ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ ಪಟ್ಟಕ್ಕೇರಿದ ದುನಿಯಾ ವಿಜಯ್

ಅಂದು ‘ಸಲಗ’ & ‘ಭೀಮ’.. ಇಂದು ಸಿಟಿಲೈಟ್ಸ್ ದುನಿಯಾ

Your paragraph text 2026 09 18T154636.719

ಸಲಗ, ಭೀಮ ಸಿನಿಮಾಗಳ ನಂತ್ರ ಸಿಟಿಲೈಟ್ಸ್ ಮೂಲಕ ಹ್ಯಾಟ್ರಿಕ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ ಆನೇಕಲ್ ಬ್ಲ್ಯಾಕ್ ಡೈಮಂಡ್ ದುನಿಯಾ ವಿಜಯ್. ಯೆಸ್.. ದೊಡ್ಮನೆ ಹುಡ್ಗ ವಿನಯ್ ರಾಜ್‌ಕುಮಾರ್ ಹಾಗೂ ವಿಜಯ್ ಮಗಳು ಮೋನಿಷಾ ಬಣ್ಣ ಹಚ್ಚಿದ ಚೊಚ್ಚಲ ಸಿನಿಮಾ ಇಂದು ಬೆಳ್ಳಿತೆರೆ ಬೆಳಗಿದೆ. ಕಥೆ ಏನು..? ಆರ್ಟಿಸ್ಟ್ ಪರ್ಫಾಮೆನ್ಸ್ ಹೇಗಿದೆ..? ಪ್ಲಸ್ ಏನು ಮೈನಸ್ ಏನು ಅನ್ನೋದ್ರ ಜೊತೆ ಈ ದುನಿಯಾಗೆ ವಿಜಯ್ ಕೊಟ್ಟ ಸಂದೇಶ ಏನು ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್ ಇಲ್ಲಿದೆ ನೋಡಿ.

ಯೆಸ್.. ದಿ ವೆಯ್ಟ್ ಈಸ್ ಓವರ್. ನಟ ದುನಿಯಾ ವಿಜಯ್ ಸಲಗ, ಭೀಮ ಸಿನಿಮಾಗಳ ನಂತ್ರ ಸಿಟಿಲೈಟ್ಸ್ ಸಿನಿಮಾ ಡೈರೆಕ್ಟ್ ಮಾಡಿ ಭೇಷ್ ಅನಿಸಿಕೊಂಡಿದ್ದಾರೆ. ಸಿನಿಮಾದ ಕಥೆಯ ಎಳೆ, ಬರವಣಿಗೆ, ಸಂಗೀತ ಹಾಗೂ ಹಿನ್ನೆಲೆ ಸಂಗೀತ, ಕಲಾವಿದರು, ಆ ಪಾತ್ರಗಳಿಗೆ ಜೀವ ತುಂಬಿರೋ ಪರಿ, ಮೇಕಿಂಗ್ ಹೀಗೆ ಎಲ್ಲವೂ ವ್ಹಾವ್ ಫೀಲ್ ತರಿಸುತ್ತೆ. ಅದೇ ಕಾರಣದಿಂದ ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ ವಿಜಯ್.

ದೊಡ್ಮನೆ ಹುಡ್ಗ ವಿನಯ್ ರಾಜ್‌ಕುಮಾರ್ ಮಾಸ್ ಅಡ್ಡಾಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಮೈ ಚಳಿ ಬಿಟ್ಟು ನಟಿಸಿದ್ದಾರೆ. ಶಿವ ಅನ್ನೋ ಪಾತ್ರಕ್ಕೆ ಜೀವ ತುಂಬಿರೋ ವಿನಯ್, ಆ ಮಲೆ ಮಹದೇಶ್ವರನ ಬೆಟ್ಟದಿಂದ ಬೆಂಗಳೂರಿನ ಮೆಜೆಸ್ಟಿಕ್ ಪ್ರಪಂಚಕ್ಕೆ ಕಾಲಿಡ್ತಾರೆ. ಅಕ್ಷರಶಃ ಆ ಮಾದೇಶ್ವರನೇ ಶಿವನ ರೂಪದಲ್ಲಿ ಬಂದು ಮೆಜೆಸ್ಟಿಕ್‌‌ನಲ್ಲಿ ನಡೆಯೋ ಅನಾಚಾರಗಳನ್ನ ತಡೆಯುವಂತೆ ಮಾಡಿದಂತಿದೆ. ಕ್ಲೈಮ್ಯಾಕ್ಸ್‌‌ನ ಸ್ಮಶಾನ ಕಾಳಿ ಅವತಾರದಲ್ಲಿ ಶತ್ರು ಸಂಹಾರ ಮಾಡುವ ದೃಶ್ಯ ಮಾಸ್‌‌ಪ್ರಿಯರಿಗೆ ಹಬ್ಬ.

