ದರ್ಶನ್ ಫ್ಯಾನ್ಸ್ ಆಶ್ಲೀಲ ಕಾಮೆಂಟ್‌ ಕೇಸ್: ನಟಿ ರಮ್ಯಾ ದೂರಿನ ಅನ್ವಯ FIR ದಾಖಲು

Untitled design 2025 07 28t231219.745

ಬೆಂಗಳೂರು, ಜುಲೈ 28, 2025: ಕನ್ನಡ ಚಿತ್ರರಂಗದ ನಟಿ ರಮ್ಯಾ ಮತ್ತು ನಟ ದರ್ಶನ್ ಅಭಿಮಾನಿಗಳ ನಡುವಿನ ಸಾಮಾಜಿಕ ಜಾಲತಾಣದ ಕಾಮೆಂಟ್ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ರಮ್ಯಾ ಅವರ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಮಾಡಲಾದ ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ರಮ್ಯಾ ದೂರು ದಾಖಲಿಸಿದ್ದು, ಈ ಪ್ರಕರಣಕ್ಕೆ ಮಹಿಳಾ ಆಯೋಗ ಕೂಡ ಗಮನ ಹರಿಸಿದೆ. ಇದೀಗ ರಮ್ಯಾ ಅವರು ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ, ದರ್ಶನ್ ಅಭಿಮಾನಿಗಳ ವಿರುದ್ಧ ಔಪಚಾರಿಕ ದೂರು ಸಲ್ಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಮೋದ್ ಗೌಡ ಸೇರಿದಂತೆ 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಐಟಿ ಆಕ್ಟ್ ಹಾಗೂ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 351(2), 351(3), 352, 75(1), 75(1)(IV), ಮತ್ತು 79 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಮ್ಯಾ ಅವರ ದೂರು 

ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಲಾದ ಅಶ್ಲೀಲ ಕಾಮೆಂಟ್‌ಗಳ ಬಗ್ಗೆ ದೂರು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನ ಒಂದು ಆದೇಶವನ್ನು ರಮ್ಯಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಪೋಸ್ಟ್‌ಗೆ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಭಾಷೆಯಲ್ಲಿ ಕಾಮೆಂಟ್‌ಗಳು ಬಂದಿವೆ. ಕೆಲವರು ಅತ್ಯಂತ ಅಸಭ್ಯ ಪದಗಳನ್ನು ಮತ್ತು ಅನುಚಿತ ಚಿತ್ರಗಳನ್ನು ಬಳಸಿಕೊಂಡು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗಳು ಕೇವಲ ರಮ್ಯಾ ಅವರಿಗೆ ಮಾತ್ರವಲ್ಲ, ಒಟ್ಟಾರೆಯಾಗಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಎತ್ತಿ ತೋರಿಸುತ್ತವೆ ಎಂದು ರಮ್ಯಾ ಆರೋಪಿಸಿದ್ದಾರೆ. ಪೊಲೀಸರು ಈ ಕಾಮೆಂಟ್‌ಗಳನ್ನು ಪರಿಶೀಲಿಸಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ರಮ್ಯಾ ಅವರ ಹೇಳಿಕೆ

ದೂರು ದಾಖಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, “ನನಗೆ ಈ ರೀತಿಯ ಕಾಮೆಂಟ್‌ಗಳು ಬಂದರೆ, ಸಾಮಾನ್ಯ ಮಹಿಳೆಯರ ಕತೆ ಏನು? ಇಂತಹ ಕೆಟ್ಟ ಕಾಮೆಂಟ್‌ಗಳನ್ನು ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು. ಮಹಿಳೆಯರ ಮೇಲಿನ ಕಿರುಕುಳ ಮತ್ತು ದೌರ್ಜನ್ಯ ತಡೆಗಟ್ಟಬೇಕು,” ಎಂದು ಒತ್ತಾಯಿಸಿದ್ದಾರೆ. “ಈ ರೀತಿಯ ಘಟನೆಗಳು ಯಾರಿಗೂ ಆಗಬಾರದು. ಹೀಗಾಗಿ, ಮಹಿಳೆಯರ ಪರವಾಗಿ ಧ್ವನಿ ಎತ್ತಲು ದೂರು ನೀಡಿದ್ದೇನೆ. ಹಲವಾರು ಮಹಿಳೆಯರು ನನಗೆ ಬೆಂಬಲ ಸೂಚಿಸಿದ್ದಾರೆ. ಈ ದೌರ್ಜನ್ಯವನ್ನು ಅಂತ್ಯಗೊಳಿಸುವುದೇ ನನ್ನ ಉದ್ದೇಶ,” ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.

ರಮ್ಯಾ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳಲ್ಲಿ ಕೆಲವು ತೀವ್ರ ಆಕ್ಷೇಪಾರ್ಹವಾಗಿವೆ. “ರೇಣುಕಾಸ್ವಾಮಿ ಬದಲಿಗೆ ನಿನ್ನನ್ನೇ ಹತ್ಯೆ ಮಾಡಬೇಕಿತ್ತು,” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಬೆದರಿಕೆಯ ಕಾಮೆಂಟ್‌ಗಳು ರಮ್ಯಾ ಅವರನ್ನು ಕಾನೂನು ಕ್ರಮಕ್ಕೆ ಮುಂದಾಗುವಂತೆ ಮಾಡಿದೆ. “ನಾನು ದರ್ಶನ್ ಅವರೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕದಲ್ಲಿಲ್ಲ. ಒಂದೆರಡು ಬಾರಿ ಎದುರಿಗೆ ಭೇಟಿಯಾದಾಗ ಮಾತನಾಡಿದ್ದೇನೆ. ಆದರೆ, ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶ ನೀಡಿ, ಇಂತಹ ಕೃತ್ಯಗಳನ್ನು ತಡೆಯಬಹುದಿತ್ತು. ಆದರೆ, ಅವರು ಸುಮ್ಮನಿರುವುದು ತಪ್ಪು. ಇದರಿಂದ ಅಭಿಮಾನಿಗಳು ಮತ್ತಷ್ಟು ಇಂತಹ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ,” ಎಂದು ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಮ್ಯಾ ಅವರು ಚಿತ್ರರಂಗದ ಇತರ ಕಲಾವಿದರಿಗೆ ಕರೆ ನೀಡಿದ್ದಾರೆ. “ಚಿತ್ರರಂಗದ ಜನ ಧೈರ್ಯವಾಗಿ ಮುಂದೆ ಬಂದು ಇಂತಹ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು. ಯುವ ಜನತೆ ಈ ರೀತಿಯ ದಾರಿ ತಪ್ಪುವುದು ಬೇಸರದ ಸಂಗತಿ,” ಎಂದು ಅವರು ಹೇಳಿದ್ದಾರೆ.

Exit mobile version