ನವದೆಹಲಿ: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ನಾಳೆಯಿಂದ (ಏಪ್ರಿಲ್ 1, 2026) ಹೊಸ ಆರ್ಥಿಕ ವರ್ಷ 2026-27 ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯ್ದೆಯಡಿ ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇನ್ಮುಂದೆ ನೀವು ಬೇಕಾಬಿಟ್ಟಿ ನಗದು ಹಣವನ್ನು ಕೈ ಬದಲಾಯಿಸುವಂತಿಲ್ಲ, ನಿಯಮ ಉಲ್ಲಂಘಿಸಿದರೆ ನೀವು ಪಡೆಯುವ ಮೊತ್ತಕ್ಕೆ ಸಮನಾದ ಅಂದರೆ ಶೇ. 100 ರಷ್ಟು ದಂಡ ತೆರಬೇಕಾಗಬಹುದು!
ಹೊಸ ನಿಯಮದ ಪ್ರಕಾರ, ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ ನೀವು 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ವ್ಯಾಪಾರಸ್ಥರು ಅಥವಾ ವ್ಯಕ್ತಿಗಳು ಈ ಮಿತಿಗಿಂತ ಹೆಚ್ಚು ನಗದು ಪಡೆದರೆ, ಪಡೆದ ಅಷ್ಟೂ ಮೊತ್ತವನ್ನು ದಂಡದ ರೂಪದಲ್ಲಿ ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ.
ಅಲ್ಲದೆ, ಕೈಸಾಲ ಪಡೆಯುವಾಗಲೂ ಎಚ್ಚರವಿರಲಿ. 20,000 ರೂಪಾಯಿಗಿಂತ ಹೆಚ್ಚಿನ ಸಾಲವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ ಮತ್ತು ಮರಳಿಸುವಂತಿಲ್ಲ. ಇದು ಮನೆ ಅಥವಾ ಕಚೇರಿ ಬಾಡಿಗೆಗೆ ನೀಡುವ ‘ಸೆಕ್ಯುರಿಟಿ ಡೆಪಾಸಿಟ್’ಗೂ ಅನ್ವಯಿಸುತ್ತದೆ. 20 ಸಾವಿರಕ್ಕಿಂತ ಹೆಚ್ಚು ಅಡ್ವಾನ್ಸ್ ಹಣವನ್ನು ನಗದು ರೂಪದಲ್ಲಿ ಪಡೆದರೆ ಅಥವಾ ವಾಪಸ್ ನೀಡಿದರೆ ಶೇ. 100 ರಷ್ಟು ಪೆನಾಲ್ಟಿ ಬೀಳಲಿದೆ.
ಆಸ್ತಿ ಅಥವಾ ಜಮೀನು ಖರೀದಿ ಮಾಡುವಾಗ ಇನ್ಮುಂದೆ ಕೇವಲ 20,000 ರೂಪಾಯಿ ತನಕ ಮಾತ್ರ ನಗದು ನೀಡಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ವ್ಯವಹಾರಗಳನ್ನು ಕಡ್ಡಾಯವಾಗಿ ಬ್ಯಾಂಕ್ ಮೂಲಕವೇ ಮಾಡಬೇಕು. ಹೋಟೆಲ್ಗಳಲ್ಲಿ ಭರ್ಜರಿ ಪಾರ್ಟಿ ಮಾಡುವವರಿಗೂ ಹೊಸ ನಿಯಮ ಅನ್ವಯವಾಗಲಿದ್ದು, 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಬಿಲ್ ಪಾವತಿಗೆ ಪ್ಯಾನ್ (PAN) ಕಾರ್ಡ್ ನೀಡುವುದು ಕಡ್ಡಾಯವಾಗಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಮುನ್ನ ಈ ಮಿತಿಗಳನ್ನು ಗಮನಿಸಿ:
-
ಉಳಿತಾಯ ಖಾತೆ (Savings Account): ಪ್ಯಾನ್ ಕಾರ್ಡ್ ಇದ್ದವರಿಗೆ ವರ್ಷಕ್ಕೆ 10 ಲಕ್ಷ ರೂ., ಪ್ಯಾನ್ ಇಲ್ಲದವರಿಗೆ 5 ಲಕ್ಷ ರೂ. ಗರಿಷ್ಠ ಮಿತಿ.
-
ಚಾಲ್ತಿ ಖಾತೆ (Current Account): ವರ್ಷಕ್ಕೆ ಗರಿಷ್ಠ 50 ಲಕ್ಷ ರೂ. ಡೆಪಾಸಿಟ್ ಮಾಡಬಹುದು.
ಈ ಮಿತಿ ಮೀರಿದಲ್ಲಿ ಆದಾಯ ತೆರಿಗೆ ಇಲಾಖೆಗೆ ಸ್ಪಷ್ಟನೆ ನೀಡಬೇಕಾಗುತ್ತದೆ. ಸರಿಯಾದ ದಾಖಲೆ ನೀಡದಿದ್ದಲ್ಲಿ ಶೇ. 84 ರಷ್ಟು ತೆರಿಗೆ ಮತ್ತು ದಂಡ ವಿಧಿಸುವ ಅಧಿಕಾರ ಇಲಾಖೆಗೆ ಇರುತ್ತದೆ. ಹಣ ವಿತ್ಡ್ರಾ ಮಾಡುವಾಗಲೂ ಐಟಿ ರಿಟರ್ನ್ಸ್ ಸಲ್ಲಿಸದವರಿಗೆ 20 ಲಕ್ಷ ರೂ. ಮಿತಿಯಿದ್ದು, ಅದಕ್ಕಿಂತ ಹೆಚ್ಚು ಹಣ ತೆಗೆದರೆ ಶೇ. 2 ರಿಂದ ಶೇ. 5 ರಷ್ಟು ಟಿಡಿಎಸ್ (TDS) ಕಟ್ ಆಗಲಿದೆ.
ಡಿಜಿಟಲ್ ಯುಗದಲ್ಲಿ ಯುಪಿಐ (UPI) ಬಳಕೆದಾರರಿಗೂ ಸಣ್ಣ ಆಘಾತ ಕಾದಿದೆ. ಇನ್ಮುಂದೆ ಯುಪಿಐ ಮೂಲಕ ಹಣ ವಿತ್ ಡ್ರಾ ಮಾಡಿದರೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ, ಎಟಿಎಂನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ತೆಗೆದರೆ ಪ್ರತಿ ಬಾರಿಗೆ 25 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಈ ಎಲ್ಲಾ ಬದಲಾವಣೆಗಳು ಹಣಕಾಸಿನ ಶಿಸ್ತು ತರಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ಡಿಜಿಟಲ್ ಪಾವತಿಗೆ ಹೆಚ್ಚು ಒತ್ತು ನೀಡುವುದು ಸೂಕ್ತ.





