ಬೆಂಗಳೂರು: ‘ಜೂನಿಯರ್ ರಚಿತಾರಾಮ್’ ಎಂದೇ ಖ್ಯಾತಿ ಪಡೆದಿರುವ ಕಿರುತೆರೆ ನಟಿ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಚೈತ್ರಾ ರಾಮ್ ಅವರನ್ನು ಅವರ ಪತಿಯೇ ಕಿಡ್ನಾಪ್ ಮಾಡಿದ್ದು, ಈ ಪ್ರಕರಣ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.
ಸ್ಯಾಂಡಲ್ವುಡ್ ಕ್ವೀನ್ ರಚಿತಾರಾಮ್ ಅವರನ್ನೇ ಹೋಲುವ ಚೈತ್ರಾ ರಾಮ್, ರೀಲ್ಸ್ ಮತ್ತು ಕಿರುತೆರೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಗುಳಿಕೆನ್ನೆ ಬೆಡಗಿಯ ಪ್ರತಿರೂಪದಂತಿರುವ ಈಕೆ ‘ಜೂನಿಯರ್ ರಚಿತಾರಾಮ್’ ಎಂದೇ ಫೇಮಸ್.
ವರ್ಧನ್ ಎಂಟರ್ಪ್ರೈಸ್ನ ಮಾಲೀಕ ಮತ್ತು ಚಿತ್ರ ನಿರ್ಮಾಪಕ ಹರ್ಷವರ್ಧನ್, ನಟಿ ಚೈತ್ರಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ ಕೆಲ ಸಮಯದಿಂದ ದಂಪತಿಗಳ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಇದರಿಂದ ಬೇಸತ್ತ ಚೈತ್ರಾ, ತಮ್ಮ ಒಂದು ವರ್ಷದ ಪುಟ್ಟ ಮಗುವಿನೊಂದಿಗೆ ಪತಿಯಿಂದ ದೂರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಮಗಳು ಮತ್ತು ಪತ್ನಿ ದೂರವಾದ ಸಿಟ್ಟಿನಲ್ಲಿದ್ದ ಹರ್ಷವರ್ಧನ್, ಅವರನ್ನು ಮರಳಿ ಪಡೆಯಲು ಸಿನಿಮಾ ಮಾದರಿಯಲ್ಲೇ ಕಿಡ್ನ್ಯಾಪ್ ಪ್ಲಾನ್ ಮಾಡಿದ್ದ.
ಕೇವಲ 20 ಸಾವಿರ ರೂಪಾಯಿ ನೀಡಿ ಕಿಡ್ನಾಪರ್ಸ್ಗಳನ್ನು ಗೊತ್ತು ಮಾಡಿಕೊಂಡಿದ್ದ ಪತಿರಾಯ, ಪತ್ನಿಗೆ ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಸುಳ್ಳು ಹೇಳಿದ್ದ. ಶೂಟಿಂಗ್ ನೆಪದಲ್ಲಿ ಮೈಸೂರು ರಸ್ತೆಯಲ್ಲಿ ಕಾರಿನಲ್ಲಿ ಪಿಕ್ಅಪ್ ಮಾಡಿಕೊಂಡ ಹರ್ಷವರ್ಧನ್, ಅಲ್ಲಿಂದ ಪತ್ನಿಯನ್ನು ಅಪಹರಿಸಿ ಮೈಸೂರಿಗೆ ಕರೆದೊಯ್ದಿದ್ದ.
ಚೈತ್ರಾ ಅವರನ್ನು ಅಪಹರಿಸಿದ ನಂತರ ಹರ್ಷವರ್ಧನ್ ತನ್ನ ಅತ್ತೆಗೆ (ಚೈತ್ರಾ ತಾಯಿ) ಕರೆ ಮಾಡಿ ಬೆದರಿಕೆ ಹಾಕಿದ್ದ. ನಿಮ್ಮ ಬಳಿ ಇರುವ ನನ್ನ ಮಗಳನ್ನು ನನ್ನ ವಶಕ್ಕೆ ಒಪ್ಪಿಸಿದರೆ ಮಾತ್ರ ನಿಮ್ಮ ಮಗಳನ್ನು ಸುರಕ್ಷಿತವಾಗಿ ಬಿಡುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಕೂಡಲೇ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಿಡ್ನಾಪ್ ಆದ ಮೂರು ದಿನಗಳ ಕಾಲ ಚೈತ್ರಾ ರಾಮ್ ಮೈಸೂರಿನಲ್ಲಿ ಪತಿಯ ಜೊತೆಗೇ ಕಾಲ ಕಳೆದಿದ್ದರು. ಪೊಲೀಸರು ತಾಂತ್ರಿಕ ತನಿಖೆಯ ಮೂಲಕ ಸ್ಥಳ ಪತ್ತೆ ಹಚ್ಚಿ ಅಲ್ಲಿಗೆ ತೆರಳಿದಾಗ, ದಂಪತಿಗಳು ಒಂದೇ ರೂಮ್ನಲ್ಲಿ ಇರುವುದು ಕಂಡುಬಂದಿದೆ. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ನಾವೇ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ, ನನಗೆ ಯೋಚಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಚೈತ್ರಾ ಹೇಳಿದ್ದಾರೆ. ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ
ಈ ಪ್ರಕರನ ಮುಗಿಯಿತು ಎನ್ನುತ್ತಿದ್ದಂತೆ, ಹರ್ಷವರ್ಧನ್ಗೆ ಬಿಗ್ ಶಾಕ್ ಎದುರಾಗಿದೆ. ಬ್ಯಾಟರಾಯನಪುರ ಠಾಣೆಗೆ ಹರ್ಷವರ್ಧನ್ ಬಂದ ಸುದ್ದಿ ತಿಳಿಯುತ್ತಿದ್ದಂತೆಯೇ ಶಿರಸಿಯ ಸಿದ್ದಾಪುರ ಪೊಲೀಸರು ಅಲ್ಲಿಗೆ ಧಾವಿಸಿದ್ದಾರೆ. ಹರ್ಷವರ್ಧನ್ ಮೇಲೆ ಸಿದ್ದಾಪುರ ಠಾಣೆಯಲ್ಲಿ ಹಳೆಯ ವಂಚನೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಬ್ಯಾಟರಾಯನಪುರ ಪೊಲೀಸರ ನೆರವಿನೊಂದಿಗೆ ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದು ಅರೆಸ್ಟ್ ಮಾಡಿದ್ದಾರೆ. ಮಗಳಿಗಾಗಿ ಪತ್ನಿಯನ್ನು ಕಿಡ್ನಾಪ್ ಮಾಡಿ ಸಂಧಾನಕ್ಕೆ ಬಂದಿದ್ದ ನಿರ್ಮಾಪಕ, ಈಗ ಹಳೇ ಕೇಸ್ನಲ್ಲಿ ಜೈಲು ಪಾಲಾಗಿದ್ದಾರೆ.
