ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಡಿಬಾಸ್ ದರ್ಶನ್ ಭಂಟ ಧನ್ವೀರ್ ಗೌಡ ನಟನೆಯ ಹಯಗ್ರೀವ ಸಿನಿಮಾ ಅಂದುಕೊಂಡ ಸಮಯಕ್ಕೆ ರಿಲೀಸ್ ಆಗಲಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಚಿತ್ರಪ್ರೇಮಿಗಳ ಜೊತೆ ಧನ್ವೀರ್-ದಚ್ಚು ಫ್ಯಾನ್ಸ್ ಕೂಡ ನಿರಾಸೆಗೊಂಡಿದ್ದಾರೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ಜನನಾಯಗನ್ಗಷ್ಟೇ ಅಲ್ಲ, ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೂ ಅದೇ ಸಂಕಷ್ಟ ಶುರುವಾಗಿರೋದು ಮಾತ್ರ ಕೆಟ್ಟ ಬೆಳವಣಿಗೆ.
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೂ ಇತ್ತೀಚೆಗೆ ಸೆನ್ಸಾರ್ ಗೊಂದಲ ಎದುರಾಗಿತ್ತು. ಸೆನ್ಸಾರ್ ಸರ್ಟಿಫಿಕೇಟ್ ವಿಚಾರದಲ್ಲಿ ಆದಂತಹ ತಗಾದೆ, ಬಿಡುಗಡೆಯ ಮೇಲೆಯೇ ಪ್ರಶ್ನೆ ಹುಟ್ಟಿಸಿದ್ದವು. ಈಗ ಅದೇ ರೀತಿಯ ಸಂಕಷ್ಟವನ್ನು ಕನ್ನಡದ ಸಿನಿಮಾ ಹಯಗ್ರೀವ ಕೂಡ ಎದುರಿಸಿದೆ. ಒಂದು ಕಡೆ ಪ್ಯಾನ್ ಇಂಡಿಯಾ ಮಟ್ಟದ ತಮಿಳು ಸಿನಿಮಾ ಸೆನ್ಸಾರ್ ಸಮಸ್ಯೆ ಎದುರಿಸಿದರೆ, ಇನ್ನೊಂದು ಕಡೆ ಕನ್ನಡದಲ್ಲೂ ಅದೇ ರೀತಿ ಚರ್ಚೆ ಚಿಗುರಿತ್ತು.
ಅಂದು ಜನನಾಯಗನ್.. ಇಂದು ಹಯಗ್ರೀವ.. ಏನಿದು ಸಂಕಷ್ಟ?
ಸೆನ್ಸಾರ್ ಸಂಕಷ್ಟ.. ರಿವೈಸಿಂಗ್ ಕಮಿಟಿಯಲ್ಲಿ ಸಮಸ್ಯೆಗೆ ಪರಿಹಾರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಧನ್ವೀರ್ ಗೌಡ ಅಭಿನಯದ ಹಯಗ್ರೀವ ಇಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದಲ್ಲಿ ಹಿಂದೂ ದೇವತೆಗಳ ಉಲ್ಲೇಖ ಮತ್ತು ಕೆಲವು ದೃಶ್ಯಗಳಲ್ಲಿ ದೇವತೆಗಳನ್ನು ತಿರುಚಿ ತೋರಿಸಲಾಗಿದೆ ಎಂಬ ಆಕ್ಷೇಪಗಳು ಕೇಳಿಬಂದವು. ಈ ಕಾರಣದಿಂದಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್ ಮೊದಲ ಹಂತದಲ್ಲಿ ಸರ್ಟಿಫಿಕೇಟ್ ನೀಡಲು ಹಿಂದೇಟು ಹಾಕಿತು. ಬಿಡುಗಡೆ ದಿನವೇ ಗೊಂದಲ.. ವಿಘ್ನವನ್ನ ಚಿತ್ರತಂಡ ಎದುರಿಸಿದೆ. ನಂತ್ರ ಮುಂಬೈನಲ್ಲಿರೋ ರಿವೈಸಿಂಗ್ ಕಮಿಟಿಗೆ ಹೋಗಿ ಪತ್ರ ಪಡೆದು ಬಂದಿದೆ.
