ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಮತ್ತು ಅವರ ತಂಡ, ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ಗೆ ಆಗಮಿಸಿ ವಿಚಾರಣೆ ಎದುರಿಸಲಿದ್ದಾರೆ.
ಕಳೆದ ವರ್ಷ ಚಿತ್ರದುರ್ಗದಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ತಂಡವನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಈ ಘಟನೆಯ ಬಳಿಕ ದರ್ಶನ್ ಮತ್ತು ಡಿ ಗ್ಯಾಂಗ್ನ ಕೆಲವು ಸದಸ್ಯರು ಜೈಲುವಾಸ ಅನುಭವಿಸಿದ್ದರು. ಆದರೆ, ನಂತರ ಎಲ್ಲರಿಗೂ ಜಾಮೀನು ದೊರೆತಿತ್ತು. ಜಾಮೀನು ಷರತ್ತುಗಳನ್ವಯ ಆರೋಪಿಗಳು ಪ್ರತಿ ತಿಂಗಳು ಕೋರ್ಟ್ಗೆ ಹಾಜರಾಗಬೇಕಿದೆ. ಇದರಂತೆ, ಇಂದು ದರ್ಶನ್ ಮತ್ತು ತಂಡವು 57ನೇ CCH ನ್ಯಾಯಾಲಯಕ್ಕೆ ಬೆಳಗ್ಗೆ 11 ಗಂಟೆಯ ನಂತರ ಹಾಜರಾಗಲಿದ್ದಾರೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರು ದೀರ್ಘಕಾಲದ ಬಳಿಕ ಕೋರ್ಟ್ನಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಇಬ್ಬರ ನಡುವಿನ ಸಂಭಾಷಣೆ ಇರುತ್ತದೆಯೇ ಎಂಬುದು ಕುತೂಹಲದ ವಿಷಯವಾಗಿದೆ. ದರ್ಶನ್ ಅವರು ತಮ್ಮ ಮುಂಬರುವ ಚಿತ್ರ “ಡೆವಿಲ್” ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ಗಾಗಿ ಜುಲೈ 11 ರಿಂದ 30 ರವರೆಗೆ ವಿದೇಶಕ್ಕೆ ತೆರಳಲು ಈಗಾಗಲೇ ಕೋರ್ಟ್ನಿಂದ ಅನುಮತಿ ಪಡೆದಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ, ಇಂದಿನ ಕೋರ್ಟ್ ಕಾರ್ಯಕಲಾಪವನ್ನು ಪೂರೈಸುವುದು ದರ್ಶನ್ಗೆ ಮುಖ್ಯವಾಗಿದೆ.
ದರ್ಶನ್ ಅವರು “ಡೆವಿಲ್” ಚಿತ್ರದ ಶೂಟಿಂಗ್ನ ಜೊತೆಗೆ, ಅವರು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ, ಕೋರ್ಟ್ ಕಾರ್ಯಕಲಾಪಗಳು ಈ ಪ್ರಕರಣದ ಮುಂದಿನ ಹಂತವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