ಚೊಚ್ಚಲ ಚಿತ್ರದಲ್ಲೇ ದುನಿಯಾ ವಿಜಯ್ ಕಿರಿ ಮಗಳು ಮೋನಿಷಾ ಭವಿಷ್ಯದ ಭರವಸೆಯ ಸ್ಟಾರ್ ನಟಿ ಆಗೋ ಮುನ್ಸೂಚನೆ ನೀಡಿದ್ದಾರೆ. ಡೈಲಾಗ್ ಡೆಲಿವರಿ ಸೇತಿದಂತೆ ಆಕೆಯ ಹಾವ, ಭಾವ, ಎಮೋಷನ್ ಸೀನ್‌ಗಳನ್ನ ಅದ್ಭುತವಾಗಿ ಎಕ್ಸಿಕ್ಯೂಟ್ ಮಾಡಿರೋದು ಮೆಚ್ಚುವಂತಿದೆ. ತಂದೆಯಿಂದಲೇ ಅಭಿನಯ ರಕ್ತಗತವಾಗಿ ಬಂದಿರೋದು ಅತಿಶಯೋಕ್ತಿ ಅಲ್ಲ.

ದುನಿಯಾ ವಿಜಯ್ ಎಂದಿನಂತೆ ಈ ಬಾರಿಯೂ ಅವ್ರ ಗರಡಿಯಲ್ಲೇ ಪಳಗಿದಂತಹ ಹುಡುಗರಿಗೆ ಖಳನಾಯಕರ ಬಣ್ಣ ಹಚ್ಚಿಸಿ, ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ.. ಅವ್ರಿಂದ ನಿರೀಕ್ಷೆಗೂ ಮೀರಿದ ಮನೋಜ್ಞ ಅಭಿನಯ ಹೊರತೆಗೆದಿದ್ದಾರೆ. ಹೌದು.. ಪುನೀತ್ ತನ್ನ ಹೆಸರಿನ ರೋಲ್‌‌ನಲ್ಲೇ ವಿಲನ್ ಆಗಿ ಎಂಎಲ್‌‌ಎ ರೈಟ್ ಹ್ಯಾಂಡ್ ಆಗಿ ಹುಬ್ಬೇರಿಸುವಂತಹ ನಟನೆ ನೀಡಿದ್ದಾರೆ. ಸ್ಯಾಂಡಲ್‌ವುಡ್‌ಗೆ ಒಬ್ಬ ಯಂಗ್ ವಿಲನ್ ಸಿಕ್ಕಂತಾಗಿದೆ. ಅಷ್ಟು ವೈಬ್ರೆಂಟ್, ರಾ & ರಸ್ಟಿಕ್ ಆಗಿ ಪಾತ್ರ ನಿರ್ವಹಿಸಿದ್ದಾರೆ ಪುನೀತ್.

ಇನ್ನೂ ವೀರ ಆನ್‌‌ಸ್ಕ್ರೀನ್‌‌ಗೂ ಸೈ ಆಫ್‌ ಸ್ಕ್ರೀನ್‌ ಗೂ ಜೈ ಅಂತಾರೆ. ಸದ್ಯ ಈ ಚಿತ್ರದ ಮತ್ತೊಂದು ಹೈಲೈಟ್ ಈ ವೀರ. ಅವರದ್ದೇ ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದು, ಖಳನಾಯಕನ ಗತ್ತು, ಗೈರತ್ತು ತೋರಿದ್ದಾರೆ. ಉಮಾಶ್ರೀ ಅಮ್ಮಾಜಿಯಾಗಿ ಬ್ಯಾಡ್ ಗರ್ಲ್ಸ್‌‌‌ನ ಗುಡ್ ಗರ್ಲ್ಸ್‌‌ ಆಗಿಸೋ ಕಾರ್ಯದಲ್ಲಿ ಎಂಎಲ್‌ಎ ಅಂತಹ ಪವರ್‌‌ಫುಲ್ ವ್ಯಕ್ತಿಗಳನ್ನೇ ಹುಚ್ಚೆ ಹುಯ್ಯಿಸೋ ಅಂತಹ ಖಡಕ್ ರೋಲ್ ಮಾಡಿದ್ದಾರೆ.

ಒಂದ್ಕಡೆ ಲವ್ ಟ್ರ್ಯಾಕ್.. ಮತ್ತೊಂದ್ಕಡೆ ರೌಡಿಸಂ.. ಮಗದೊಂದು ಕಡೆ ವೇಶ್ಯಾವಾಟಿಕೆ.. ಇವೆಲ್ಲದರ ನಡುವೆ ಇಲಿಗಳಂತೆ ಓಡಾಡುವ ಖಾಕಿಧಾರಿಗಳು. ಅದ್ರಲ್ಲೂ ಸಬ್ ಇನ್ಸ್‌ಪೆಕ್ಟರ್‌‌ ಆಗಿ ವಿಜಯ್‌ರ ಆಪ್ತ ಮಲ್ಲಣ್ಣ ನಟಿಸಿದ್ದು, ಅವ್ರ ಕಾಮಿಡಿ ಟೈಂ ಮಜಾ ಕೊಡಲಿದೆ.

ಮಾವ ಸತ್ತ ಮೇಲೆ ಸಂಬಂಧಗಳಿಗೆ ಬೆಲೆ ಇಲ್ಲ ಅಂತ ಅರಿತ ನಾಯಕನಟ.. ಮಾದಪ್ಪನ ಬೆಟ್ಟದಿಂದ ಮೆಜೆಸ್ಟಿಕ್‌ಗೆ ಬದುಕು ಕಟ್ಟಿಕೊಳ್ಳಲು ಬರ್ತಾನೆ. ಇತ್ತ ಬೆಂಗಳೂರು ಸೇರಿರೋ ತಮ್ಮನ ಹುಡುಕಿಕೊಂಡು ಹಾನಬಾಳುನಿಂದ ಬರೋ ನಾಯಕನಟಿ. ಅವರಿಗೆ ಆಸರೆ ಆಗುವ ಅಲಕ್, ಅಮ್ಮಾಜಿ ಹಾಗೂ ಸ್ವೀಟಿ-ರಾಜಮ್ಮ ಅನ್ನೋ ವೇಶ್ಯೆಯರು. ಇವರ ನಡುವೆ ಮೆಜೆಸ್ಟಿಕ್‌‌ನ ರೂಲ್ ಮಾಡುವ ಎಂಎಲ್‌ಎ.. ಆತನ ಕೈಕೆಳಗಿರೋ ಪುನೀತ, ವೀರನ ಗ್ಯಾಂಗ್ಸ್ ಹಾಗೂ ಪೊಲೀಸ್ ವ್ಯವಸ್ಥೆ. ಇದೇ ಸಿನಿಮಾದ ಕಥೆ. ಕೊನೆಗೆ ನಾಯಕನಟಿಗೆ ತಮ್ಮ ಸಿಗ್ತಾನಾ ಇಲ್ವಾ..? ಒಳಿತು-ಕೆಡಕುಗಳ ಸಂಘರ್ಷದಲ್ಲಿ ಯಾವುದು ಮೇಲುಗೈ ಸಾಧಿಸುತ್ತೆ ಅನ್ನೋದನ್ನ ನೀವು ಥಿಯೇಟರ್‌ನಲ್ಲೆ ನೋಡ್ಬೇಕು.

