ಹಿರಿಯ ನಟ ಅನಂತ್ ನಾಗ್ ಪದ್ಮಭೂಷಣ್ ಪ್ರಶಸ್ತಿ ಪಡೆದ ಹಿನ್ನೆಲೆ ಅಭಿನಂದನಾ ಸಮಾರಂಭವನ್ನ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತ್ ನಾಗ್, ಇದು ನನ್ನ ವೈಯಕ್ತಿಕ ಪ್ರಶಸ್ತಿ ಅಲ್ಲ. ಇದು ಸಮಗ್ರ ಕನ್ನಡ ಚಿತ್ರರಂಗದ ಸಾಧನೆಗೆ ಸಂದ ಗೌರವ. ಈ ಪ್ರಶಸ್ತಿಯನ್ನು ನಾನು ನಮ್ಮ ಕನ್ನಡ ಸಿನಿಮಾಕ್ಕೆ ಅರ್ಪಿಸುತ್ತೇನೆ ಎಂದು ಭಾವುಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನಂತ್ ನಾಗ್ ಕೃತಜ್ಞತೆ ಸಲ್ಲಿಸಿದರು. ಅರ್ಹರಿಗೆ ಪ್ರಶಸ್ತಿ ಕೊಡಬೇಕು ಎಂಬ ನೀತಿಯನ್ನು ಪ್ರಧಾನಿ ಮೋದಿ ಅವರು ಜಾರಿಗೆ ತಂದಿದ್ದಾರೆ. ಈ ಬಗ್ಗೆ ನನ್ನ ಸಹನಟ ಜಗ್ಗೇಶ್ ಅವರು ನನಗೆ ಹೇಳಿದ್ದು ಎಂದು ಹೇಳಿದರು
ತಮ್ಮ ಬಹುಮುಖ ವೃತ್ತಿಜೀವನದ ಹಲವಾರು ಅಂಶಗಳನ್ನು ಹಂಚಿಕೊಂಡ ಅನಂತ್ ನಾಗ್, ನಾನು ಮೊದಲ ಬಾರಿಗೆ ವಿಧಾನಸಭೆಗೆ ಹೋದಾಗ, ಡಿ.ಕೆ.ಶಿವಕುಮಾರ್ ಅವರನ್ನು ನೋಡಿದೆ. ಅವರು ಎಷ್ಟು ಸ್ಮಾರ್ಟ್ಗಾಗಿ ಕಾಣುತ್ತಿದ್ದರೆ! ಆಗಲೇ ನನಗೆ ಅನಿಸಿತು – ಇವರು ರಾಜಕೀಯದ ಬದಲು ಚಲನಚಿತ್ರೋದ್ಯಮಕ್ಕೆ ಬರಬೇಕಾಗಿತ್ತು ಎಂದು ಹೇಳಿದರು.
ಐವತ್ತಮೂರು ವರ್ಷಗಳ ತಮ್ಮ ಸಿನಿಮಾ ಯಾತ್ರೆಯನ್ನು ಮೆಲುಕು ಹಾಕಿಕೊಂಡ ಅನಂತ್ ನಾಗ್, ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ನಿರ್ದೇಶಕರು, ನಿರ್ಮಾಪಕರು, ಸಾಹಿತ್ಯಕಾರರು, ಸಂಭಾಷಣೆ ಲೇಖಕರು – ಅವರೆಲ್ಲರ ಸಹಕಾರ ಇಲ್ಲದೆ ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು..
ತಮ್ಮ ಜೀವನದ ಒಂದು ಸಂಗತಿಯನ್ನು ಹಂಚಿಕೊಂಡ ಅವರು, ಒಮ್ಮೆ ತಡರಾತ್ರಿಯವರೆಗೆ ಶೂಟಿಂಗ್ ಮುಗಿಸಿ ಮನೆಗೆ ಹೋದೆ. ಟಿವಿಯಲ್ಲಿ ನನ್ನ ಚಲನಚಿತ್ರ ಪ್ರಸಾರವಾಗುತ್ತಿತ್ತು. ಅದರಲ್ಲಿ ನಾನು ಗಮನಿಸಿದ ಹಾಗೆ,ನಾನು ಯಾವುದೇ ಡಾನ್ಸ್ ಅಥವಾ ಫೈಟಿಂಗ್ ಸೀನ್ನಲ್ಲಿ ಹೆಚ್ಚು ಕಾಣಿಸಿಲ್ಲ.ಜನ ಅದನ್ನು ಕ್ಷಮಿಸಿ ,300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನನ್ನನ್ನು ಒಪ್ಪಿಕೊಂಡಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ, ಡಿ.ಕೆ.ಶಿವಕುಮಾರ್ , ಇದೊಂದು ಅದ್ಭುತವಾದ ಸಂಭ್ರಮ ಎಂದು ಬಣ್ಣಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಅತ್ಯಂತ ಪವಿತ್ರವಾದ ಕೆಲಸ. ನಾನು 35 ವರ್ಷಗಳ ಹಿಂದೆಯೇ ನಿರ್ದೇಶಕನಾಗಿದ್ದೆ. ಅನಂತ್ ನಾಗ್ ಅವರನ್ನು ಸನ್ಮಾನಿಸಲು ಮಾತ್ರ ಇಂದು ಇಲ್ಲಿ ಬಂದಿದ್ದೇನೆ ಎಂದು ಹೇಳಿದರು.
ಸದ್ಯದ ಚಲನಚಿತ್ರ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಶಿವಕುಮಾರ್, ನೀವೆಲ್ಲರೂ ಮೇಕಪ್ ಹಾಕಿಕೊಂಡು ನಾಟಕ ಮಾಡುತ್ತಿದ್ದೀರಿ, ನಾವು ಮೇಕಪ್ ಇಲ್ಲದೆ ನಾಟಕ ಮಾಡುತ್ತಿದ್ದೇವೆ ಎಂದು ಹಾಸ್ಯ ಮಾಡಿದರು. ಕಳೆದ ಮೂರು-ನಾಲ್ಕು ವರ್ಷಗಳಿಂದ ಸ್ಯಾಂಡಲ್ವುಡ್ ಬಾಲಿವುಡ್ನ ಟೇಕ್ ಓವರ್ ಮಾಡಿದೆ ಎಂದು ಕನ್ನಡ ಚಲನಚಿತ್ರೋದ್ಯಮದ ವೈಭವವನ್ನು ಹಾಡಿಹೊಗಳಿದರು