ಡಿಬಾಸ್ಗೆ 49ನೇ ಬರ್ತ್ ಡೇ.. ಭಾವುಕರಾದ ಮಗ, ಪತ್ನಿ, ರಕ್ಷಿತಾ , ಉಸಿರಿರೋವರೆಗೂ ನಿಮ್ಮಿಂದೆ ಇರ್ತೀವಿ ಎಂದ ದಚ್ಚು ಭಂಟ ಧನು. ಬಾಸ್ ಬರ್ತ್ ಡೇಗಾಗಿ ಕಿರುತರೆಯಲ್ಲಿ 5 ದಿನಕ್ಕೆ 15 ಚಿತ್ರ ನೀಡಿ ದಾಸನಿಗೆ ಟ್ರಿಬ್ಯೂಟ್ ನೀಡಿದೆ. ಇವುಗಳೊಟ್ಟಿಗೆ ದರ್ಶನ್ ಹುಟ್ಟುಹಬ್ಬ ಸಂಭ್ರಮಕ್ಕೆ ಬ್ರೇಕ್ ಖಾಕಿ ಬ್ರೇಕ್ ಹಾಕಿದೆ.
ಸ್ಯಾಂಡಲ್ವುಡ್ ಸುಲ್ತಾನ ದರ್ಶನ್ ಜೀವಮಾನದಲ್ಲೇ ಈ ದಿನ ಬಹಳ ದುರದೃಷ್ಠಕರ. ಫ್ಯಾಮಿಲಿ, ಫ್ಯಾನ್ಸ್ ಅಷ್ಟೇ ಅಲ್ಲ, ಚಿತ್ರರಂಗದ ಮಂದಿ, ಚಿತ್ರಪ್ರೇಮಿಗಳಿಗೂ ದರ್ಶನ್ ಅನುಪಸ್ಥಿತಿಯಲ್ಲಿ ಅವರ ಬರ್ತ್ ಡೇ ಆಚರಿಸ್ತಿರೋದು ನೋವಿನ ಸಂಗತಿ. ಯಾವಾಗ ಸಿಗುತ್ತೆ ದರ್ಶನ್ಗೆ ಬಿಡುಗಡೆ ಭಾಗ್ಯ..? ಕುಟುಂಬ ಏನು ಹೇಳುತ್ತೆ..? ಫ್ಯಾನ್ಸ್ ನೋವಿನ ನುಡಿಗಳೇನು..? ಐದು ದಿನದಲ್ಲಿ ಕಿರುತೆರೆಗೆ 15 ಚಿತ್ರಗಳ ದರ್ಶನ ಸೇರಿದಂತೆ ದಚ್ಚು ಬ್ಯಾಕ್ಪೇನ್ಗೆ ಎಷ್ಟೆಲ್ಲಾ ನರಳಾಡಿದ್ರು ಅನ್ನೋದನ್ನ ಹೇಳ್ತೀವಿ ನೋಡಿ.
ಡಿಬಾಸ್ಗೆ 49ನೇ ಬರ್ತ್ ಡೇ.. ಮಗ, ಪತ್ನಿ, ರಕ್ಷಿತಾ ಭಾವುಕ
ಈ ವರ್ಷವೂ ಇಲ್ಲ ದಾಸನಿಗೆ ಜನ್ಮ ದಿನ ಸೆಲೆಬ್ರೇಷನ್ ಭಾಗ್ಯ
ದುರಂತ ಅಂದ್ರೆ ಇದೇ ನೋಡಿ. ಇಡೀ ಕರುನಾಡೇ ಸಂಭ್ರಮಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇಗೆ ಇಂದು ಅವರೇ ಅದನ್ನ ಕಣ್ತುಂಬಿಕೊಳ್ಳೋಕೆ ಇಲ್ಲ. ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ಅಚ್ಚುಮೆಚ್ಚಿನ ಮಾಡ್ರನ್ ಯಜಮಾನ, ಚಿತ್ರರಂಗದ ಒಡೆಯ, ಬಾಕ್ಸ್ ಆಫೀಸ್ ಸುಲ್ತಾನ, ಸೆಲೆಬ್ರಿಟಿಗಳ ಹೃದಯ ಸಿಂಹಾಸನದ ಚಕ್ರವರ್ತಿ ಡಿಬಾಸ್ ದರ್ಶನ್ಗೆ ಇಂದು 49ನೇ ಹುಟ್ಟುಹಬ್ಬ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಿ ಜೈಲು ಸೇರಿರೋ ದಾಸನಿಗೆ ಈ ಬಾರಿಯೂ ಸಂಭ್ರಮಾಚರಣೆ ಇಲ್ಲ ಅನ್ನೋದು ಬೇಸರದ ಸಂಗತಿ.
