ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಮನುಷ್ಯನಿಗೆ ಅನಾದಿ ಕಾಲದಿಂದಲೂ ಚಿನ್ನದ ಮೇಲೆ ವ್ಯಾಮೋಹ.. ಈ ಚಿನ್ನಕ್ಕಾಗಿಯೇ ಅದೆಷ್ಟೂ ಘೋರ ಯುದ್ಧಗಳು ನಡೆದು ಹೋಗಿವೆ. ಇವತ್ತಿಗೂ ಚಿನ್ನಕ್ಕಾಗಿ ಅದೆಷ್ಟೋ ಜೀವಗಳು ಬಲಿಯಾಗುತ್ತಿವೆ. ಇನ್ನು ಹೆಣ್ಮಕ್ಕಳಿಗಂತೂ ಚಿನ್ನದ ಮೇಲಿನ ಪ್ರೀತಿ..ಪ್ರೇಮ ಸ್ವಲ್ಪ ಹೆಚ್ಚಾಗೇ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಳ್ಳ-ಖದೀಮರು ಈಗ ಮಾರುಕಟ್ಟೆಗೆ ರೆಡ್ ಗೋಲ್ಡ್ ಅಂದರೆ ಚಿನ್ನದಂತೆಯೇ ಕಾಣುವ ನಕಲಿ ಚಿನ್ನ ಲಗ್ಗೆ ಇಡುವಂತೆ ಮಾಡಿದ್ದಾರೆ ಅನ್ನೋ ಭಯಾನಕ ಮಾಹಿತಿ ಹೊರಬಿದ್ದಿದೆ.
ಬೆಂಗಾಲ್ ರೆಡ್ ಗೋಲ್ಡ್..ಕೆಂಪು ಬಂಗಾರ. ಥೇಟ್ ಅಸಲಿ ಚಿನ್ನದ ತಲೆ ಮೇಲೆ ಹೊಡೆದಂತೆ ಕಾಣುವ ಈ ಕೆಂಪು ಬಂಗಾರವನ್ನು ಸ್ವತಃ ಚಿನ್ನದ ವ್ಯಾಪಾರಿಗಳು ಕಂಡು ಹಿಡಿಯುವುದೂ ಕೂಡ ಕಷ್ಟವಂತೆ. ಕೆಂಪು ಬಂಗಾರವನ್ನು ತುಂಡು ಮಾಡಿದ್ರೆ ಹೊರಗಿನಿಂದ ಮಾತ್ರವಲ್ಲ ಒಳಗಿನಿಂದಲೂ ಇದು ಚಿನ್ನದ ಬಣ್ಣವನ್ನೇ ಹೋಲುತ್ತದೆಯಂತೆ. ಅಷ್ಟೇ ಅಲ್ಲ ಇದನ್ನು ಬೆಂಕಿಯಲ್ಲಿ ಹಾಕಿದ್ರೂ ಥೇಟ್ ಚಿನ್ನದಂತೆ ಕರಗುತ್ತೆ. ಮತ್ತೆ ನೀರಿನ ಸ್ಪರ್ಶಕ್ಕೆ ಬಂದ್ರೆ ಕ್ಷಣಾರ್ಧದಲ್ಲಿ ಅಸಲಿ ಚಿನ್ನದಂತೆ ಬದಲಾಗುತ್ತದೆಯಂತೆ. ಯಾವುದೇ ಮ್ಯಾಗ್ನೆಟ್ಗೆ ಈ ಕೆಂಪು ಬಂಗಾರ ಅಂಟಿಕೊಳ್ಳುವುದಿಲ್ಲ..ನೀರಿನಲ್ಲಿ ತೇಲುವುದಿಲ್ಲ..ನಕಲಿ ಬಂಗಾರದಂತೆ ಬಣ್ಣ ಮಾಸುವುದಿಲ್ಲ. ವರ್ಷಗಟ್ಟಲೆ ಬಳಿಸಿದ್ರೂ ನಕಲಿ ಚಿನ್ನ ಅಂತ ತಿಳಿಯುವುದಿಲ್ಲವಂತೆ.
