ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಿರೂಪಕಿ, ತಮ್ಮ ಚಾರ್ಮಿಂಗ್ ಲುಕ್ ಹಾಗೂ ಅದ್ಭುತ ವಾಯ್ಸ್ನಿಂದಲೇ ಕನ್ನಡಿಗರ ಮನಗೆದ್ದಿದ್ದ ಅನುಪಮಾ ಗೌಡ ತಮ್ಮ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. 8 ವರ್ಷಗಳ ಆಂಕರಿಂಗ್ ಪಯಣಕ್ಕೆ ಈ ಕ್ಯೂಟ್ ಆಂಕರ್, ಫುಲ್ ಸ್ಟಾಪ್ ಇಟ್ಟಿದ್ದಾರೆ. ಅನುಪಮಾ, ಈ ನಿರ್ಧಾರ ತಗೊಂಡಿದ್ದಾದ್ರೂ ಯಾಕೆ? ಆ್ಯಂಕರಿಂಗ್ ಜರ್ನಿ ಹಿಂದಿರೋ ಆ ಕಣ್ಣೀರ ಕಥೆಯೇನು? ಇಲ್ಲಿದೆ ನೋಡಿ…
- 8 ವರ್ಷದ ಆಂಕರಿಂಗ್ ಪಯಣಕ್ಕೆ ಅನುಪಮಾ ಗುಡ್ ಬೈ..!
- ಬಾಲನಟಿಯಿಂದ ಟಾಪ್ ಆಂಕರ್ವರೆಗೆ ಅನುಪಮಾ ಜರ್ನಿ
- ರಾಜ್ಯ ಪ್ರಶಸ್ತಿ ಗೆದ್ದ ಅನುಪಮಾ ನಟನೆಯತ್ತ ಫುಲ್ ಫೋಕಸ್..!
- ಆಂಕರಿಂಗ್ನಲ್ಲಿ ಖುಷಿ ಸಿಗ್ತಿಲ್ಲ ಎಂದ ಅನುಪಮಾ ಗೌಡ..!
ಕನ್ನಡ ಕಿರುತೆರೆಯ ಟಾಪ್ ಅಂಡ್ ಕ್ಯೂಟ್ ಆಂಕರ್ಗಳಲ್ಲಿ ಒಬ್ಬರಾಗಿದ್ದ ಅನುಪಮಾ ಗೌಡ ತಮ್ಮ 8 ವರ್ಷಗಳ ಸಫಲ ನಿರೂಪಣಾ ವೃತ್ತಿಗೆ ದಿಢೀರ್ ಗುಡ್ ಬೈ ಹೇಳುವ ಮೂಲಕ ಫ್ಯಾನ್ಸ್ಗೆ ದೊಡ್ಡ ಆಘಾತ ನೀಡಿದ್ದಾರೆ. 2018ರ ಜೂನ್ 22ರಂದು ಮೊದಲ ಬಾರಿಗೆ ವೇದಿಕೆ ಹತ್ತಿದ್ದ ಅನುಪಮಾ, ಮೇ 05, 2026ರಂದು ತಮ್ಮ ಕೊನೆಯ ಶೋ ಮುಗಿಸಿ ಆಂಕರಿಂಗ್ಗೆ ಆಫಿಷಿಯಲ್ ಎಂಡ್ಕಾರ್ಡ್ ಹಾಕಿದ್ದಾರೆ. ಕಲರ್ಸ್ ಕನ್ನಡದ ಬಿಗ್ ಶೋಗಳ ಮಾಸ್ಟರ್ ಮೈಂಡ್ ಪರಮೇಶ್ವರ್ ಗುಂಡ್ಕಲ್ ಅವರನ್ನು ಪ್ರೀತಿಯಿಂದ ನೆನೆದಿರೋ ಅನುಪಮಾ, ತಮ್ಮ ಈ ಯಶಸ್ಸು ಮತ್ತು ಆರ್ಥಿಕ ಸಬಲತೆಗೆ ನಟನೆಯಲ್ಲ, ಬದಲಾಗಿ ಆ್ಯಂಕರಿಂಗ್ ವೃತ್ತಿಯೇ ಮೂಲ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಪ್ರೇಕ್ಷಕರನ್ನು ತಮ್ಮ ಮಾತುಗಳಿಂದ ರಂಜಿಸುತ್ತಿದ್ದ ಈ ಗ್ಲಾಮರಸ್ ಆಂಕರ್ ಲೈಫ್ನಲ್ಲಿ ಎಂತಹ ಕಣ್ಣೀರಿನ ಕಥೆಯಿತ್ತು ಗೊತ್ತಾ? ‘ಕನ್ನಡ ಕೋಗಿಲೆ’ ಶೋ ಹೋಸ್ಟ್ ಮಾಡುವಾಗ ಅನುಪಮಾ ಅವರ ತಂದೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಪ್ರೊಫೆಷನಲ್ ಕಮಿಟ್ಮೆಂಟ್ನಿಂದಾಗಿ ಮನಸ್ಸಿನಲ್ಲಿ ಬೆಂಕಿ ಉರಿಯುತ್ತಿದ್ದರೂ ಮುಖದಲ್ಲಿ ನಗು ಚೆಲ್ಲುತಾ ಶೋ ನಡೆಸಿ ಕೊಡಬೇಕಾಯ್ತು. ಅಷ್ಟೇ ಅಲ್ಲ, ತಂದೆ ತೀರಿಕೊಂಡ ಕೇವಲ 3 ದಿನಕ್ಕೆ ಮತ್ತೆ ಮೇಕಪ್ ಹಾಕಿ ಕ್ಯಾಮೆರಾ ಮುಂದೆ ನಿಂತಿದ್ದ ಆ ಕಹಿ ಕ್ಷಣವನ್ನು ನೆನೆದು ಅನುಪಮಾ ಭಾವುಕರಾಗಿದ್ದಾರೆ.
