ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಉಪಾಸನಾ ಕೊನಿಡೇಲ

ಡೈವರ್ಟ್ (1)

ರಾಯಚೂರು ಸೆ.19: ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ತೇಜ್ ಅವರ ಪತ್ನಿ ಹಾಗೂ ಅಪೋಲೋ ಆಸ್ಪತ್ರೆಯ ಸಿಎಸ್‌ಆರ್ ವಿಭಾಗದ ಉಪಾಧ್ಯಕ್ಷೆ ಉಪಾಸನಾ ಕೊನಿಡೇಲ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.

ಮಂತ್ರಾಲಯದ ಶ್ರೀಮಠಕ್ಕೆ ಆಗಮಿಸಿದ ಉಪಾಸನಾ ಅವರು ಮೊದಲು ಗ್ರಾಮ ದೇವತೆ ಮಂಚಾಲಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ತೆರಳಿ ಪೂಜೆ ನೆರವೇರಿಸಿದರು.

ನಂತರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಉಪಾಸನಾ ಕೊನಿಡೇಲ ಭೇಟಿಯಾದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಉಪಾಸನಾ ಅವರಿಗೆ ಫಲ, ಮಂತ್ರಾಕ್ಷತೆ ಹಾಗೂ ಪರಿಮಳ ಪ್ರಸಾದ ನೀಡಿ ಆಶೀರ್ವದಿಸಿದರು.

ಭೇಟಿಯ ವೇಳೆ ಮಂತ್ರಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಬಡವರು ಮತ್ತು ನಿರ್ಗತಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು. ಸ್ಥಳೀಯ ಜನರಿಗೆ ಆರೋಗ್ಯ ಸಂಬಂಧಿತ ನೆರವು ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳುವ ಅಗತ್ಯದ ಬಗ್ಗೆ ಶ್ರೀಗಳು ಉಪಾಸನಾ ಅವರೊಂದಿಗೆ ಚರ್ಚಿಸಿದರು.

ಮಂತ್ರಾಲಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವುದು ಹಾಗೂ ಬಡ ಮತ್ತು ಅಗತ್ಯವಿರುವ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಕುರಿತು ಚರ್ಚೆ ನಡೆದಿದೆ. ಸ್ಥಳೀಯ ಜನರ ಆರೋಗ್ಯದ ಬಗ್ಗೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತೋರಿಸುತ್ತಿರುವ ಕಾಳಜಿಗೆ ಉಪಾಸನಾ ಕೊನಿಡೇಲ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಮಂತ್ರಾಲಯ ಗ್ರಾಮ ಹಾಗೂ ಸುತ್ತಮುತ್ತಲಿನ ಬಡ ಜನರಿಗೆ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಉಪಾಸನಾ ಅವರು ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಈ ಭೇಟಿ ಧಾರ್ಮಿಕ ದರ್ಶನದ ಜೊತೆಗೆ ಸ್ಥಳೀಯ ಸಮುದಾಯದ ಆರೋಗ್ಯ ಸೇವೆಯ ಕುರಿತ ಚರ್ಚೆಗೂ ವೇದಿಕೆಯಾಯಿತು.

ಇವರು ಪ್ಯಾನ್-ಇಂಡಿಯಾ ಸ್ಟಾರ್ ಮತ್ತು ತೆಲುಗು ನಟ ರಾಮ್ ಚರಣ್ ಅವರ ಧರ್ಮಪತ್ನಿ ಹಾಗೂ ಖ್ಯಾತ ನಟ ಚಿರಂಜೀವಿ ಅವರ ಸೊಸೆಯಾಗಿದ್ದಾರೆ. ರಾಮ್‌ ಚರಣ್‌ ಮತ್ತು ಉಪಾಸನಾ 2012ರ ಜೂನ್‌ನಲ್ಲಿ ವಿವಾಹವಾಗಿದ್ದರು. 10 ವರ್ಷಗಳ ವೈವಾಹಿಕ ಜೀವನದ ನಂತರ ಉಪಾಸನಾ 2023ರಲ್ಲಿ ಮೊದಲ ಮಗು‌, ಕ್ಲಿನ್ ಕಾರಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬಳಿಕ ಇದೇ ವರ್ಷದಲ್ಲಿ ಅವಳಿ ಮಕ್ಕಳು, ಹೆಣ್ಣು ಮಗು ಮತ್ತು ಗಂಡು ಮಗು ಜನನದೊಂದಿಗೆ, ರಾಮ್‌ ಚರಣ್‌ ಮತ್ತು ಉಪಾಸನಾ ಮೂರು ಮಕ್ಕಳ ಪೋಷಕರಾಗಿದ್ದಾರೆ.

Exit mobile version