ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ವೇಳೆ ಬಾಲಿವುಡ್ನ ಖ್ಯಾತ ನಟ-ನಿರ್ದೇಶಕ ಆಮೀರ್ ಖಾನ್ ಅವರು ಮುಖಾಮುಖಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಅಮೀರ್ ಖಾನ್ ಅವರ ಕುಶಲೋಪರಿ ವಿಚಾರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದರು. ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ಕೋರಿ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಆಮೀರ್ ಖಾನ್ ಕೂಡ ರಾಷ್ಟ್ರಪತಿ ಭವನದಲ್ಲಿದ್ದರು. ಇಬ್ಬರೂ ಒಂದೇ ಸ್ಥಳದಲ್ಲಿ ಎದುರಾಗಿದ್ದು, ಮಾತುಕತೆ ನಡೆಸಿದ್ದಾರೆ.
ಆಮೀರ್ ಖಾನ್ ಅವರು ತಮ್ಮ ಇತ್ತೀಚಿನ ಚಿತ್ರ “ಸಿತಾರೆ ಜಮೀನ್ ಪರ್” ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಸಂದೇಶವನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರು ಆಮೀರ್ ಖಾನ್ ಅವರ ಚಿತ್ರಗಳಿಗೆ ಶುಭ ಕೋರಿದ್ದಾರೆ. “ನಿಮ್ಮ ಚಿತ್ರಗಳು ಸಮಾಜಕ್ಕೆ ಒಳಿತನ್ನು ತರುತ್ತವೆ. ಮುಂದಿನ ಯೋಜನೆಗಳಿಗೆ ಶುಭವಾಗಲಿ,” ಎಂದು ಹಾರೈಸಿದ್ದಾರೆ ಎಂದು ತಿಳಿದುಬಂದಿದೆ.
ಈ ಭೇಟಿಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ಮತ್ತು ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು.