‘ಚಾಲೆಂಜಿಂಗ್ ಸ್ಟಾರ್’ ದರ್ಶನ್ನ ಹೊಸ ಸಿನಿಮಾ ‘ದಿ ಡೆವಿಲ್’ ಡಿಸೆಂಬರ್ 11ರಂದು ಭರ್ಜರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಜೈಲಿನಲ್ಲಿರುವ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ಸುದೀರ್ಘ ಭಾವುಕ ಪತ್ರವೊಂದನ್ನು ಕಳುಹಿಸಿದ್ದಾರೆ. ಈ ಪತ್ರವನ್ನು ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
‘ದಿ ಡೆವಿಲ್’ ಚಿತ್ರ ತೆರೆ ಕಾಣಲು ಸಿದ್ದವಾಗಿದೆ.. ಮುಂಗಡ ಬುಕ್ಕಿಂಗ್ ಆರಂಭವಾದ ಕೆಲವು ಗಂಟೆಗಳಲ್ಲೇ ಲಕ್ಷಾಂತರ ಟಿಕೆಟ್ಗಳು ಸೋಲ್ಡ್–ಔಟ್ ಆಗಿರುವುದು ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ಸೂಚನೆಯಾಗಿದೆ. ಈ ಚಿತ್ರದಲ್ಲಿ ದರ್ಶನ್ ಜೊತೆಗೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕರ ಪ್ರಕಾರ, ಕರ್ನಾಟಕದ 400 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಬೆಂಗಳೂರಿನ ಕೆ.ಜಿ.ರಸ್ತೆಯ ನರ್ತಕಿ ಥಿಯೇಟರ್ನಲ್ಲಿ ಬೆಳಗ್ಗೆ 6.30 ಕ್ಕೆ ಮೊದಲ ಶೋ ಪ್ರದರ್ಶನವಾಗಲಿದೆ.
ಈ ಸಂದರ್ಭದಲ್ಲಿ, ದರ್ಶನ್ ಭಾವುಕ ಪತ್ರ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಪತ್ರದಲ್ಲಿ ಅವರು, “ನನ್ನ ಪ್ರೀತಿಯ ಸೆಲೆಬ್ರಿಟಿಗಳೇ” ಎಂದು ಫ್ಯಾನ್ಸ್ಗಳನ್ನು ಉದ್ದೇಶಿಸಿ ಬರೆಯುತ್ತಿದ್ದು, ತಮ್ಮ ಹೃದಯದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಪರವಾಗಿ ವಿಜಯಲಕ್ಷ್ಮಿ ಎಲ್ಲ ಮಾಹಿತಿ ತಲುಪಿಸುತ್ತಿದ್ದಾಳೆ ಎಂದು ದರ್ಶನ್ ಹೇಳಿದ್ದಾರೆ. ದೂರದಲ್ಲಿದ್ದರೂ ಅಭಿಮಾನಿಗಳ ಬೆಂಬಲವನ್ನು ತಾವು ಪ್ರತಿಕ್ಷಣವೂ ಅನುಭವಿಸುತ್ತೇವೆ ಎಂದು ತಿಳಿಸಿದ್ದಾರೆ.
“ಯಾರು ಏನು ಹೇಳಿದರು, ಯಾವ ವದಂತಿಯಾದರೂ, ದಯವಿಟ್ಟು ಚಿಂತಿಸಬೇಡಿ. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ಇಂದು ನಾನು ನಿಂತಿರುವುದು ನಿಮ್ಮ ನಂಬಿಕೆಯ ಜೋತೆ.” ಈ ಸಮಯದಲ್ಲಿ ಎಲ್ಲಾ ಒಟ್ಟು ‘ದಿ ಡೆವಿಲ್’ ಚಿತ್ರದ ಯಶಸ್ಸಿನ ಕಡೆಗೆ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
“ನಾನು ನಾನಾಗಿಯೇ ಇದ್ದೇನೆ. ನನ್ನ ಅನುಪಸ್ಥಿತಿಯಲ್ಲಿಯೇ ನೀವು ಎಲ್ಲ ಪ್ರಶ್ನೆಗಳಿಗೂ, ವದಂತಿಗಳಿಗೂ, ಟೀಕೆಗಳಿಗೆ ಪದಗಳಿಂದಲ್ಲ, ಚಿತ್ರದ ಯಶಸ್ಸಿನಿಂದ ಉತ್ತರಿಸಬೇಕು” ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ.
ಅಭಿಮಾನಿಗಳ ಪ್ರಚಾರ, ಏಕತೆ ಇವರ ಬಗ್ಗೆ ಕೇಳಿದಾಗ ತಾವು ಭಾವುಕರಾಗುತ್ತೇವೆ ಎಂದು ಹೇಳಿದ ದರ್ಶನ್, ತಮ್ಮ ಸುತ್ತಲೂ ಗೋಡೆಯಂತೆ ನಿಂತಿರುವ ಫ್ಯಾನ್ಸ್ಗೆ ಧನ್ಯವಾದ ತಿಳಿಸಿದ್ದಾರೆ.
“ಸಮಯವೇ ಸತ್ಯ ಹೇಳುತ್ತದೆ. ಸಮಯವೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ತಲೆ ಎತ್ತಿ ನಿಲ್ಲಿ, ಹೃದಯ ಬಲವಾಗಿರಲಿ” ಎಂದು ಪತ್ರ ಕೊನೆಯಲ್ಲಿ ಅವರು ಬರೆದಿದ್ದಾರೆ.
