ಡಿಬಾಸ್ ದರ್ಶನ್ ಹಾಗೂ ವಿನಯ್ ಕುಲಕರ್ಣಿ.. ಇಬ್ಬರೂ ಪಕ್ಕಾ ದೋಸ್ತಿಗಳು. ಆದ್ರೀಗ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಅಕ್ಕ ಪಕ್ಕದ ಸೆಲ್ಗಳು ಸೇರುವಂತಾಗಿದೆ. ವಿಧಿ ಲಿಖಿತವನ್ನ ಯಾರು ತಾನೇ ಬದಲಿಸೋಕೆ ಸಾಧ್ಯ..? ಮಾಡಿದ್ದುಣ್ಣೋ ಮಾರಾಯ ಅನ್ನುವಂತೆ ತೋಟ, ಪಟಾಲಮ್, ನೆಮ್ಮದಿ ಯಾವುದೂ ಇಲ್ಲದಂತಾಗಿದೆ. ಈ ಕುರಿತ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
- ತೋಟ, ಪಟಾಲಮ್, ನೆಮ್ಮದಿ.. ಎಲ್ಲವೂ ಕಳ್ಕೊಂಡ ಗೆಳೆಯರು
- ಅಕ್ಕ- ಪಕ್ಕದ ಸೆಲ್.. ದಚ್ಚು-ವಿನಯ್ ಕುಲಕರ್ಣಿ ಪಕ್ಕಾ ದೋಸ್ತಿ
- ಪ್ರಾಣಿ ಪ್ರಿಯ ಸ್ನೇಹಿತರು.. ವಿನಯ್ ತೋಟದಲ್ಲಿ ದಚ್ಚು ರೌಂಡ್ಸ್
- ಎತ್ತಿನ ಗಾಡಿ ಏರಿದ್ದ ಮಿತ್ರರು.. ಕುರಿ, ಮೇಕೆ ತಂದಿದ್ದ ದರ್ಶನ್..!!
ಧಾರವಾಡದ ಶಾಸಕ ವಿನಯ್ ಕುಲಕರ್ಣಿ ಇತ್ತೀಚೆಗೆ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ದೋಷಿ ಅಂತ ಪ್ರೂವ್ ಆಗಿದ್ದು, ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ಹಣ ಬಲ ಇರುವವರಿಗೆ, ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆಗೆ ಎಚ್ಚರಿಕೆಯ ಸಂದೇಶವೂ ಆಗಿದೆ. ಸದ್ಯ ವಿನಯ್ ಕುಲಕರ್ಣಿಗೆ ಕೈದಿ ನಂಬರ್ 16,110 ಕೂಡ ನೀಡಲಾಗಿದೆ. ಇಂಟರೆಸ್ಟಿಂಗ್ ಅಂದ್ರೆ ನಟ ದರ್ಶನ್ ಇದ್ದ ಸೆಲ್ನ ಪಕ್ಕದ ಸೆಲ್ನಲ್ಲೇ ವಿನಯ್ ಕುಲಕರ್ಣಿಯನ್ನ ಕೂಡ ಇರಿಸಲಾಗಿದೆಯಂತೆ.
ಹೌದು.. ಒಂದು ಕಾಲದಲ್ಲಿ ನಟ ದರ್ಶನ್ ಹಾಗೂ ವಿನಯ್ ಕುಲಕರ್ಣಿ ಇಬ್ಬರೂ ಸಿಕ್ಕಾಪಟ್ಟೆ ದೋಸ್ತಿಗಳು. ದಾಸ ದರ್ಶನ್ಗೆ ಶೂಟಿಂಗ್, ಡಬ್ಬಿಂಗ್ ಇಲ್ಲದಿದ್ದಾಗ, ಬಿಡುವು ಸಿಕ್ರೆ ಸಾಕು ಧಾರವಾಡದಲ್ಲಿರೋ ವಿನಯ್ ಕುಲಕರ್ಣಿ ತೋಟದ ಮನೆಗೆ ತೆರಳುತ್ತಿದ್ರು. ಅಲ್ಲಿ ಸಾಕಷ್ಟು ಕಾಲಾವಕಾಶ ಕಳೆಯುವ ದಚ್ಚು, ಸಖತ್ ಮೋಜು ಮಸ್ತಿ ಕೂಡ ಮಾಡ್ತಿದ್ರಂತೆ. ಅಲ್ಲದೆ, ಎತ್ತಿನ ಗಾಡಿ ಹತ್ತಿ ಇಬ್ಬರೂ ದೋಸ್ತಿಗಳು ಸವಾರಿ ಕೂಡ ಹೊರಡುತ್ತಿದ್ರು.
ಹೇಳಿ ಕೇಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರಾಣಿಪ್ರಿಯರು. ವಿನಯ್ ಕುಲಕರ್ಣಿ ಕೂಡ ತಮ್ಮ ತೋಟದಲ್ಲಿ ಸಾಷಕ್ಟು ಪ್ರಾಣಿ ಪಕ್ಷಿಗಳನ್ನ ಸಾಕಿದ್ದಾರೆ. ಹಸು, ಕುದುರೆ, ಎಮ್ಮೆ, ಎತ್ತು, ಕೋಳಿ, ಕುರಿ, ಮೇಕೆ.. ಹೀಗೆ ಅವ್ರ ತೋಟದಲ್ಲಿ ಇರದೇ ಇರೋ ಪ್ರಾಣಿಗಳೇ ಇಲ್ಲ ಎನ್ನುವಂತಾಗಿದೆ. ಅಲ್ಲದೆ ವಿನಯ್ ಒಂದು ಡೈರಿ ಕೂಡ ಮಾಡಿದ್ದಾರೆ. ಗೋಶಾಲೆ ನಡೆಸೋ ಅವ್ರ ಕಾರ್ಯಗಳನ್ನ ಅವಲೋಕಿಸೋ ನಿಟ್ಟಿನಲ್ಲೇ ದರ್ಶನ್ ಆಗಾಗ ಅಲ್ಲಿಗೆ ಹೋಗಿಬರ್ತಿದ್ರು.
