ಕಳೆದ ಶುಕ್ರವಾರ (ಜೂನ್ 20) ಬಿಡುಗಡೆಯಾದ ಆಮಿರ್ ಖಾನ್ ಅಭಿನಯದ ‘ಸಿತಾರೆ ಜಮೀನ್ ಪರ್’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಚಿತ್ರವು ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿದ್ದು, ವಿಶೇಷ ಕಥಾಹಂದರದ ಮೂಲಕ ವಿಶೇಷಚೇತನರ ಬಗ್ಗೆ ಸಂದೇಶ ನೀಡುವ ಈ ಸಿನಿಮಾ, ಆಮಿರ್ ಖಾನ್ಗೆ ದೊಡ್ಡ ಗೆಲುವನ್ನು ತಂದುಕೊಟ್ಟಿದೆ. ಈ ಚಿತ್ರದ ವಿಶೇಷತೆಯನ್ನು ಗುರುತಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಮಂಗಳವಾರ ಆಮಿರ್ ಖಾನ್ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ವೀಕ್ಷಿಸಿದರು. ರಾಷ್ಟ್ರಪತಿಯವರು ಚಿತ್ರವನ್ನು ವೀಕ್ಷಿಸಿದ್ದು, ಚಿತ್ರತಂಡಕ್ಕೆ ದೊಡ್ಡ ಬೆಂಬಲ ನೀಡಿದ್ದಾರೆ. ಪ್ರೇಕ್ಷಕರು ಕೂಡ ಈ ಚಿತ್ರದ ಕಥೆ, ನಿರ್ದೇಶನ ಮತ್ತು ಆಮಿರ್ ಖಾನ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.
ರಾಷ್ಟ್ರಪತಿ ಭವನದ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. “ಪ್ರಖ್ಯಾತ ನಟ ಮತ್ತು ನಿರ್ಮಾಪಕ ಶ್ರೀ ಆಮಿರ್ ಖಾನ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು” ಎಂಬ ಕ್ಯಾಪ್ಷನ್ನೊಂದಿಗೆ ಆಮಿರ್ ಖಾನ್ ಮತ್ತು ರಾಷ್ಟ್ರಪತಿಯವರ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಿತ್ರವನ್ನು ವೀಕ್ಷಿಸಿದ ನಂತರ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಇದನ್ನು ರಾಷ್ಟ್ರಪತಿ ಭವನದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದಿಗೆ ಹಂಚಿಕೊಳ್ಳಲಾಗಿದೆ.
ಆಮಿರ್ ಖಾನ್ ಸ್ವತಃ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಇದರ ಮೇಲೆ ಅವರಿಗೆ ದೊಡ್ಡ ಭರವಸೆ ಇತ್ತು. ಚಿತ್ರದ ಕಥೆ ಪ್ರೇಕ್ಷಕರ ಮನಗೆದ್ದಿವೆ. ಈ ಚಿತ್ರವು ಭಾರತೀಯ ಸಿನಿಮಾ ರಂಗದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಬಹುದು.
ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ, ಜೂನ್ 20ರಂದು ಚಿತ್ರವು 10.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶನಿವಾರ (ಜೂನ್ 21) ಗಳಿಕೆ ಏರಿಕೆಯಾಗಿ 19.90 ಕೋಟಿ ರೂಪಾಯಿ ಸಂಗ್ರಹವಾಯಿತು. ಮೂರನೇ ದಿನವಾದ ಭಾನುವಾರ (ಜೂನ್ 22) ಚಿತ್ರವು 26.70 ಕೋಟಿ ರೂಪಾಯಿ ಬಾಚಿಕೊಂಡು ಗರಿಷ್ಠ ಗಳಿಕೆ ದಾಖಲಿಸಿತ್ತು. ಸೋಮವಾರ (ಜೂನ್ 23) 8.50 ಕೋಟಿ ರೂಪಾಯಿ ಸಂಗ್ರಹಿಸಿತ್ತು.