ಅನಂತ್‌ನಾಗ್‌ಗೆ ಪದ್ಮಭೂಷಣ ಪ್ರದಾನ ಯಾವಾಗ..?

ಬಾಲಕೃಷ್ಣ, ಅಜಿತ್‌ಗೆ ರಾಷ್ಟ್ರಪತಿಗಳಿಂದ ಪದ್ಮ ಪುರಸ್ಕಾರ

Untitled design (8)

ನಂದಮೂರಿ ಬಾಲಕೃಷ್ಣ ಹಾಗೂ ತಲಾ ಅಜಿತ್ ಸೇರಿದಂತೆ ಸಾಕಷ್ಟು ಮಂದಿಗೆ ಪದ್ಮ ಪುರಸ್ಕಾರಗಳನ್ನ ನೀಡಿ ಗೌರವಿಸಲಾಗಿದೆ. ಅನೌನ್ಸ್ ಆಗಿದ್ದ ನಮ್ಮ ಹೆಮ್ಮೆಯ ಕನ್ನಡಿಗ, ಎವರ್‌‌ಗ್ರೀನ್ ಹೀರೋ ಅನಂತ್‌ನಾಗ್‌‌ರಿಗೆ ಯಾಕೆ ಪ್ರದಾನ ಮಾಡಿಲ್ಲ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಇಲ್ಲಿದೆ.

ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರೋ ಅಂತಹ ವಿವಿಧ ಗಣ್ಯರಿಗೆ ಪ್ರತೀ ವರ್ಷ ಕೇಂದ್ರ ಸರ್ಕಾರ, ಪದ್ಮ ಪ್ರಶಸ್ತಿಗಳನ್ನ ನೀಡುವ ಮೂಲಕ ಅಭಿನಂದಿಸುತ್ತದೆ. ಅದೇ ರೀತಿ ಈ ವರ್ಷವೂ ಗಣರಾಜ್ಯೋತ್ಸವ ವಿಶೇಷ ಸುಮಾರು 139 ಮಂದಿಯ ಪಟ್ಟಿಯನ್ನ ರಿಲೀಸ್ ಮಾಡಿತ್ತು. ಆ ಪೈಕಿ 7 ಮಂದಿಗೆ ಪದ್ಮ ವಿಭೂಷಣ, 19 ಮಂದಿಗೆ ಪದ್ಮ ಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ನೀಡುವುದಾಗಿ ಘೋಷಿಸಲಾಗಿತ್ತು.

ಅದರಲ್ಲಿ ನಮ್ಮ ಸೌತ್ ಸಿನಿದುನಿಯಾದ ನಂದಮೂರಿ ಬಾಲಕೃಷ್ಣ, ಎವರ್ ಗ್ರೀನ್ ಹೀರೋ ಅನಂತ್‌ನಾಗ್ ಹಾಗೂ ತಮಿಳಿನ ಸೂಪರ್ ಸ್ಟಾರ್ ಅಜಿತ್ ಅವರಿಗೂ ಪದ್ಮ ಪುರಸ್ಕಾರ ಅನೌನ್ಸ್ ಆಗಿತ್ತು. ನಿನ್ನೆಯಷ್ಟೇ ದೆಹಲಿಯಲ್ಲಿರೋ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮ ಪುರಸ್ಕಾರಗಳು ಪ್ರದಾನ ಮಾಡಲಾಯಿತು. ಆದ್ರೆ ಅದರಲ್ಲಿ ನಮ್ಮ ಕನ್ನಡದ ಅನಂತ್‌ನಾಗ್ ಹಾಗೂ ರಿಕ್ಕಿಕೇಜ್ ಸೇರಿದಂತೆ ಸಾಕಷ್ಟು ಮಂದಿಗೆ ಪ್ರದಾನ ಆಗಿಲ್ಲ.

ನಮ್ಮ ಕನ್ನಡಿಗರ ನೆಚ್ಚಿನ ಹಿರಿಯ ಕಲಾವಿದ ಅನಂತ್‌‌ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಅನ್ನೋದು ಎಲ್ಲರ ಒತ್ತಾಸೆಯಾಗಿತ್ತು. ಅದಕ್ಕಾಗಿ ಅಭಿಯಾನಗಳೆಲ್ಲಾ ಶುರುವಾಗಿತ್ತು. ಅಂಥದ್ರಲ್ಲಿ ಕೊನೆಗೂ ಕೇಂದ್ರ ಸರ್ಕಾರ ಕಲೆಗೆ ಅವರ ಕೊಡುಗೆಯನ್ನ ಗುರ್ತಿಸಿ, ಪದ್ಮ ಭೂಷಣ ಅನೌನ್ಸ್ ಮಾಡಿದ್ದು ನೋಡಿ ಇಡೀ ಕರುನಾಡೇ ಸಂಭ್ರಮಿಸಿತ್ತು. ಆದ್ರೆ ನಿನ್ನೆ ಪ್ರಶಸ್ತಿ ಪ್ರದಾನ ಯಾಕೆ ಆಗಿಲ್ಲ ಅನ್ನೋದು ಎಲ್ಲರಿಗೂ ಕುತೂಹಲ ಮೂಡಿಸಿದೆ.