ಅಂದಹಾಗೆ ಕಳೆದ ವರ್ಷ ಬೇಲ್ ಮೇಲೆ ದಚ್ಚು ಹೊರಗಿದ್ರು. ಆದ್ರೆ ಕಾನೂನು ತೊಡಕಿದ್ದ ಕಾರಣ ಅವ್ರು ಸೆಲೆಬ್ರೇಷನ್ ಮಾಡಿಕೊಂಡಿರಲಿಲ್ಲ. ಕುಟುಂಬ ಹಾಗೂ ಅತ್ಯಾಪ್ತರ ಜೊತೆಗಷ್ಟೇ ಕೇಕ್ ಕಟ್ ಮಾಡಿದ್ರು. ಈ ವರ್ಷ ಕಂಬಿ ಹಿಂದೆ ಇದ್ದಾರೆ. ಆದ್ರೂ ಸಹ ಅವ್ರ ಅನುಪಸ್ಥಿತಿಯಲ್ಲೇ ಭಾವನಾತ್ಮಕ ಪೋಸ್ಟ್ಗಳ ಮೂಲಕ ಪತ್ನಿ ವಿಜಯಲಕ್ಷ್ಮೀ ದರ್ಶನ್, ಮಗ ವಿನೀಶ್ ದರ್ಶನ್ ಹಾಗೂ ಸಹೋದರ ಸಮಾನ ಧನ್ವೀರ್ ಗೌಡ ವಿಶೇಷವಾಗಿ ದರ್ಶನ್ಗೆ ಬರ್ತ್ ಡೇ ಶುಭಾಶಯ ಕೋರಿದ್ದಾರೆ.
ಉಸಿರಿರೋವರೆಗೂ ಇರ್ತೀವಿ ನಿಮ್ಮಿಂದೆ.. ದಚ್ಚು ಭಂಟ ಧನು
ಬೇಗ ಮನೆಗೆ ಬಾ ಕಣೋ ಎಂದು ಕ್ರೇಜಿ ಕ್ವೀನ್ ಸ್ಪೆಷಲ್ ವಿಶ್
ಕಳೆದ ವರ್ಷ ಕೇಕ್ ಕಟ್ ಮಾಡಿರೋ ಪೋಟೋ ಹಂಚಿಕೊಂಡಿರೋ ವಿಜಯಲಕ್ಷ್ಮೀ, ದರ್ಶನ್ಗೆ ಪ್ರತೀ ದಿನ ಆಚರಿಸೋ ಅಂತಹ ವ್ಯಕ್ತಿ. ಅವರಿಗೆ ಪ್ರೀತಿಪೂರ್ವಕ ಹುಟ್ಟು ಹಬ್ಬ ಎಂದು ಮಗನ ಸಮೇತ ಪೋಸ್ಟ್ ಮಾಡಿದ್ದಾರೆ. ಇನ್ನೂ ಮಗ ವಿನೀಶ್ ಅಪ್ಪನ ಜೊತೆಗಿನ ಅವಿಸ್ಮರಣೀಯ ಕ್ಷಣಗಳ ಫೋಟೋಗಳ ವಿಶೇಷ ವಿಡಿಯೋ ಶೇರ್ ಮಾಡಿ ಶುಭಾಶಯ ಕೋರಿ, ಲವ್ ಯೂ ಮಿಸ್ ಯೂ ಪಪ್ಪಾ ಎಂದಿದ್ದಾರೆ. ಇದು ನಿಜಕ್ಕೂ ವೆರಿ ವೆರಿ ಎಮೋಷನಲ್.
