ಕಮಲ್ ಹಾಸನ್‌ಗೆ ಸಾರಾ ಗೋವಿಂದು ಎಚ್ಚರಿಕೆ: ಕ್ಷಮೆ ಕೇಳದಿದ್ದರೆ ಸಿನಿಮಾ ಬ್ಯಾನ್!

ಕ್ಷಮೇ ಕೇಳಿಸುವ ಪ್ರಯತ್ನ ಮಾಡ್ತೀವಿ ಎಂದ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ನರಸಿಂಹಲು

Befunky collage 2025 05 29t170332.493

ಖ್ಯಾತ ನಟ ಕಮಲ್ ಹಾಸನ್ ಅವರ ಇತ್ತೀಚಿನ ಹೇಳಿಕೆಯು ಕರ್ನಾಟಕದ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡಪರ ಸಂಘಟನೆಗಳು ಅವರ ಚಿತ್ರಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಒತ್ತಾಯಿಸಿವೆ. ಈ ವಿವಾದದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕರ್ನಾಟಕ ಫಿಲ್ಮ್ ಚೇಂಬರ್) ತುರ್ತು ಸಭೆ ನಡೆಸಿದ್ದು, ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಅವರ ಚಿತ್ರಗಳಿಗೆ ರಿಲೀಸ್‌ಗೆ ಅವಕಾಶ ನೀಡದಿರುವ ಎಚ್ಚರಿಕೆಯನ್ನು ನೀಡಿದೆ.

ಕಮಲ್ ಹಾಸನ್ ಅವರ ಉದ್ಧಟತನದ ಹೇಳಿಕೆಯಿಂದಾಗಿ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ. ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ. ಸಾರಾ ಗೋವಿಂದು, ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷ ಮತ್ತು ನಿರ್ಮಾಪಕ, ಸಭೆಯಲ್ಲಿ ಮಾತನಾಡಿ, “ಕಮಲ್ ಹಾಸನ್ ತಮ್ಮ ತಪ್ಪನ್ನು ಒಪ್ಪಿಕೊಂಡು 24 ಗಂಟೆಗಳ ಒಳಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಅವರ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ,” ಎಂದು ಎಚ್ಚರಿಕೆ ನೀಡಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, “ಕಮಲ್ ಹಾಸನ್‌ಗೆ ತಾವು ಮಾಡಿದ ತಪ್ಪಿನ ಅರಿವು ಮೂಡಿಸಿ, ಕ್ಷಮೆ ಕೇಳುವಂತೆ ಮಾಡಲು ಪ್ರಯತ್ನಿಸುತ್ತೇವೆ. ಕನ್ನಡಪರ ಸಂಘಟನೆಗಳು ಚಿತ್ರಗಳ ನಿಷೇಧಕ್ಕೆ ಒತ್ತಾಯಿಸಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ,” ಎಂದು ಹೇಳಿದ್ದಾರೆ.

ADVERTISEMENT
ADVERTISEMENT

ಕರ್ನಾಟಕ ಚಲನಚಿತ್ರ ವಿತರಕ ಕಮಲಾಕರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಾರಾ ಗೋವಿಂದು, ಥಾಮಸ್ ಡಿಸೋಜಾ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು, ನಿರ್ಮಾಪಕರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯ ಸಂದರ್ಭದಲ್ಲಿ ಕೆಲವು ಕನ್ನಡಪರ ಹೋರಾಟಗಾರರು ಫಿಲ್ಮ್ ಚೇಂಬರ್ ಕಚೇರಿಯನ್ನು ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯೂ ನಡೆಯಿತು. ಈ ಘಟನೆಯಿಂದ ವಿವಾದ ಇನ್ನಷ್ಟು ಉಲ್ಬಣಗೊಂಡಿದೆ. ಕನ್ನಡಿಗರ ಭಾವನೆಗೆ ಧಕ್ಕೆ ತರುವ ಯಾವುದೇ ಹೇಳಿಕೆಯನ್ನು ಸಹಿಸುವುದಿಲ್ಲ ಎಂದು ಸಂಘಟನೆಗಳು ತಿಳಿಸಿವೆ.

Exit mobile version