ಕನ್ನಡ ಸ್ಟಾರ್ ನಟರ ಬ್ಯಾಕಿಂಗ್ ಪವರ್ ಡಿಕೆಶಿ..!

ಕಿಚ್ಚ ಸುದೀಪ್ ಮನೆಗೆ ಡಿಕೆಶಿ ಭೇಟಿ ನೀಡಿದ್ದ ರಹಸ್ಯವೇನು..?

Untitled design 2026 06 01T225759.757

ರಾಜಕೀಯ ರಂಗದ ಕನಕಪುರ ಬಂಡೆ, ಕರ್ನಾಟಕದ ನೂತನ ಸಾರಥಿ ಡಿ.ಕೆ. ಶಿವಕುಮಾರ್ ಅವರಿಗೂ, ಬಣ್ಣದ ಲೋಕಕ್ಕೂ ಇರೋ ಆ ಕರುಳಿನ ನಂಟು ಯಂತದ್ದು ಅನ್ನೋದನ್ನ ನೋಡ್ತಾ ಇದ್ದೀವಿ. ಕೇವಲ ವೈಯಕ್ತಿಕ ಸ್ನೇಹ ಅಷ್ಟೇ ಅಲ್ಲ… ಸ್ಯಾಂಡಲ್‌ವುಡ್‌ನ ದಿಗ್ಗಜರ ಕಷ್ಟಕ್ಕೆ ಓಗೊಡೋ ಏಕೈಕ ಲೀಡರ್ ಅಂದ್ರೆ ಅದು ಡಿಕೆಶಿ. ಕಿಚ್ಚ ಸುದೀಪ್, ಡೈನಾಮಿಕ್ ಸ್ಟಾರ್ ದೇವರಾಜ್ ಜೊತೆ ಇವರಿಗಿರೋ ಒಡನಾಟ ಹಾಗೂ ಚಿತ್ರರಂಗದ ಬಿಕ್ಕಟ್ಟುಗಳಿಗೆ ಇವರು ನೀಡೋ ಕ್ವಿಕ್ ಸಲ್ಯೂಷನ್ ಎಂಥದ್ದು..? ಅನ್ನೋದನ್ನ ನೋಡೋಣ ಸಿಎಂ ವಿತ್ ಸ್ಯಾಂಡಲ್‌ವುಡ್‌ನ ಈ ಸ್ಟೋರಿಯಲ್ಲಿ.

ಕಳೆದ ವರ್ಷ ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ ನಲ್ಲಿ ಪರ ಭಾಷೆಯ ಚಿತ್ರರಂಗದ ಗಣ್ಯರು, ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಭಾಗಿಯಾಗಿದ್ರು. ಈ ವೇಳೆ ಮೈಕ್ ಕೈಗೆತ್ತಿಕೊಂಡ ಡಿ.ಕೆ. ಶಿವಕುಮಾರ್ ಅವರು, ಸಿನಿಮಾ ನಟರನ್ನ ನೋಡಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ, “ನೀವೆಲ್ಲಾ ಸ್ಕ್ರೀನ್ ಮೇಲೆ ಹೀರೊಗಳು ಹೌದು.. ಆದ್ರೆ ನಿಮ್ಮ ನಟ್ಟು-ಬೋಲ್ಟುಗಳನ್ನೆಲ್ಲಾ ಎಲ್ಲಿ, ಹೇಗೆ ಟೈಟ್ ಮಾಡ್ಬೇಕು ಅನ್ನೋದು ನಮಗೆ ಚೆನ್ನಾಗಿ ಗೊತ್ತು ಅಂತ ಭರ್ಜರಿ ಪಂಚ್ ಕೊಟ್ಟಿದ್ದರು. ಡಿಕೆಶಿ ಹೇಳಿಕೆಗೆ ಇಡೀ ಸಭಾಂಗಣವೇ ಒಂದು ಕ್ಷಣ ಸೈಲೆಂಟ್ ಆಗಿತ್ತು.