ಇದನ್ನೇ ಬಂಡವಾಳ ಮಾಡಿಕೊಂಡು ಈ ಕೆಂಪು ಬಂಗಾರದಿಂದ ಆಭರಣಗಳನ್ನು ತಯಾರಿಸಿ ಈಗಾಗಲೇ ವಿಶ್ವಾದ್ಯಂತ ಮಾರುಕಟ್ಟೆಗೆ ಬಿಡಲಾಗಿದೆ ಎಂದು ಹೇಳಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ಯಾವುದು, ಅಸಲಿಯಾವುದು ಎಂಬುದನ್ನು ಗುರುತಿಸುವುದುದೇ ಕಷ್ಟ. ಅದರಲ್ಲೂ ಚಿನ್ನಾಭರಣ, ವಜ್ರಾಭರಣಗಳ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ಅರಿವಿರುವುದಿಲ್ಲ. ನಾವು ಹೋಗುವ ಚಿನ್ನದಂಗಡಿಯವರು ಕೊಟ್ಟಿದ್ದನ್ನು ಪಡೆದು ಅವರು ಹೇಳಿದಷ್ಟು ಹಣ ಕೊಟ್ಟು ಬರುತ್ತೇವೆ. ಆದರೆ ಚಿನ್ನದಂಗಡಿಯವರಿಗೇ ಈ ಕೆಂಪು ಚಿನ್ನದ ಬಗ್ಗೆ ತಿಳಿಯದೇ ಹೋದರೆ ಎಲ್ಲರೂ ಮೋಸ ಹೋಗೋದು ಗ್ಯಾರಂಟಿ ಆಗಿದೆ.
ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಮಾರುಕಟ್ಟೆ ಭಾರತವಾಗಿದ್ದು ಇಲ್ಲಿ ನಾವು ಅಸಲಿ ಚಿನ್ನದ ಆಭರಣಗಳನ್ನು ಅದರಲ್ಲಿರೋ ಹಾಲ್ ಮಾರ್ಕ್ ನೋಡಿ ಕೊಂಡುಕೊಳ್ಳುತ್ತೇವೆ. ಈ ಹಾಲ್ ಮಾರ್ಕ್ ಇದ್ದರೆ ಅದು ಪರಿಶುದ್ಧ ಚಿನ್ನ ಅಂತ ಯಾರು ಬೇಕಾದರೂ ನಂಬಬಹುದು. ಆದ್ರೆ ಚಿನ್ನದ ಶುದ್ಧತೆ ಅಳೆಯುವ ಈ ಹಾಲ್ ಮಾರ್ಕ್ ಕೂಡ ನಕಲಿಯಾದ್ರೆ ನಕಲಿಯನ್ನೇ ಅಸಲಿ ಎಂದುಕೊಂಡು ಖರೀದಿ ಮಾಡುತ್ತೇವೆ. ಈಗಲೂ ಭಾರತದ ಅನೇಕ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರನ್ನು ಈ ರೀತಿಯೇ ಯಾಮಅರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಕಲಿ ಹಾಲ್ಮಾರ್ಕ್ ಹೊಂದಿರುವ ಚಿನ್ನವು ಪ್ರವಾಹ ರೀತಿಯಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದು ಚಿನ್ನಾಭರಣ ವ್ಯಾಪಾರಿಗಳು ಕ್ರಮಕ್ಕೆ ಆಗ್ರಹಿಸಿರೋದು ವರದಿಯಾಗಿದೆ.
ನಕಲಿ ಹಾಲ್ಮಾರ್ಕ್ ಹೊಂದಿರುವ ಚಿನ್ನವು ಭಾರತೀಯ ಮಾರುಕಟ್ಟೆಯನ್ನು ಆವರಿಸಿದೆ ಎನ್ನಲಾಗಿದ್ದು ಈ ಬಗ್ಗೆ ಪ್ರಮುಖ ಆಭರಣ ವ್ಯಾಪಾರಿಗಳು ಮತ್ತು ಉದ್ಯಮದ ಒಳಗಿನವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಿನ್ನದ ಮೇಲಿನ ಸುಂಕ ಹೆಚ್ಚಿಸಿರುವುದರಿಂದ ಹೆಚ್ಚಿನ ಪ್ರಮಾಣದ ಕಳ್ಳಸಾಗಣೆ ಚಿನ್ನವು ಮಾರುಕಟ್ಟೆ ಪ್ರವೇಶಿಸುತ್ತಿದೆ. ತದನಂತರ ಅನಧಿಕೃತ ಆಭರಣ ತಯಾರಿಕಾ ಕೇಂದ್ರಗಳಲ್ಲಿ ಆಭರಣವಾಗಿ ಪರಿವರ್ತನೆಯಾಗುತ್ತದೆ. ಈ ಪದ್ಧತಿಯಿಂದಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ತೆರಿಗೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.