ವಿಷಯ ಗಂಭೀರವಾಗುತ್ತಿದ್ದಂತೆ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಲಾಯಿತು. ಹಲವು ಚರ್ಚೆಗಳು, ಕಟ್ಗಳು ಮತ್ತು ತಿದ್ದುಪಡಿ ಬಳಿಕ ಕೊನೆಗೂ A ಸರ್ಟಿಫಿಕೇಟ್ ನೀಡಲಾಯಿತು. ಟ್ವಿಸ್ಟ್ ಏನಂದ್ರೆ ಬೆಳಗ್ಗಿನ ಮೊದಲ ಶೋ ರದ್ದಾಯಿತು. ಬೆಳಗ್ಗೆ 10:30 ಹಾಗು ಮಧ್ಯಾಹ್ನ 1:30ಕ್ಕೆ ಹಯಗ್ರೀವ ಪ್ರದರ್ಶನ ಕಾಣಲಿಲ್ಲ. ಧನ್ವಿರ್ ಫ್ಯಾನ್ಸ್ ನಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ, ಸಂಜೆ 4.30ಕ್ಕೆ ಮೊದಲ ಪ್ರದರ್ಶನ ಆರಂಭವಾಗುತ್ತದೆ. 2 ಗಂಟೆ 28 ನಿಮಿಷಗಳ ರನ್ಟೈಮ್ ಹೊಂದಿರುವ ಹಯಗ್ರೀವ, ಇದೀಗ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.
ಸೆನ್ಸಾರ್ ದಾಟಿಕೊಂಡು ಕರ್ನಾಟಕದಲ್ಲಿ ತೆರೆಗೆ ಬಂದ ಹಯಗ್ರೀವ
ಬೆಳಗಿನ ಶೋ ರದ್ದು.. ಸಂಜೆ ರಿಲೀಸ್.. ಎಷ್ಟು ಗಂಟೆ ರನ್ಟೈಮ್..?
ಧನ್ವೀರ್ ಹಾಗೂ ಸಂಜನಾ ಜೋಡಿಯ ಈ ಚಿತ್ರವನ್ನು ನಿರ್ದೇಶಕ ರಘುಕುಮಾರ್ ನಿರ್ದೇಶಿಸಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ವೀರ್ ಖಡಕ್ ಆಗಿ ಮಿಂಚಿದ್ದಾರೆ. ಸಿಕ್ಸ್ ಪ್ಯಾಕ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಧನ್ವೀರ್, ಟ್ರೈಲರ್ ಹಾಗೂ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದರು. ಆ್ಯಕ್ಷನ್, ಇಮೋಷನ್ ಅಂಶಗಳು ಹಾಗೆಯೇ ವಿಜಯಲಕ್ಷ್ಮಿ ದರ್ಶನ್ ಬೆಂಬಲ ಚಿತ್ರಕ್ಕೆ ಹೆಚ್ಚು ಹೈಪ್ ತಂದಿದೆ. ನಿರ್ಮಾಪಕ ಸಮೃದ್ಧಿ ಮಂಜುನಾಥ್ ತಮ್ಮ ಎರಡನೇ ಮಗನ ಬರ್ತ್ ಡೇ ದಿನವೇ ಈ ಚಿತ್ರವನ್ನ ರಿಲೀಸ್ ಮಾಡುವಲ್ಲಿ ಕೊನೆಗೂ ಯಶಸ್ವಿ ಆಗಿದ್ದಾರೆ.
ಜನನಾಯಗನ್ಗೆ ಸೆನ್ಸಾರ್ ಸಮಸ್ಯೆ ಎದುರಾದ ನಂತರ ಈಗ ಹಯಗ್ರೀವ ಕೂಡ ಅದೇ ದಾರಿಯಲ್ಲಿ ನಡೆದಿರುವುದು ಸಿನಿರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾಗಳಿಗೆ ಈ ರೀತಿ ಸೆನ್ಸಾರ್ ಸಮಸ್ಯೆಗಳಾದ್ರೆ ಹೇಗೆ..? ಇದು ಸಿನಿಮಾರಂಗದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಹಾಗಾಗಿ ಸಂಬಂಧ ಪಟ್ಟವರು ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಜರೂರಿದೆ. ಸೆನ್ಸಾರ್ ಸಮಸ್ಯೆ ದಾಟಿ ಬಂದಿರೋ ಹಯಗ್ರೀವ ಉತ್ತಮ ಓಪನಿಂಗ್ ಪಡೆದುಕೊಂಡಿದೆ.