ಸಾಮಾನ್ಯವಾಗಿ ರಾಜಕಾರಣಿಗಳು ಇಂಥಾ ಕಾಮೆಂಟ್ ಮಾಡಿದ್ರೆ ಚಿತ್ರರಂಗ ಮುನಿಸಿಕೊಳ್ಳುತ್ತೆ. ಆದರೆ, ಡಿಕೆಶಿ ಕೊಟ್ಟ ಈ “ನಟ್ಟು-ಬೋಲ್ಟು” ಸ್ಟೇಟ್‌ಮೆಂಟ್ ಅನ್ನು ಸ್ಯಾಂಡಲ್‌ವುಡ್ ಸ್ಟಾರ್ಸ್ ನೆಗೆಟಿವ್ ಆಗಿ ತಗೆದುಕೊಳ್ಳಲಿಲ್ಲ. ಬದಲಿಗೆ ಪಾಸಿಟಿವ್ ಆಗಿ ಸ್ವೀಕರಿಸಿದರು. ಯಾಕಂದ್ರೆ, ಡಿಕೆಶಿ ಆಡಿದ್ದು ಪ್ರೀತಿಯ ಅಧಿಕಾರದ ಮಾತು ಅಂತ. “ಚಿತ್ರರಂಗ ದಾರಿ ತಪ್ಪಿದಾಗ ಅಥವಾ ಕಷ್ಟಕ್ಕೆ ಸಿಲುಕಿದಾಗ ಅದನ್ನ ಸರಿಪಡಿಸುವ, ಗೈಡ್ ಮಾಡುವ ಹಕ್ಕು ಹಾಗೂ ಬ್ಯಾಕಿಂಗ್ ಪವರ್ ಡಿಕೆಶಿಗೆ ಇದೆ ಅನ್ನೋದು ಸ್ಟಾರ್ ನಟರ ನಂಬಿಕೆಯಾಗಿತ್ತು. ಹಾಗಾಗಿಯೇ ಅಂದು ವೇದಿಕೆಯಲ್ಲಿದ್ದ ನಟರು ರಿಯಾಕ್ಟ್ ಮಾಡಲಿಲ್ಲ

ಚುನಾವಣಾ ರಾಜಕೀಯ ಏನೇ ಇರಲಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಬಾಂಧವ್ಯ ಸದಾ ಸ್ಪೆಷಲ್.ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಡಿ.ಕೆ. ಶಿವಕುಮಾರ್ ಅವರು ಸುದೀಪ್ ನಿವಾಸಕ್ಕೆ ಭೇಟಿ ನೀಡಿ ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಅದು ಕೇವಲ ಪ್ರಚಾರಕ್ಕಾಗಿ ಅಲ್ಲ, ಚಿತ್ರರಂಗದ ಕಾರ್ಮಿಕರ ಮತ್ತು ಕಲಾವಿದರ ಹಿತರಕ್ಷಣೆಗಾಗಿ ಸರ್ಕಾರದ ಮಟ್ಟದಲ್ಲಿ ಏನೆಲ್ಲಾ ಯೋಜನೆ ತರಬೇಕು ಎಂದು ಸಮಾಲೋಚನೆ ನಡೆಸಲು ಹೋಗಿದ್ದ ಧನಾತ್ಮಕ ನಡೆ ಅದಾಗಿತ್ತು.

ಇಷ್ಟೇ ಅಲ್ಲ ಕಿಚ್ಚ ಸುದೀಪ್ ಸಾರಥ್ಯದ ‘ಬಿಗ್ ಬಾಸ್’ ಶೋ ಮುಕ್ತಾಯದ ವೇಳೆ ಎದುರಾಗಿದ್ದ ತಾಂತ್ರಿಕ, ಕಾರ್ಮಿಕರ ಹಾಗೂ ಕಾನೂನಾತ್ಮಕ ಸಮಸ್ಯೆಗಳ ಬಿಕ್ಕಟ್ಟಿಗೆ ಡಿ.ಕೆ. ಶಿವಕುಮಾರ್ ಅವರು ರಕ್ಷಕನಾಗಿ ನಿಂತಿದ್ದರು. ಸುದೀಪ್ ಅವರೊಂದಿಗಿನ ವೈಯಕ್ತಿಕ ಸ್ನೇಹದ ಹಿನ್ನೆಲೆಯಲ್ಲಿ, ಶೋನ ಫಿನಾಲೆಗೆ ಯಾವುದೇ ಅಡ್ಡಿ ಬಾರದಂತೆ ಸರ್ಕಾರದ ಮಟ್ಟದಲ್ಲಿ ಸಂಧಾನ ನಡೆಸಿ ಗೊಂದಲಗಳನ್ನು ಬಗೆಹರಿಸಿಕೊಡುವ ಮೂಲಕ ಮತ್ತೆ ಬಿಗ್ ಬಾಸ್ ಗೇಟ್ ಓಪನ್ ಮಾಡ್ಸಿ ಶೋ ಸಕ್ಸಸ್ ಫುಲ್ ಮಾಡಿಸೋದ್ರಲ್ಲಿ ಜೈಯಗಳಿಸಿದರು.

