಸುವ ಸೌಭಾಗ್ಯ ಇವಾಗ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.
ಹರಕೆ, ಅಂಧಶ್ರದ್ಧೆ ಅಲ್ಲ!
“ಇದು ಅಂಧಶ್ರದ್ಧೆ ಅಲ್ಲ. ಕಷ್ಟ ಬಂದಾಗ ನಾವು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಒಂದು ಪವಿತ್ರತೆ ಇದೆ. ಅದು ಅಹಂಕಾರ ಮತ್ತು ಮೋಹವನ್ನು ಕಳೆಸುತ್ತದೆ” ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿ
ನಟಿ ಕಾವ್ಯಾ ಶಾಸ್ತ್ರಿ ತಮ್ಮ ಚಿಕ್ಕಪ್ಪನ ಕ್ಯಾನ್ಸರ್ ಪೀಡಿತ ಅನುಭವವನ್ನು ಮನಗಂಡು, ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ್ದಲ್ಲದೇ, ಮಾನಸಿಕ ಒತ್ತಡ ಎದುರಿಸುವ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ವಿಡಿಯೋಗಳನ್ನು ಮಾಡುತ್ತಾರೆ. ಒಂದು ಕಾಲದಲ್ಲಿ ಡಿಪ್ರೆಶನ್ನಿಂದ ಬಳಲಿದ್ದ ತಮ್ಮ ಅನುಭವ ಹಂಚಿಕೊಂಡು, ಇತರರಿಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾವ್ಯಾ ಶಾಸ್ತ್ರಿಯ ನಟನಾ ಜೀವನ
‘ಬಿಗ್ ಬಾಸ್ 10’ ಮೂಲಕ ಹೆಚ್ಚಿನ ಪ್ರಖ್ಯಾತಿ ಪಡೆದ ಅವರು, ‘ಜಾನಕಿ ಸಂಸಾರ’ ಎಂಬ ಧಾರಾವಾಹಿ ಮೂಲಕ ಪುನಃ ಖ್ಯಾತಿ ಗಳಿಸಿದ್ದಾರೆ. ‘ಶುಭವಿವಾಹ’ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ, ತಮಿಳು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ‘ಲವ್ 360’, ‘ಚೆಲುವೆಯೇ ನಿನ್ನ ನೋಡಲು’, ‘ಯುಗ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉದಯ ಮ್ಯೂಸಿಕ್ ವಾಹಿನಿಯಲ್ಲಿ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ ಅವರು, ಪ್ರಸ್ತುತ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.