ಚೆನ್ನೈ (ಜುಲೈ 10): ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ‘ಜನ ನಾಯಗನ್’ ಕೊನೆಗೂ ತನ್ನ ಎಲ್ಲಾ ರೀತಿಯ ಅಡಚಣೆಯನ್ನು ದಾಟಿದೆ. ಹಲವು ತಿಂಗಳುಗಳಿಂದ ಸೆನ್ಸಾರ್ ಕ್ಲಿಯರೆನ್ಸ್ ವಿಚಾರದಲ್ಲಿ ವಿಳಂಬ ಅನುಭವಿಸಿದ್ದ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದೀಗ ‘A’ ಪ್ರಮಾಣಪತ್ರ ನೀಡಿದೆ. ಈ ಮೂಲಕ ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ‘ಜನ ನಾಯಗನ್’ ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ದಾರಿ ಸುಗಮವಾಗಿದೆ.
ಆದರೆ, ಚಿತ್ರಕ್ಕೆ ಕ್ಲಿಯರೆನ್ಸ್ ಸಿಗುವ ಮೊದಲು ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಒಟ್ಟು 12 ಪ್ರಮುಖ ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಿನಿಮಾದಲ್ಲಿದ್ದ ಕೆಲವು ರಾಜಕೀಯ ಉಲ್ಲೇಖಗಳು, ಧಾರ್ಮಿಕ ಪದಗಳು ಹಾಗೂ ಸೂಕ್ಷ್ಮ ದೃಶ್ಯಗಳು ಮಂಡಳಿಯ ಆಕ್ಷೇಪಕ್ಕೆ ಗುರಿಯಾಗಿವೆ. ಈ ಬದಲಾವಣೆಗಳನ್ನು ಮಾಡಿದ ಬಳಿಕವೇ ಚಿತ್ರಕ್ಕೆ ಪ್ರಮಾಣಪತ್ರ ನೀಡಲಾಗಿದೆ.
ಚಿತ್ರದಲ್ಲಿರುವ ವಿಜಯ್ ಅವರ ರಾಜಕೀಯ ಪಕ್ಷ ‘ಟಿವಿಕೆ’ಗೆ ಸಂಬಂಧಿಸಿದ ಸಂಭಾಷಣೆಗಳು ಮತ್ತು ಉಲ್ಲೇಖಗಳನ್ನು ಮ್ಯೂಟ್ ಮಾಡಲು ಅಥವಾ ಬದಲಾಯಿಸಲು ಸೆನ್ಸಾರ್ ಮಂಡಳಿ ಸೂಚಿಸಿದೆ ಎಂದು ವರದಿಯಾಗಿದೆ. ಇದೇ ವೇಳೆ, ಭಾರತದ ರಾಷ್ಟ್ರಧ್ವಜವನ್ನು ತೋರಿಸುವ ಒಂದು ಪ್ರಮುಖ ದೃಶ್ಯವನ್ನೂ ಚಿತ್ರದಿಂದ ತೆಗೆದುಹಾಕಲಾಗಿದೆ ಎನ್ನಲಾಗುತ್ತಿದೆ. ರಾಜಕೀಯ ಅಂಶಗಳು ಚಿತ್ರದಲ್ಲಿ ನೇರವಾಗಿ ಪ್ರತಿಬಿಂಬಿಸಬಾರದು ಎಂಬ ದೃಷ್ಟಿಯಿಂದ ಈ ತಿದ್ದುಪಡಿ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಇದರ ಜೊತೆಗೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಪುಸ್ತಕದ ಮುಖಪುಟವನ್ನು ಬದಲಾಯಿಸಲು ಹಾಗೂ ಅವರಿಗೆ ಸಂಬಂಧಿಸಿದ ವಿವಾದಾತ್ಮಕ ಸಂಭಾಷಣೆಯನ್ನು ತಿದ್ದುಪಡಿ ಮಾಡಲು ಸೂಚಿಸಲಾಗಿದೆ. ಚಿತ್ರದಲ್ಲಿ ಬಳಕೆಯಾದ ಕೆಲವು ಧಾರ್ಮಿಕ ಪದಗಳನ್ನು ಮ್ಯೂಟ್ ಮಾಡುವಂತೆ ಮಂಡಳಿ ಹೇಳಿದೆ. ಅಲ್ಲದೇ, ಸದ್ದಾಂ ಹುಸೇನ್ ಗಲ್ಲು ಶಿಕ್ಷೆ, ಭಾರತಕ್ಕೆ ಸಂಬಂಧಿಸಿದ ಕೆಲವು ಕಟು ಸಂಭಾಷಣೆಗಳು, ಮಹಿಳೆಯರ ಅಥವಾ ಹೆಣ್ಣು ಮಕ್ಕಳ ಕುರಿತು ಕೆಲವು ಆಕ್ಷೇಪಾರ್ಹ ಹೇಳಿಕೆಗಳು ಹಾಗೂ ಮಗುವನ್ನು ಸುಡುವ ದೃಶ್ಯಗಳಲ್ಲಿಯೂ ಬದಲಾವಣೆ ತರಲು ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
‘ಜನ ನಾಯಗನ್’ ಸಿನಿಮಾ ಆರಂಭದಿಂದಲೇ ರಾಜಕೀಯ ಕುತೂಹಲ ಕೆರಳಿಸಿತ್ತು. ವಿಜಯ್ ಈಗಾಗಲೇ ರಾಜಕೀಯಕ್ಕೆ ಎಂಟ್ರಿ ನೀಡಿರುವುದರಿಂದ, ಅವರ ಕೊನೆಯ ಚಿತ್ರ ಯಾವ ಸಂದೇಶ ನೀಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಸೆನ್ಸಾರ್ ಮಂಡಳಿಯ ತಿದ್ದುಪಡಿಗಳ ಬಳಿಕ ಚಿತ್ರ ಬಿಡುಗಡೆಯ ಹಾದಿಗೆ ಬಂದಿದೆ. ಆದರೂ, ಸಿನಿಮಾದ ಮೂಲ ಕಥಾಹಂದರ ಮತ್ತು ರಾಜಕೀಯ ಟೋನ್ ಮೇಲೆ ಈ ಬದಲಾವಣೆಗಳು ಎಷ್ಟು ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.