ಇನ್ನು ಸ್ಯಾಂಡಲ್‌ವುಡ್‌ನ ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ರಾಜಕೀಯ ರಹಿತವಾದ ಸುದೀರ್ಘ ಸ್ನೇಹವಿದೆ. ಚಿತ್ರರಂಗದ ಏರಿಳಿತಗಳನ್ನು ಹತ್ತಿರದಿಂದ ನೋಡಿರುವ ದೇವರಾಜ್ ಕುಟುಂಬಕ್ಕೆ ಡಿಕೆಶಿ ಸದಾ ಹಿತೈಷಿಯಾಗಿ ನಿಂತಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಿಂದ ಹಿಡಿದು ಸಿನಿಮಾ ಮುಹೂರ್ತಗಳವರೆಗೆ ದೇವರಾಜ್ ಮತ್ತು ಡಿಕೆಶಿ ಕುಟುಂಬ ಒಟ್ಟಾಗಿ ಕಾಣಿಸಿಕೊಳ್ಳುವುದು ಇವರ ನಿಷ್ಕಲ್ಮಶ ಗೆಳತನಕ್ಕೆ ಹಿಡಿದ ಕನ್ನಡಿ.

ಇನ್ನು ಆಡಿಯೋ ಲಾಂಚ್ ವೊಂದರಲ್ಲಿ ಡಿ.ಕೆ. ಶಿವಕುಮಾರ್ ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ನೆನಪನ್ನು ಹಂಚಿಕೊಂಡಿದ್ದರು. ತಾವು ಅಪ್ಪುವನ್ನು ರಾಜಕೀಯಕ್ಕೆ ಬರುವಂತೆ ಮುಕ್ತವಾಗಿ ಆಹ್ವಾನಿಸಿದ್ದರಂತೆ. ಆದರೆ ಅಪ್ಪು, “ನನಗೆ ಸಿನಿಮಾ ಮತ್ತು ಜನಸೇವೆ ಮಾತ್ರ ಗೊತ್ತು ಸರ್, ರಾಜಕೀಯ ಬೇಡ” ಎಂದು ನಯವಾಗಿ ನಿರಾಕರಿಸಿದ್ದನ್ನು ಡಿಕೆಶಿ ಅತ್ಯಂತ ಗೌರವದಿಂದ ಸ್ಮರಿಸಿದ್ದರು. ಅಪ್ಪು ನಿಧನದ ನಂತರ ಇಡೀ ರಾಜ್ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವಲ್ಲಿ ಇವರು ಸದಾ ಮುಂಚೂಣಿಯಲ್ಲಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಯಾವುದೇ ದೊಡ್ಡ ಗಂಡಾಂತರ ಎದುರಾಗಲಿ, ಥಿಯೇಟರ್‌ಗಳ ಶೇಕಡಾ 100ರಷ್ಟು ಸೀಟಿಂಗ್ ವಿವಾದ ಇರಲಿ, ಅಥವಾ ಬೇರೆ ಭಾಷೆಯ ಸಿನಿಮಾಗಳ ಡಬ್ಬಿಂಗ್ ಮತ್ತು ಮಾರುಕಟ್ಟೆ ವಿವಾದ ಇರಲಿ… ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಕಣ್ಣು ಮುಚ್ಚಿ ಧಾವಿಸುವುದು ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಮಾತ್ರ. ಚಿತ್ರರಂಗದ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಮಟ್ಟದಲ್ಲಿ ಅದಕ್ಕೆ ಕಾನೂನಾತ್ಮಕ ಪರಿಹಾರ ಕೊಡಿಸುವಲ್ಲಿ ಇವರು ಪ್ರಮುಖ ಸಂಧಾನಕಾರರಾಗಿ ಕೆಲಸ ಮಾಡುತ್ತಾರೆ.

ಸ್ಯಾಂಡಲ್‌ವುಡ್‌ನ ದೊಡ್ಡ ದೊಡ್ಡ ಸಿನಿಮಾಗಳ ಟ್ರೈಲರ್ ರಿಲೀಸ್ ಅಥವಾ ಆಡಿಯೋ ಲಾಂಚ್ ಕಾರ್ಯಕ್ರಮಗಳಿಗೆ ಡಿ.ಕೆ. ಶಿವಕುಮಾರ್ ಅವರನ್ನೇ ಮುಖ್ಯ ಅತಿಥಿಯಾಗಿ ಕರೆಯಲಾಗುತ್ತದೆ. ಏಕೆಂದರೆ ಸಿನಿಮಾ ವೇದಿಕೆಯಲ್ಲಿ ಅವರು ಮಾತನಾಡುವ ಶೈಲಿ, ಚಿತ್ರರಂಗದ ಕಾರ್ಮಿಕರ ಪರವಾಗಿ ಅವರು ತಳೆಯುವ ನಿಲುವುಗಳು ಉದ್ಯಮಕ್ಕೆ ಹೊಸ ಆನೆಬಲ ತರುತ್ತವೆ. ರೇಸಿಂಗ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವು ನಟರು ಡಿಕೆಶಿ ಅವರ ನಾಯಕತ್ವದ ಗುಣಕ್ಕೆ ಫಿದಾ ಆಗಿದ್ದಾರೆ.