ಅಂದಹಾಗೆ ಸಿಟಿಲೈಟ್ಸ್ ಸಿನಿಮಾದ ಜೀವಾಳ ಬರವಣಿಗೆ. ವಿಜಯ್ ಸಿನಿದುನಿಯಾದ ಆಸ್ಥಾನ ಕವಿಗಳಾದ ಮಾಸ್ತಿ ಇಲ್ಲಿಯೂ ತಮ್ಮ ಲೇಖನಿಯ ಕೈಚಳಕ ತೋರಿಸಿದ್ದಾರೆ. ಅಷ್ಟೇ ಅಲ್ಲ.. ಜೈಲಲ್ಲಿ ರೌಡಿಸಂ ಬ್ರಹ್ಮನಾಗಿ ಬಹಳ ದಿನಗಳ ನಂತ್ರ ಸಣ್ಣ ಗೆಸ್ಟ್ ಅಪಿಯರೆನ್ಸ್ ಮೂಲಕ ಒಂದು ಸರ್‌ಪ್ರೈಸ್ ಕೂಡ ನೀಡಿದ್ದಾರೆ.

ಅನ್ನದ ಹಸಿವು, ಕಾಮದ ಹಸಿವು, ತೃತೀಯ ಲಿಂಗಿಯರ ಭಾವನೆಗಳು, ಅಸಹಾಯಕತೆ, ಸಂಬಂಧಗಳ ಮೌಲ್ಯ, ಜಾತಿಗಳಿಲ್ಲದ ಜ್ಯೋತಿಗಳು.. ಇವೇ ಸಿಟಿಲೈಟ್ಸ್‌‌ನಲ್ಲಿನ ಮಿಂಚು ಹುಳುಗಳು. ಅಲ್ಲಿ ನಿವಿರಾದ ಪ್ರೇಮವಿದೆ. ನಿರೀಕ್ಷೆಗೆ ಮೀರಿದ ಕಾಮವಿದೆ. ಅಮಾನವೀಯ, ಅರಾಜಕತೆಯ ನಡುವೆ ಮಾನವೀಯ ಮೌಲ್ಯಗಳಿವೆ. ಅದನ್ನ ಅರಿಯಬೇಕು ಅಂದ್ರೆ ಸಿಟಿಲೈಟ್ಸ್ ನೋಡಲೇಬೇಕು.

ದುನಿಯಾ ವಿಜಯ್ ಎಷ್ಟು ಮಾಗಿದ್ದಾರೆ.. ಪಳಗಿದ್ದಾರೆ ಅನ್ನೋದಕ್ಕೆ ಈ ಸಿನಿಮಾ ಕನ್ನಡಿಯಂತಿದೆ. ಗ್ರಾಫಿಕ್ಸ್, ಸ್ಪೆಷಲ್ ಎಫೆಕ್ಟ್ಸ್‌ ಮೂಲಕ ವಾಸ್ತವಕ್ಕೆ ದೂರವಿರೋ ವಿಷಯಗಳನ್ನ ತೆರೆಗೆ ತರುವವರ ನುಡವೆ.. ನಮ್ಮ ಕಣ್ಮುಂದೆ ನಡೆಯುವ ಮೆಜೆಸ್ಟಿಕ್‌ನಲ್ಲಿನ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸಾಕಷ್ಟು ವಿಷಯಗಳನ್ನ ಸೂಕ್ಷ್ಮವಾಗಿ ಹೇಳುವ ಕಾರ್ಯ ಮಾಡಿದ್ದಾರೆ. ಇಂತಹ ಸಿನಿಮಾಗಳು ಗೆಲ್ಲಬೇಕು. ಆಗಲೇ ನಿರ್ದೇಶಕ ಹಾಗೂ ಆತನ ಆಶಯಗಳು ಸಾಕಾರಗೊಳ್ಳಲಿವೆ. ಮತ್ತಷ್ಟು ಇಂತಹ ಸದಭಿರುಚಿಯ ಚಿತ್ರಗಳು ಹೊರಬರಲು ಸಾಧ್ಯ. ಇದಕ್ಕೆ ರಿವ್ಯೂ ಅಗತ್ಯ ಇಲ್ಲ. ನೀವು ಥಿಯೇಟರ್‌ನಲ್ಲಿ ವೀವ್ ಮಾಡಿದ್ರೆ ಸಾಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version