ಸಾಕಷ್ಟು ಮಂದಿ ಅನಂತ್‌ನಾಗ್ ಹಾಗೂ ಅವರ ಪತ್ನಿ ಗಾಯತ್ರಿ ಅವರನ್ನೇ ನಿಮಗ್ಯಾಕೆ ಪ್ರಶಸ್ತಿ ನೀಡಿಲ್ಲ ಅಂತ ದೂರವಾಣಿ ಕರೆಗಳು ಹಾಗೂ ಸಂದೇಶಗಳ ಮೂಲಕ ಪ್ರಶ್ನಿಸ್ತಿದ್ದಾರೆ. ಅಸಲಿ ಮ್ಯಾಟರ್ ಏನಪ್ಪಾಂದ್ರೆ, ಪದ್ಮ ಅವಾರ್ಡ್‌ಗಳನ್ನ ಒಂದೇ ವೇದಿಕೆಯಲ್ಲಿ ಪಟ್ಟಿಯಲ್ಲಿರೋ ಎಲ್ಲರಿಗೂ ಒಟ್ಟಿಗೆ ನೀಡುವುದಿಲ್ಲ. ಸಮಯ ಹಾಗೂ ಜಾಗದ ಅಭಾವದಿಂದಾಗಿ ಎರಡು ಹಂತಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಾಗಾಗಿಯೇ ಅನಂತ್ ನಾಗ್ ಹಾಗೂ ರಿಕ್ಕಿ ಕೇಜ್ ಸೇರಿದಂತೆ ಉಳಿದವರಿಗೆಲ್ಲಾ ಎರಡನೇ ಹಂತದಲ್ಲಿ ಪ್ರದಾನ ಮಾಡಲಾಗ್ತಿದೆ.

ಏಪ್ರಿಲ್ ಹಾಗೂ ಮೇ ತಿಂಗಳಲ್ಲೇ ಈ ಅವಾರ್ಡ್‌ ಫಂಕ್ಷನ್ ನಡೆಯಲಿದ್ದು, ಸದ್ಯದಲ್ಲೇ ಪಟ್ಟಿಯಲ್ಲಿರೋ ಉಳಿದ ಗಣ್ಯರಿಗೂ ಪದ್ಮ ಪುರಸ್ಕಾರ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಸರ್ಕಾರ. ಆಗಲೇ ನಮ್ಮ ಅನಂತ್‌ನಾಗ್ ಅವರಿಗೂ ನೀಡಲಾಗುವುದು. ಅಂದಹಾಗೆ ತೆಲುಗು ಹಾಗೂ ತಮಿಳು ಚಿತ್ರರಂಗಗಳ ಮಂದಿಗೆ ಈಗಾಗ್ಲೇ ಪ್ರದಾನ ಮಾಡಲಾಗಿದ್ದು, ಬಾಲಕೃಷ್ಣ ಹಾಗೂ ಅಜಿತ್ ಫ್ಯಾನ್ಸ್ ಸಖತ್ ಸಂಭ್ರಮಿಸ್ತಿದ್ದಾರೆ. ಅದ್ರಲ್ಲೂ ಬಾಲಯ್ಯ ಕಚ್ಚೆ ಪಂಚೆ ಹಾಗೂ ಶಲ್ಯದಲ್ಲಿ ಸ್ಟೈಲಿಶ್ ಆಗಿ ಹೋಗಿ ರಿಸೀವ್ ಮಾಡ್ಕೊಂಡಿರೋ ಪರಿ ಇಂಟರೆಸ್ಟಿಂಗ್ ಅನಿಸಿದೆ.

ಕನ್ನಡ ಸೇರಿದಂತೆ ಕೇರಳ ಕಲಾವಿದರಿಗೂ ಎರಡನೇ ಹಂತದಲ್ಲೇ ಪ್ರದಾನ ಮಾಡಲಾಗ್ತಿದೆ. ಅದೇನೇ ಇರಲಿ, ನಟಸಾರ್ವಭೌಮ ಡಾ ರಾಜ್‌‌ಕುಮಾರ್‌ ಬಳಿಕ ಪದ್ಮಭೂಷಣಕ್ಕೆ ಭಾಜನರಾಗಿರೋ ನಮ್ಮ ಅನಂತ್‌‌ನಾಗ್ ಅವರಿಗೆ ಅನಂತ ಅನಂತ ಅಭಿನಂದನೆಗಳು. ಅವರು ಪದ್ಮ ಭೂಷಣರಾಗುವುದನ್ನ ಕಣ್ತುಂಬಿಕೊಳ್ಳೋಕೆ ಇಡೀ ಕರುನಾಡು ಕಾಯ್ತಿದೆ. ಆ ದಿನ ಬೇಗ ಬರಲಿ ಅನ್ನೋದೇ ನಮ್ಮ ಬಯಕೆ.

Exit mobile version