ಮಂಗಳೂರು: ನಟ ದರ್ಶನ್ ತೂಗುದೀಪ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಅವರೊಂದಿಗೆ ಕೇರಳದ ಕಣ್ಣೂರಿನ ಮಾಡಾಯಿಕಾವು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆಯಲ್ಲಿ ಭಾಗವಹಿಸಿದ್ದರು. ಈ ಭೇಟಿ ಪುತ್ತೂರು ಮೂಲದ ಸ್ನೇಹಿತರ ಮಾರ್ಗದರ್ಶನದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಎಂಬ ವಿವಾದದ ಹಿನ್ನೆಲೆಯಲ್ಲಿ ದರ್ಶನ್ ಈ ಪೂಜೆ ನಡೆಸಿದ್ದಾರೆ. ಆದರೆ, ಈ ವೇಳೆ ಅವರ ಜೊತೆ 2017ರಲ್ಲಿ ಪುತ್ತೂರಿನ ಕರೋಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗಿರುವ ಪ್ರಜ್ವಲ್ ರೈ ಸಹ ಕೂಡ ಕಾಣಿಸಿಕೊಂಡಿದ್ದಾರೆ.
ಜಲೀಲ್ ಕೊಲೆ ಪ್ರಕರಣದ ಆರೋಪಿ ಪ್ರಜ್ವಲ್ ರೈ
ಪ್ರಜ್ವಲ್ ರೈ 2017ರ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ ಒಟ್ಟು 11 ಜನರನ್ನು ಬಂಧಿಸಲಾಗಿತ್ತು. ಅಂದಿನಿಂದಲೂ ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಜ್ವಲ್ ರೈ ಅವರ ಈ ಹಾಜರಾತಿ ಕೆಲವು ವಲಯಗಳಲ್ಲಿ ಕುತೂಹಲ ಕೆರಳಿಸಿದೆ. ದರ್ಶನ್ ಅವರು ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿಲ್ಲ.
ದರ್ಶನ್ ಅವರು ಈ ದೇವಸ್ಥಾನ ಭೇಟಿ ಮತ್ತು ಪೂಜೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶತ್ರು ಸಂಹಾರ ಯಾಗದಲ್ಲಿ ಪಾಲ್ಗೊಳ್ಳುವುದರ ಮೂಲಕ ದರ್ಶನ್ ತಮ್ಮ ಮೇಲೆ ಇರುವ ಆರೋಪಗಳು ಮತ್ತು ಕಾನೂನು ಸವಾಲುಗಳಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಬಹುದು.
ಅಂತೆಯೇ, ಪ್ರಜ್ವಲ್ ರೈ ಅವರ ಹಾಜರಾತಿಯ ವಿಚಾರವೂ ಒಮ್ಮೆ ಮತ್ತೆ ಈ ಪ್ರಕರಣವನ್ನು ಚರ್ಚೆಗೆ ತರುತ್ತಿದ್ದು, ಈ ಕುರಿತು ಅಧಿಕಾರಿಗಳೂ ಗಮನ ಹರಿಸಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.