ಮೀಡಿಯಾ ಮುಂದೆ ದಾಸನ ದರ್ಶನ.. ವಾಮನ ವಿಶೇಷ ಪ್ರದರ್ಶನ!

Untitled design 2025 04 10t162103.441

ಕನ್ನಡ ಚಿತ್ರರಂಗದ ಪಾಲಿನ ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಒಡೆಯ, ಸ್ಯಾಂಡಲ್‌ವುಡ್ ನಯಾ ಯಜಮಾನ, ಚಾಲೆಂಜ್‌ಗಳನ್ನ ಎದುರಿಸೋ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ ಈಸ್ ಬ್ಯಾಕ್. ಒಂಥರಾ ಶ್ರೀರಾಮ ವನವಾಸ ಹಾಗೂ ಪಾಂಡವರ ಅಜ್ಞಾತವಾಸದಂತೆ ತಾನೂ ಸಾಲು ಸಾಲು ಅವಮಾನ, ಅಪಮಾನಗಳನ್ನ ಮೆಟ್ಟಿ ನಿಂತ ಬಳಿಕ ದರ್ಶನ ಹೊರಬಂದಿದ್ದಾರೆ. ಯೆಸ್.. ವಾಮನ ಚಿತ್ರದ ಸ್ಪೆಷಲ್ ಪ್ರದರ್ಶನಕ್ಕಾಗಿ ದಾಸ ದರ್ಶನ್ ಮಾಧ್ಯಮಗಳಿಗೆ ದರ್ಶನ ನೀಡಿದ್ದಾರೆ.

ADVERTISEMENT
ADVERTISEMENT

ಒಂದು ಸಣ್ಣ ಗ್ಯಾಪ್‌‌ನ ನಂತ್ರ ಮೇ ಐ ಕಮ್ ಇನ್..? ಅಂತ ದರ್ಶನ್ ಹೀಗೆ ಸಾರ್ವಜನಿಕವಾಗಿ ಹೊರಬಂದು ನಗು ಚೆಲ್ಲಿರೋದು ಅವರ ಇಡೀ ಅಭಿಮಾನಿ ಬಳಗಕ್ಕೆ ಖುಷಿ ಕೊಟ್ಟಿದೆ. ನಮ್ಮ ಕನ್ನಡ ಚಿತ್ರರಂಗದಲ್ಲಿರೋದೇ ಬೆರಳೆಣಿಕೆಯಷ್ಟು ಸೂಪರ್ ಸ್ಟಾರ್ಸ್‌. ಅವರು ಹಿಂದೆ ಸರಿಯೋದು ಇಂಡಸ್ಟ್ರಿಗೆ ಒಳಿತಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಎರಡನೇ ಅರೋಪಿಯಾಗಿ ಜೈಲು ಸೇರಿದ್ದ ದರ್ಶನ್, ಬೇಲ್ ಮೇಲೆ ಹೊರಗೆ ಬಂದಿದ್ದಾರೆ.

ಕಾನೂನಿನ ಪ್ರಕಾರ ಕೋರ್ಟ್, ಕಟಕಟೆ, ವಾದ ಪ್ರತಿವಾದಗಳು ಇದ್ದೇ ಇರುತ್ತವೆ. ಆದ್ರೆ ಅವೆಲ್ಲವುಗಳ ಹೊರತಾಗಿ ಚಿತ್ರರಂಗಕ್ಕೆ ಬೇಗ ವಾಪಸ್ ಆಗಿರೋ ದರ್ಶನ್ ನಡೆಗೆ ಹ್ಯಾಟ್ಸಾಪ್ ಹೇಳಲೇಬೇಕು. ರಾಮನ ಭಂಟ ಹನುಮನಂತೆ ದರ್ಶನ್ ಕಷ್ಟ ಸುಖಗಳ ಪಾಲುದಾರ ಧನ್ವೀರ್ ಗೌಡ ನಟನೆಯ 4ನೇ ಸಿನಿಮಾ ವಾಮನ. ಧನ್ವೀರ್‌ಗೆ ಬಿಗ್ ಬ್ರದರ್ ಆಗಿರೋ ದರ್ಶನ್, ವಾಮನ ರಿಲೀಸ್‌ಗೂ ಮೊದಲೇ ಬಂದು ಜಿಟಿ ಮಾಲ್‌‌ನಲ್ಲಿ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗುವ ಮೂಲಕ ಸಾಥ್ ನೀಡಿದ್ದಾರೆ.