ದಚ್ಚು ಭಂಟ ಧನ್ವೀರ್ ಗೌಡ ಸ್ಯಾಂಡಲ್ವುಡ್ನ ನಟ ಅನ್ನೋದಕ್ಕಿಂತ ಹೆಚ್ಚಾಗಿ ದರ್ಶನ್ ಅತ್ಯಾಪ್ತ. ಸಹೋದರ ಸಮಾನ. ಶ್ರೀರಾಮ ಕಾಡಿನಲ್ಲಿದ್ದಾಗ ಲಕ್ಷ್ಮಣನಂತೆ ಸಾಥ್ ನೀಡಿದವರು. ಇಂದಿಗೂ ಅದೇ ನೈತಿಕ ಬೆಂಬಲ ನೀಡ್ತಿರೋರು. ಹಾಗಾಗಿ ಧನ್ವೀರ್ ಕೂಡ ಉಸಿರಿರೋವರೆಗೂ ಇರ್ತೀವಿ ನಿಮ್ಮಿಂದೆ ಅಂತ ಕಳೆದ ವರ್ಷ ಸೆಲೆಬ್ರೇಷನ್ ವಿಡಿಯೋ ಹಂಚಿಕೊಂಡಿದ್ದಾರೆ.
ಅಂದಹಾಗೆ ಇದೇ ತಿಂಗಳಾಂತ್ಯಕ್ಕೆ ಧನ್ವೀರ್ ಗೌಡರ ಹಯಗ್ರೀವ ಸಿನಿಮಾ ರಿಲೀಸ್ ಆಗ್ತಿದ್ದು, ಡಿಬಾಸ್ ಬರ್ತ್ ಡೇ ವಿಶೇಷ ಹಯಗ್ರೀವ ಮಾಸ್ ಟೀಸರ್ ಲಾಂಚ್ ಮಾಡೋ ಮೂಲಕ ಫ್ಯಾನ್ಸ್ಗೆ ಗಿಫ್ಟ್ ನೀಡಲಾಗಿದೆ. ಅದ್ರಲ್ಲಿ ಆರಂಭದಲ್ಲಿ ಬರುವ ದಾಸನ ಕುರಿತ ಮಾತುಗಳು ನಿಜಕ್ಕೂ ಅದ್ಭುತ, ಅರ್ಥಪೂರ್ಣ.
ಇಂಟರೆಸ್ಟಿಂಗ್ ಅಂದ್ರೆ ದರ್ಶನ್ ಪರಮಾಪ್ತ ಗೆಳತಿ, ಸ್ಯಾಂಡಲ್ವುಡ್ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಡಿಬಾಸ್ಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಪ್ರತಿ ದಿನ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನ ಮತ್ತೆ ಸಂತೋಷದಿಂದ ನೋಡಬೇಕೆಂದು ಬಯಸುತ್ತೇನೆ. ಬೇಗ ಮನೆಗೆ ಬಾ ಕಣೋ ಅಂತ ಅತ್ಯಂತ ಪ್ರೀತಿಪೂರ್ವಕವಾಗಿ ದಾಸನಿಗೆ ಜನುಮ ದಿನದ ಶುಭಾಶಯ ಕೋರಿದ್ದಾರೆ.
ತೂಗುದೀಪ ನಿವಾಸ ಮೌನ.. ಸಂಭ್ರಮಕ್ಕೆ ಖಾಕಿಯಿಂದ ಬ್ರೇಕ್
ನಮ್ ಬಾಸು ಯಾರು.. ಚಾಲೆಂಜಿಂಗ್ ಸ್ಟಾರ್.. ವೇದ ಘೋಷ
ರಾಜರಾಜೇಶ್ವರಿ ನಗರದಲ್ಲಿರೋ ದರ್ಶನ್ ಅವರ ತೂಗುದೀಪ ನಿವಾಸದ ಎದುರು ಪೊಲೀಸ್ ಕಟ್ಟೆಚ್ಚರ ವಹಿಸಿದೆ. ಅಲ್ಲಿ ಅವ್ರ ಮನೆ ಮುಂದೆ ಜನುಮ ದಿನದ ಸಂಭ್ರಮಾಚರಣೆಗೆ ಅವಕಾಶ ನೀಡಿಲ್ಲ. ಬ್ಯಾರಿಕೇಡ್ ಹಾಕಿ ಟೈಟ್ ಸೆಕ್ಯೂರಿಟಿ ನೇಮಿಸಿದೆ. ಹೀಗಾಗಿ ಅಲ್ಲೇ ಅವ್ರ ಮನೆಯ ಆಸುಪಾಸಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ದರ್ಶನ್ ಫ್ಯಾನ್ಸ್ ಅವ್ರ ಭಾವಚಿತ್ರ ಹಿಡಿದು, ಫ್ಲ್ಯಾಗ್ ಹಿಡಿದು ನಮ್ ಬಾಸು ಯಾರು.. ಚಾಲೆಂಜಿಂಗ್ ಸ್ಟಾರು ಅಂತ ಘೋಷಣೆಗಳನ್ನ ಕೂಗುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಬಹುಶಃ ಇಂದು ದರ್ಶನ್ ಇದ್ದಿದ್ರೆ ಅನ್ನದಾಸೋಹಕ್ಕೆ ಬೇಕಾಗುವಂತಹ ಅಕ್ಕಿ, ಬೇಳೆ, ಎಣ್ಣೆ ಹೇರಳವಾಗಿ ಲೋಡ್ ಗಟ್ಟಲೆ ಬಂದು ದರ್ಶನ್ ಮನೆಯ ಗೋಡೌನ್ ತುಂಬುತ್ತಿತ್ತು.