ದರ್ಶನ್ ಶಾಸಕ ವಿನಯ್ ಕುಲಕರ್ಣಿ ತೋಟದ ಮನೆಗೆ ತೆರಳಿದ್ದಾಗಿನ ಸಾಕಷ್ಟು ವಿಡಿಯೋಗಳು ಇಂದಿಗೂ ಅವರಿಬ್ಬರ ನಡುವೆ ಇರುವ ಸ್ನೇಹ ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿವೆ. ಆದ್ರೆ ದರ್ಶನ್ ಈಗಾಗ್ಲೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಆಗಿದೆ. ಪ್ರಮುಖ ಆರೋಪಿಯಾಗಿರೋ ಡಿಬಾಸ್ ದರ್ಶನ್ ಕೂಡ ಮರ್ಡರ್ ಕೇಸ್ನಲ್ಲೇ ಸೆರೆಮನೆ ಅತಿಥಿಯಾಗಿರೋದು ಕಾಕತಾಳೀಯ.
ಮೈಸೂರಿನಲ್ಲಿರೋ ದರ್ಶನ್ ತೂಗುದೀಪ ಫಾರ್ಮ್ ಹೌಸ್ನಲ್ಲಿ ವಿನಯ್ ಕುಲಕರ್ಣಿ ತೋಟದಿಂದ ತಂದಿರೋ ಅಪರೂಪದ ತಳಿಯ ಕುರಿ, ಮೇಕೆಗಳು ಸಾಕಷ್ಟಿವೆ. ಅಷ್ಟೇ ಅಲ್ಲ, ವಿನಯ್ ಕುಲಕರ್ಣಿ ಎಲೆಕ್ಷನ್ಗೆ ನಿಂತಿದ್ದಾಗ ಅವರ ಪರ ಚುನಾವಣಾ ಪ್ರಚಾರ ಕೂಡ ಜೋರಾಗಿ ಮಾಡಿದ್ರು. ಪರಸ್ಪರ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಅಪಾರ ಪ್ರೀತಿ, ಸ್ನೇಹ, ಗೌರವ ಹಾಗೂ ಅಭಿಮಾನವಿತ್ತು.
ಆದ್ರೀಗ ಎಲ್ಲವೂ ಉಲ್ಟಾ ಪಲ್ಟಾ ಆಗಿಬಿಟ್ಟಿದೆ. ಜೈಕಾರ ಹಾಕೋರಿಲ್ಲ. ಶಿಳ್ಳೆ, ಚಪ್ಪಾಳೆ ಹೊಡೆಯೋರಿಲ್ಲ. ನೀವು ಮಾಡಿದ್ದೇ ಸರಿ ಒಡೆಯ ಅಂತ ಹುರಿದುಂಬಿಸೋ ಪಟಾಲಮ್ ಇಲ್ಲ. ತೋಟ, ಅದರಲ್ಲಿ ಇಷ್ಟದ ಪ್ರಾಣಿ ಪಕ್ಷಿಗಳನ್ನ ನೋಡುವಂತಿಲ್ಲ, ಮನೆಯೂಟ, ಎಸಿ ಕಾರ್, ಕ್ಯಾರವಾನ್ ಯಾವುದೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನೆಮ್ಮದಿ ಅನ್ನೋದು ಇಲ್ಲವೇ ಇಲ್ಲ. ಕಷ್ಟ ಸುಖ ಹಂಚಿಕೊಳ್ಳೋಕೆ ಮತ್ಯಾರನ್ನೂ ಮಾತಾಡಿಸೋಕೂ ಬಿಡಲ್ಲ. ಹೀಗೆ ಅಕ್ಷರಶಃ ಪಂಜರದ ಪಕ್ಷಿಗಳಾಗಿಬಿಟ್ಟಿದ್ದಾರೆ ದರ್ಶನ್ ಹಾಗೂ ವಿನಯ್ ಕುಲಕರ್ಣಿ.
ಸದ್ಯ ಇಬ್ಬರೂ ಕ್ವಾರಂಟೈನ್ ಸೆಲ್ಗಳಲ್ಲಿ ವಾಸ್ತವ್ಯವಿದ್ದು, ಸದ್ಯದಲ್ಲೇ ವಿನಯ್ ಕುಲಕರ್ಣಿಯನ್ನ ಬೇರೆ ಸೆಲ್ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅದೇನೇ ಇರಲಿ. ಕಾನೂನಿನ ಮುಂದೆ ಯಾವ ಸ್ಟಾರ್ಡಮ್, ಯಾವ ಅಧಿಕಾರ ಕೂಡ ವರ್ಕ್ ಆಗಲ್ಲ ಅನ್ನೋದು ಸಾಬೀತಾಗಿದೆ. ಸೋ.. ತಪ್ಪು ಮಾಡುವ ಮುನ್ನ ಎಚ್ಚರ ಇರಲಿ ಅನ್ನೋದು ಇವರಿಬ್ಬರ ವಿಷಯದಲ್ಲಿ ನೀತಿಪಾಠವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