ಯಾವುದೇ ಕೆಲಸವನ್ನಾದರೂ ಬ್ಯೂಟಿಫುಲ್ ಆಗಿ ಎಂಜಾಯ್ ಮಾಡಬೇಕು, ಆದರೆ ಕಳೆದ ಕೆಲವು ತಿಂಗಳುಗಳಿಂದ ನನಗೆ ನಿರೂಪಣೆಯಲ್ಲಿ ಆ ಖುಷಿ ಸಿಗುತ್ತಿರಲಿಲ್ಲ ಎಂದು ಅನುಪಮಾ ಓಪನ್ ಆಗಿ ಹೇಳಿದ್ದಾರೆ. ಪ್ರೇಕ್ಷಕರು ನೀಡಿದ ಅಪಾರ ಪ್ರೀತಿಗೆ ತಕ್ಕಂತೆ ತಾನು ನ್ಯಾಯ ಒದಗಿಸುತ್ತಿಲ್ಲ ಎಂಬ ಅಪರಾಧ ಪ್ರಜ್ಞೆ ಕಾಡಿದ್ದರಿಂದ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್, ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಕ್ವಾಟ್ಲೆ ಕಿಚನ್ನಂತಹ ಶೋಗಳನ್ನು ಸಕ್ಸೆಸ್ ಫುಲ್ ಆಗಿ ನಡೆಸಿಕೊಟ್ಟಿದ್ದ ಅವರು, ಕೊನೆಯ ಶೋ ಅನ್ನು ಪೂರ್ಣವಾಗಿ ಮುಗಿಸಲಾಗಲಿಲ್ಲ ಎಂಬ ಬೇಸರದಲ್ಲೇ ರಂಗಸ್ಥಳದಿಂದ ಕೆಳಗಿಳಿದಿದ್ದಾರೆ.
2003ರಲ್ಲಿ ತೆರೆಕಂಡ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ, 2014ರ ಸೂಪರ್ ಹಿಟ್ ‘ಅಕ್ಕ’ ಧಾರಾವಾಹಿಯ ದ್ವಿಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದರು. ಬಿಗ್ ಬಾಸ್ ಸೀಸನ್ 5ರ ಪ್ರಮುಖ ಸ್ಪರ್ಧಿಯಾಗಿ ಮನೆಮಂದಿಯ ಪ್ರೀತಿ ಗಳಿಸಿದ್ದ ಇವರು, ಬೆಳ್ಳಿಪರದೆಯಲ್ಲೂ ನಟಿಸಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ತಾರಾ, ಶ್ರುತಿ ಮತ್ತು ಅದಿತಿ ಪ್ರಭುದೇವ ಅವರಂತಹ ನಟಿಯರ ಜೊತೆ ಕ್ಲೋಸ್ ಬಾಂಡಿಂಗ್ ಹೊಂದಿರುವ ಅನುಪಮಾ, ಸದ್ಯಕ್ಕೆ ನಿರೂಪಣೆಗೆ ಮಾತ್ರ ಬೈ ಹೇಳಿದ್ದು, ನಟನೆಯನ್ನು ಬಿಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಈ ನಿರ್ಧಾರದಿಂದ ಬೇಸರಗೊಂಡಿರುವ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಬಳಿ ಅನುಪಮಾ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. “ನಿಮ್ಮೆಲ್ಲರ ಪ್ರೀತಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ಬದುಕು ಸುಂದರವಾಗಿದೆ ಮತ್ತು ಸಾಗಲು ಹಲವು ದಾರಿಗಳಿವೆ” ಎಂದು ಭಾವುಕರಾಗಿ ವಿಡಿಯೋ ಮುಗಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು ಆಂಕರಿಂಗ್ಗೆ ಕಮ್ಬ್ಯಾಕ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅನುಪಮಾ ಅವರ ಮುಂದಿನ ನಟನಾ ಪಯಣಕ್ಕೆ ಆಲ್ ದಿ ಬೆಸ್ಟ್ ಹೇಳಿ ಹಾರೈಸುತ್ತಿದ್ದಾರೆ.