ಚಿತ್ರರಂಗದ ಯಜಮಾನ, ರೆಬೆಲ್ ಸ್ಟಾರ್ ಅಂಬರೀಶ್ ಅವರಿದ್ದ ಕಾಲದಲ್ಲಿ ಡಿ.ಕೆ. ಶಿವಕುಮಾರ್ ಅವರ ಸ್ನೇಹ ಮತ್ತೊಂದು ಹಂತದಲ್ಲಿತ್ತು. ಅಂಬಿ ಮಂಡ್ಯದ ಗಂಡಾಗಿದ್ರೆ, ಡಿಕೆಶಿ ಕನಕಪುರದ ಬಂಡೆಯಾಗಿದ್ದರು. ರಾಜಕೀಯವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದಾಗಲೂ, ಸಿನಿಮಾ ಮತ್ತು ಕಲೆಯ ವಿಚಾರ ಬಂದಾಗ ಅಂಬರೀಶ್ ಮತ್ತು ಡಿ.ಕೆ. ಶಿವಕುಮಾರ್ ಒಟ್ಟಾಗಿಯೇ ನಿರ್ಧಾರ ಕೈಗೊಳ್ಳುತ್ತಿದ್ದರು. ಅಂಬಿ ನಿಧನದ ನಂತ್ರವೂ ಸುಮಲತಾ ಮತ್ತು ಅಭಿಷೇಕ್ ಅಂಬರೀಶ್ ಜೊತೆ ಅದೇ ಗೌರವದ ನಂಟನ್ನು ಕಾಯ್ದುಕೊಂಡಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸ ಯಾವತ್ತೂ ಸ್ಯಾಂಡಲ್‌ವುಡ್‌ನ ನಟ-ನಟಿಯರು, ಹಿರಿಯ ನಿರ್ಮಾಪಕರು ಹಾಗೂ ಹೊಸ ನಿರ್ದೇಶಕರಿಂದ ಕಳೆಗಟ್ಟಿರುತ್ತದೆ. ಕೇವಲ ಅಧಿಕಾರ ಇದೆ ಅಂತ ಯಾರೂ ಇಲ್ಲಿಗೆ ಬರೋದಿಲ್ಲ, ಬದಲಿಗೆ ತಮ್ಮ ಕಷ್ಟಕ್ಕೆ ಹೆಗಲು ಕೊಡುವ ಒಬ್ಬ ಭರವಸೆಯ ನಾಯಕ ನಮ್ಮ ಸ್ಯಾಂಡಲ್‌ವುಡ್‌ಗೆ ಇದ್ದಾರೆ ಅನ್ನೋ ನಂಬಿಕೆಯಿಂದ ಇಡೀ ಬಣ್ಣದ ಲೋಕ ಡಿಕೆಶಿ ಬೆನ್ನಿಗೆ ನಿಂತಿದೆ.

ಒಟ್ಟಿನಲ್ಲಿ, ಇದು ಕೇವಲ ರಾಜಕೀಯದ ಗ್ಲಾಮರ್ ನಂಟಲ್ಲ, ಬದಲಿಗೆ ಕಲೆ ಮತ್ತು ಕಲಾವಿದರ ಮೇಲಿರುವ ಅಪಾರವಾದ ಪ್ರೀತಿ. ಜೂನ್ 3 ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು, ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಣೆಗೆ, ಸಬ್ಸಿಡಿ ಯೋಜನೆಗಳಿಗೆ ಹಾಗೂ ಚಿತ್ರಮಂದಿರಗಳ ಅಭಿವೃದ್ಧಿಗೆ ಮತ್ತಷ್ಟು ಹೊಸ ಕೊಡುಗೆಗಳನ್ನು ನೀಡಲಿದ್ದಾರೆ ಎಂಬುದು ಇಡೀ ಗಾಂಧಿನಗರದ ಆಶಯವಾಗಿದೆ. ಭವಿಷ್ಯದ ಮುಖ್ಯಮಂತ್ರಿಗೆ ಸ್ಯಾಂಡಲ್‌ವುಡ್ ಕಡೆಯಿಂದ ಆಲ್ ದಿ ಬೆಸ್ಟ್.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version