ಸೆಟ್ಟೇರಿತು ಚಿರಂಜೀವಿ 157 ಸಿನಿಮಾ..ಕ್ಲಾಪ್ ಮಾಡಿ ಶುಭ ಹಾರೈಸಿದ ವಿಕ್ಟರಿ ವೆಂಕಟೇಶ್

Untitled design 2025 03 31t120053.761

ಯುಗಾದಿ ಹಬ್ಬಕ್ಕೆ ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್ ನಲ್ಲಿಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಅಲ್ಲು ಅರವಿಂದ್ ಕ್ಯಾಮೆರಾಗೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ಫಸ್ಟ್ ಶಾಟ್ ಗೆ ಆಕ್ಷನ್ ಕಟ್ ಹೇಳಿದರು.

ಖ್ಯಾತ ನಿರ್ಮಾಪಕರಾದ ದಿಲ್ ರಾಜು ಹಾಗೂ ಸಿರೀಶ್ ಸ್ಕ್ರಿಪ್ಟ್ ಹಸ್ತಾಂತರಿಸಿದರು. ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕರಾದ ಬಾಬಿ, ವಸಿಷ್ಠ, ಶ್ರೀಕಾಂತ್ ಒಡೆಲಾ, ಖ್ಯಾತ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿರು 157ನೇ ಚಿತ್ರಕ್ಕೆ ಸಂಕ್ರಾಂತಿಕಿ ವಸ್ತುನ್ನಾಂ ಖ್ಯಾತಿಯ ನಿರ್ದೇಶಕ‌ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಮೆಗಾ ಸ್ಟಾರ್ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸಲು ರೆಡಿಯಾಗಿದ್ದಾರೆ. ಶಂಕರ್ ವರಪ್ರಸಾದ್ ಎಂಬ ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ.‌‌ಅನಿಲ್ ರವಿಪುಡಿ ಮನರಂಜನೆಗೆ ಎಮೋಷನ್ ಟಚ್ ಕೊಟ್ಟು ಕಥೆ ರೂಪಿಸಿದ್ದಾರಂತೆ.

ಶೈನ್ ಸ್ಕ್ರೀನ್‌ಗಳು ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ನಡಿ ಸಾಹು ಗರಪತಿ ಮತ್ತು ಸುಶ್ಮಿತಾ ಕೊನಿಡೇಲ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅರ್ಚನಾ ಪ್ರೆಸೆಂಟ್ ಮಾಡುತ್ತಿದ್ದಾರೆ. ಭೀಮ್ ಸಿಸಿರೋಲಿಯೋ ಸಂಗೀತ ನಿರ್ದೇಶನ, ತಮ್ಮಿರಾಜು ಸಂಕಲನ, ಸಮೀರ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ಶೀಘ್ರದಲ್ಲೇ ಚಿರಂಜೀವಿಯವರ 157 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

Exit mobile version