ನಟ ದರ್ಶನ್ ಬೇಲ್ಗಾಗಿ ನಂಜುಂಡೇಶ್ವರ ಸ್ವಾಮಿಯ ಮೊರೆ
ನಟಿ ತನುಷಾ ಕುಪ್ಪಂಡ, ಗಾಯಕ ಸುಪ್ರೀತ್ ವಿಶೇಷ ಹೋಮ
3 ದಿನಗಳ ನಿರಂತರ ಹೋಮ.. ಬರ್ತ್ ಡೇಗಾಗಿ ಸಿಹಿ ಹಂಚಿಕೆ
ಜೆ. ಪಿ. ನಗರದ ಪುಟ್ಟೇನಹಳ್ಳಿ ಸರ್ಕಲ್ ಬಳಿ ಇರೋ ನಂಜುಂಡೇಶ್ವರ ದೇವಸ್ಥಾನದಲ್ಲಿ ದರ್ಶನ್ಗಾಗಿ ಅವ್ರ ಕಟ್ಟಾಭಿಮಾನಿ ಸುಪ್ರೀತ್ ಗಾಂಧಾರ ಹಾಗೂ ನಟಿ ತನಿಷಾ ಕುಪ್ಪಂಡ ವಿಶೇಷವಾದ ಪೂಜೆ, ಪುನಸ್ಕಾರ ಮಾಡಿಸಿದ್ದಾರೆ. ದರ್ಶನ್ ಭಾವಚಿತ್ರ ಹಿಡಿದೇ ಪವರ್ಫುಲ್ ಹೋಮ, ಹವನ ಮಾಡಿಸಿದ್ದಾರೆ. ಅವರು ಬೇಗ ರಿಲೀಸ್ ಆಗಲಿ. ಯಾರ ಕೆಟ್ಟ ದೃಷ್ಠಿಯೂ ತಾಕದಿರಲಿ ಅಂತ ಸತತ ಮೂರು ದಿನಗಳಿಂದ ನಿರಂತರ ಹೋಮ ಪೂಜೆ ಮಾಡಿಸಿದ್ದಾರೆ.
ರುದ್ರ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ನವಗ್ರಹ ಹೋಮ, ಗಣಪತಿ ಹೋಮ, ನವಗ್ರಹ ಶಕ್ತಿ ಹೋಮ.. ಹೀಗೆ ಸಾಕಷ್ಟು ಹೋಮಗಳನ್ನ ಮಾಡಿಸಿದ್ದಾರೆ ತನಿಷಾ ಹಾಗೂ ಸುಪ್ರೀತ್. ಅದಕ್ಕೆ ಸುಪ್ರೀತ್ ಅವರ ಕುಟುಂಬ ಕೂಡ ಸಾಥ್ ನೀಡಿರೋದು ವಿಶೇಷ. ಅಂದಹಾಗೆ ಸುಪ್ರೀತ್ ಪ್ರತೀ ವರ್ಷ ತಾವೇ ಕಂಪೋಸ್ ಮಾಡಿದ ಆಲ್ಬಮ್ ಹಾಡೊಂದನ್ನ ದರ್ಶನ್ ಬರ್ತ್ ಡೇಗೆ ಗಿಫ್ಟ್ ನೀಡ್ತಿದ್ರು. ಆದ್ರೆ ಈ ಬಾರಿ ಹಾಡಿಗಿಂತ ಹೋಮ ಮುಖ್ಯ ಅನಿಸಿ ಈ ಕಾರ್ಯ ಮಾಡಿಸಿದ್ದಾರೆ. ಇದು ನಿಜವಾದ ಅಭಿಮಾನಿಗಳ ಅಭಿಮಾನದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.
