ರಾಯರ ಸನ್ನಿಧಾನದಲ್ಲಿ ಬಿಡುಗಡೆಯಾಯಿತು “ಕಾಲಘಟ್ಟ” ಚಿತ್ರದ ಮೊದಲ ಪೋಸ್ಟರ್

Untitled design 2025 04 01t145624.113

ಬೇಡಿದನ್ನೆಲ್ಲಾ ನೀಡುವ ಕಲಿಯುಗದ ಕಾಮಧೇನುಗಳೆಂದೆ ಖ್ಯಾತರಾದ ಶ್ರೀರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನ ಸ್ಥಳ ಮಂತ್ರಾಲಯದಲ್ಲಿ ಲಯನ್ ಚಿಕ್ಕೇಗೌಡ ಟಿ.ಸಿ ತಳಗವಾಡಿ ಅವರು ನಿರ್ಮಿಸಿರುವ ಹಾಗೂ ಕೆ.ಪ್ರಕಾಶ್ ಅಂಬಳೆ ನಿರ್ದೇಶನದ “ಕಾಲಘಟ್ಟ” ಚಿತ್ರದ ಮೊದಲ ಪೋಸ್ಟರ್ ಯುಗಾದಿ ಹಬ್ಬದ ದಿನದಂದು ಬಿಡುಗಡೆಯಾಯಿತು. ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ಚಿತ್ರತಂಡದವರನ್ನು ಆಶೀರ್ವದಿಸಿದರು.

“ಕಾಲಘಟ್ಟ” ಇದು ಎರಡು “ಕಾಲಘಟ್ಟ”ಗಳಲ್ಲಿ ನಡೆಯುವ ಕಥೆ. ಪೂರ್ವಾರ್ಧ ಮೂವತ್ತು ವರ್ಷಗಳ ಹಿಂದೆ ನಡೆದರೆ, ದ್ವಿತೀಯಾರ್ಧ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತದೆ. ಗ್ರಾಮೀಣ ಸೊಗಡಿನ ಜಾನಪದ ಕಲೆಯ ಬಗ್ಗೆ ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮೈಸೂರು, ನಂಜನಗೂಡು ಹಾಗೂ ಕಳಲೆಯಲ್ಲಿ ಚಿತ್ರೀಕರಣ ನಡೆದಿದೆ.

ಯಗಾದಿಯ ದಿನದಂದು ಮಂತ್ರಾಲಯದ‌ ರಾಯರ ಸನ್ನಿಧಾನದಲ್ಲಿ ನಮ್ಮ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ” ಕಾಲಘಟ್ಟ” ನನ್ನ ನಿರ್ದೇಶನದ ಎರಡನೇ ಚಿತ್ರ. ಇದಕ್ಕೂ ಮೊದಲು “ಖಾಲಿ ಡಬ್ಬ” ಎಂಬ‌ ಚಿತ್ರವನ್ನು ನಿರ್ದೇಶಿಸಿದ್ದೆ. ಅದು ಕೂಡ ತೆರೆಗೆ ಬರಲು ಸಿದ್ದವಾಗಿದೆ ಎಂದು ನಿರ್ದೇಶಕ ಪ್ರಕಾಶ್ ಅಂಬಳೆ ತಿಳಿಸಿದ್ದಾರೆ.

ನಿರ್ದೇಶಕ ಪ್ರಕಾಶ್ ಅಂಬಳೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸದಾಶಿವ ಹಿರೇಮಠ ಹಾಗೂ ರಾಜ್ ಕಡೂರ್ ಅವರ ಛಾಯಾಗ್ರಹಣ, ಎ.ಎಂ.ನೀಲ್ ಸಂಗೀತ ನಿರ್ದೇಶನ, ವೆಂಕಿ ಯು.ಡಿ.ವಿ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.

ಅಭಿಲಾಶ್ ಹಾಗೂ ನಿತಿನ್ “ಕಾಲಘಟ್ಟ” ದ ನಾಯಕರಾಗಿ ನಟಿಸಿದ್ದು, ಮೇಘ ಮತ್ತು ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಶೋಭ್ ರಾಜ್, ಭವ್ಯ, ಪ್ರಶಾಂತ್ ಹಾಗೂ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Exit mobile version