ಈ ಮೂಲಕ ಮತ್ತೆ ಫೀಲ್ಡ್‌ಗೆ ಇಳಿದಿದ್ದಾರೆ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್. ಪ್ರತಿಯೊಬ್ಬರ ಲೈಫ್‌‌ನಲ್ಲೂ ಅಪ್ ಅಂಡ್ ಡೌನ್ಸ್ ಇದ್ದೇ ಇರುತ್ತೆ. ಅದೇ ರೀತಿ ದರ್ಶನ್ ಬಾಳಲ್ಲೂ ಒಂದು ಕಹಿ ಘಟನೆ ನಡೆದು ಹೋಗಿದೆ. ಹಾಗಂತ ಅಲ್ಲೇ ನಿಲ್ಲೋಕೆ ಅಸಾಧ್ಯ. ಎಂದಿನಂತೆ ಶೂಟಿಂಗ್‌ಗೆ ಮರಳಿದ ದಚ್ಚು, ಡೆವಿಲ್ ದಿ ಹೀರೋ ಚಿತ್ರಕ್ಕಾಗಿ ಮೈಸೂರು, ರಾಜಸ್ಥಾನದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು. ಇದೀಗ ಬಹಿರಂಗವಾಗಿ ಹೊರಬರುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ನಟ ಚಿಕ್ಕಣ್ಣ, ನಿರ್ಮಾಪಕ ಶಿವಕುಮಾರ್, ಧನ್ವೀರ್ ಗೌಡ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ವಾಮನ ಡೈರೆಕ್ಟರ್ ಶಂಕರ್ ರಾಮನ್ ಜೊತೆಗೂಡಿ ವಾಮನ ಸಿನಿಮಾ ವೀಕ್ಷಿಸಿದ ದರ್ಶನ್ ಫಸ್ಟ್ ರಿವ್ಯೂ ಕೂಡ ನೀಡಿದ್ದಾರೆ. ತಾಯಿ-ಮಗನ ಬಾಂಧವ್ಯ, ತಂದೆಯ ಮಹತ್ವ, ಫಸ್ಟ್ ಹಾಫ್ ಒಂಥರಾ ಸೆಕೆಂಡ್ ಹಾಫ್ ಇನ್ನೊಂಥರಾ ಅಂತ ಡಿಟೈಲ್ಡ್ ಆಗಿ ಮಾತನಾಡಿದ್ದಾರೆ.

ಇನ್ನು ಧನ್ವೀರ್ ತರಹ ನನಗೆ ಲವ್ ಮಾಡೋಕೆ ಬರಲ್ಲ ಅಂತ ಕಿಚಾಯಿಸಿದ ದಚ್ಚು, ಮುದ್ದು ರಾಕ್ಷಸಿ ಅಂತ ವೈಫ್‌ನ ಯಾವತ್ತಾದ್ರೂ ಕರೆದಿದ್ದೀರಾ ಅಂತ ಮಾಧ್ಯಮದವರ ಜೊತೆಗೂ ಸಲುಗೆಯಿಂದ ಮಾತನಾಡಿದ್ದಾರೆ.

ಬಲಿ ಚಕ್ರವರ್ತಿ ಬಳಿ ಮೂರು ಹೆಜ್ಜೆ ವರ ಕೇಳುವ ವಾಮನನಂತೆ, ಇಲ್ಲಿ ಧನ್ವೀರ್‌ಗೆ ಕರ್ನಾಟಕದ ಜನತೆ ಚಿತ್ರರಂಗದಲ್ಲಿ ನೆಲೆಯೂರಲು ಒಂದು ಹೆಜ್ಜೆ ಕೊಡಿ ಸಾಕು ಅಂತ ಮನವಿ ಮಾಡಿದ್ರು. ಧನ್ವೀರ್ ಹೈಟ್, ಕಾಲುಗಳ ಬಗ್ಗೆ ಮಾತನಾಡಿದ ದಚ್ಚು, ಆ್ಯಕ್ಷನ್ ಸೀಕ್ವೆನ್ಸ್ ಬಗ್ಗೆಯೂ ಪ್ರಸ್ತಾಪ ಮಾಡಿದ್ರು.