5 ದಿನಕ್ಕೆ 15 ಚಿತ್ರ.. ಕಿರುತೆರೆಯಿಂದಲೂ ದಾಸನಿಗೆ ಟ್ರಿಬ್ಯೂಟ್
ನಾಲ್ಕು ಜಿಇಸಿ ಚಾನೆಲ್ಗಳಿಂದ ದರ್ಶನ್ 15 ಹಿಟ್ ಚಿತ್ರಗಳು
ದರ್ಶನ್ ಬರ್ತ್ ಡೇ ಅಂದ್ರೆ ಒಂಥರಾ ಹಬ್ಬದ ಸಂಭ್ರಮ. ಅದರಲ್ಲೂ ಕರ್ನಾಟಕದಲ್ಲಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ಡಿಬಾಸ್ ದಚ್ಚು ಚಿತ್ರಗಳು ಅತಿಹೆಚ್ಚು ಮಂದಿಯಿಂದ ವೀಕ್ಷಿಸಲ್ಪಡುತ್ತವೆ. ಅದು ಥಿಯೇಟರ್ ಇರಬಹುದು ಅಥ್ವಾ ಕಿರುತೆರೆಯಲ್ಲಿ ಇರಬಹುದು. ಇನ್ನೂ ದರ್ಶನ್ ಚಿತ್ರಗಳು ಎಂಟರ್ಟೈನ್ಮೆಂಟ್ ಚಾನೆಲ್ಸ್ನಲ್ಲಿ ಪ್ರಸಾರ ಆದಾಗ ಅತಿಹೆಚ್ಚು ಟಿವಿಆರ್ ಕೂಡ ಪಡೆದುಕೊಳ್ಳುತ್ತವೆ. ಆ ನಿಟ್ಟಿನಲ್ಲಿ ಕನ್ನಡದ ನಾಲ್ಕು ಪ್ರತಿಷ್ಠಿತ ವಾಹಿನಿಗಳು ಫೆಬ್ರವರಿ 16ರಿಂದ 20ರ ತನಕ ಐದು ದಿನದಲ್ಲಿ ಬರೋಬ್ಬರಿ 15 ದರ್ಶನ್ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನ ಪ್ರಸಾರ ಮಾಡ್ತಿವೆ.
ಈ ಮೂಲಕ ಡಿಬಾಸ್ಗೆ ಟ್ರಿಬ್ಯೂಟ್ ನೀಡ್ತಿವೆ ಎಂಟರ್ಟೈನ್ಮೆಂಟ್ ವಾಹಿನಿಗಳು. ಉದಯದಲ್ಲಿ ರಾಬರ್ಟ್, ಐರಾವತ, ದತ್ತ, ಧ್ರುವ, ಚಕ್ರವರ್ತಿ, ಅಣ್ಣಾವ್ರು ಚಿತ್ರಗಳು ಪ್ರಸಾರವಾದ್ರೆ, ಉದಯ ಮೂವೀಸ್ನಲ್ಲಿ ಮೆಜೆಸ್ಟಿಕ್ ಸಿನಿಮಾ ಆನ್ ಏರ್ ಆಗ್ತಿದೆ. ಅಲ್ಲದೆ, ಸ್ಟಾರ್ ಸುವರ್ಣ ಪ್ಲಸ್ನಲ್ಲಿ ಪೊರ್ಕಿ, ಶೌರ್ಯ, ಇಂದ್ರ, ಯಜಮಾನ, ಸಂಗೊಳ್ಳಿ ರಾಯಣ್ಣ ಚಿತ್ರಗಳು ಹಾಗೂ ಕಲರ್ಸ್ ಕನ್ನಡದಲ್ಲಿ ತಂಗಿಗಾಗಿ, ಅಯ್ಯ, ಮಂಡ್ಯ ಸಿನಿಮಾಗಳು ಪ್ರಸಾರ ಆಗ್ತಿವೆ. ಇದೊಂಥರಾ ಡಿಬಾಸ್ ಫಿಲ್ಮ್ ಫೆಸ್ಟಿವಲ್ ಅಂದ್ರೂ ತಪ್ಪಾಗಲ್ಲ.
