ರಾಕೇಶ್ ಪೂಜಾರಿ ನಿಧನಕ್ಕೆ ಸಂತಾಪ ಸೂಚಿಸಿದ ನಟ ರಿಷಬ್ ಶೆಟ್ಟಿ

111 (11)

ಕನ್ನಡ ಹಾಸ್ಯ ಕಲಾವಿದ ರಾಕೇಶ್ ಪೂಜಾರಿಯವರ ಅಕಾಲಿಕ ನಿಧನವು ಇಡೀ ಚಿತ್ರರಂಗವನ್ನು ಆಘಾತಕ್ಕೀಡು ಮಾಡಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಈ ಪ್ರತಿಭಾವಂತ ಹಾಸ್ಯ ನಟ, ಸ್ನೇಹಿತರೊಬ್ಬರ ಮೆಹಂದಿ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು, ಹೃದಯಾಘಾತದಿಂದ ದಿಢೀರ್‌ನಿಧನರಾದರು.

ರಾಕೇಶ್ ಪೂಜಾರಿಯವರು ಕಾಂತಾರ ಚಾಪ್ಟರ್‌‌ 1 ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಅವರು, ತಮ್ಮ ಅಭಿನಯದ ಮೂಲಕ ಎಲ್ಲರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದರು. ಆದರೆ, ಅವರ ದಿಢೀರ್ ನಿಧನವು ಕಾಂತಾರ ತಂಡಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.

ರಿಷಬ್ ಶೆಟ್ಟಿ ಪೋಸ್ಟ್‌

ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ತಮ್ಮ ಎಕ್ಸ್‌ ಖಾತೆಯಲ್ಲಿ ಸ್ಟೋರಿಯಲ್ಲಿ ರಾಕೇಶ್‌ಗೆ ಭಾವುಕ ನಮನ ಸಲ್ಲಿಸಿದ್ದಾರೆ. “ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿಯನ್ನು ನಿನ್ನ ಕುಟುಂಬಕ್ಕೆ ಕೊಡಲಿ,” ಎಂದು ರಿಷಬ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ರಾಕೇಶ್ ಪೂಜಾರಿಯವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆಮಾತಾದವರು. ತಮ್ಮ ಸಹಜ ಹಾಸ್ಯ, ವಿಶಿಷ್ಟ ಶೈಲಿ, ಮತ್ತು ಜನರನ್ನು ನಗಿಸುವ ಸಾಮರ್ಥ್ಯದಿಂದ ಅವರು ಎಲ್ಲರ ಮನಗೆದ್ದಿದ್ದರು. ಚಿತ್ರರಂಗದಲ್ಲಿ ಕಿರುಪಾತ್ರಗಳ ಮೂಲಕವೂ ತಮ್ಮದೇ ಆದ ಛಾಪು ಮೂಡಿಸಿದ ರಾಕೇಶ್, ಕಾಂತಾರ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪೋಸ್ಟ್

ಕಾಂತಾರ ಅಧ್ಯಾಯ 1 ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಕೂಡ ರಾಕೇಶ್‌ರವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. “ನಟ ರಾಕೇಶ್ ಪೂಜಾರಿಯವರ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ, ಆಪ್ತರಿಗೆ, ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ,” ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Exit mobile version