ಬೇರೆ ಟಾಪಿಕ್ ಬೇಡ ಅಂತ ಬರೀ ಸಿನಿಮಾ ಬಗ್ಗೆ ಮಾತನಾಡಿದ ಡಿಬಾಸ್, ಇತ್ತೀಚೆಗೆ ರಾಯಲ್ ಸಿನಿಮಾ ವೀಕ್ಷಿಸಿದ್ರು. ಇದೀಗ ವಾಮನ ನೋಡಿದ್ದಾರೆ. ಸೋ ದಿನಕರ್, ಚಿಕ್ಕಣ್ಣ ಅಥ್ವಾ ಧನ್ವೀರ್ ಕಾಂಬೋ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ. ಆ ತರಹದ ಕಥೆ, ಡೈರೆಕ್ಟರ್‌‌ಗಳು ಬೇಕು ಅಂದಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂತ ಮತ್ತೊಮ್ಮೆ ಕನ್ನಡಾಭಿಮಾನ ತೋರಿದ್ದಾರೆ ಚಾಲೆಂಜಿಂಗ್ ಸ್ಟಾರ್.

ಧನ್ವೀರ್‌ಗೆ ಬೇಗ ಮದ್ವೆ ಮಾಡಿ, ನಾನು ರಿಸೆಪ್ಷನ್‌ಗೆ ಸೂಟ್, ಮುಹೂರ್ತಕ್ಕೆ ಪಂಚೆ ಹಾಕ್ತೀನಿ. ಬೀಗರ ಊಟಕ್ಕೆ ಕರೆದ್ರೆ ಏನು ಅಂತ ಜೋಕ್ ಮಾಡೋ ಮೂಲಕ ತಮ್ಮನಂತಹ ಧನ್ವೀರ್ ಗೌಡ ಫ್ಯೂಚರ್ ಬಗ್ಗೆಯೂ ಮಾತನಾಡಿದ್ದಾರೆ ದರ್ಶನ್.

ಚಿಕ್ಕಣ್ಣ ಕೂಡ ಸಿನಿಮಾ ನೋಡಿದ ಬಳಿಕ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಧನ್ವೀರ್ ನಟನೆಯನ್ನ ಕೊಂಡಾಡಿದ ಸ್ಯಾಂಡಲ್‌ವುಡ್ ಉಪಾಧ್ಯಕ್ಷ, ನನಗೆ ರಾಜಾಹುಲಿ ಸಿನಿಮಾ ನೋಡಿದ ಫೀಲ್ ಸಿಕ್ತು ಅಂದಿದ್ದಾರೆ. ಸಖತ್ & ವೆರೈಟಿ ಲವ್ ಸ್ಟೋರಿ ತುಂಬಾ ಕಾಡಿತು ಅಂತ ಚಿಕ್ಕು ಮುಗುಳುನಕ್ಕರು.

ಒಟ್ಟಾರೆ ಚಾಲೆಂಜ್‌ಗಳನ್ನ ನೀರು ಕುಡಿದಷ್ಟೇ ಸಲೀಸಾಗಿ ಎದುರಿಸೋ ಚಾಲೆಂಜಿಂಗ್ ಸ್ಟಾರ್, ಬೆನ್ನು ನೋವಿನ ನಡುವೆಯೂ ಸಹ ಶೂಟಿಂಗ್, ಡಬ್ಬಿಂಗ್, ಟ್ರೈಲರ್ ಲಾಂಚ್, ಸ್ಪೆಷಲ್ ಪ್ರೀಮಿಯರ್ ಅಂತ ಸಕ್ರಿಯರಾಗಿರೋದು ಒಳ್ಳೆಯ ಬೆಳವಣಿಗೆ. ಸದ್ಯ ಗಜಪಡೆ ಚಿಕ್ಕದಾಗಿದ್ದು, ಚೊಕ್ಕವಾಗಿರೋ ಮುನ್ಸೂಚನೆ ಸಿಕ್ಕಿದೆ. ಅದ್ರಲ್ಲೂ ಮಾಧ್ಯಮಗಳ ಮುಂದೆ ಬಹಳ ಗೌರವಪೂರ್ವಕವಾಗಿ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಂಡ ದರ್ಶನ್‌‌ರಲ್ಲಿ ಆಗಿರೋ ಬದಲಾವಣೆ ನೋಡಿದ್ರೆ ಡಿಬಾಸ್ 2.ಓ ವರ್ಷನ್ ಕಾಣ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version