ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ 12ನೇ ವಾರದಲ್ಲಿ ಮನೆಯ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ವೈಲ್ಡ್ ಕಾರ್ಡ್ ಮೂಲಕ ಎರಡನೇ ಬಾರಿಗೆ ಮನೆ ಪ್ರವೇಶಿಸಿರುವ ಚೈತ್ರಾ ಕುಂದಾಪುರ, ಟಾಸ್ಕ್ ನೆಪದಲ್ಲಿ ಸಹಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ ಮತ್ತು ಅಸಹ್ಯಕರ ನಡವಳಿಕೆ ತೋರುವ ಮೂಲಕ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕ್ಯಾಪ್ಟನ್ಸಿ ರೇಸ್ನ ಆಯ್ಕೆಗಾಗಿ ನಡೆದ ಟಾಸ್ಕ್ನಲ್ಲಿ ಅಶ್ವಿನಿ ಗೌಡ ಅವರಿಗೆ ಚೈತ್ರಾ ತೀವ್ರ ಗಾಯಗೊಳಿಸಿರುವ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕ್ಯಾಪ್ಟನ್ ಟಾಸ್ಕ್ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ‘ತಟ್ಟೆ ಜೋಡಿಸುವ’ ಕಠಿಣ ಸವಾಲನ್ನು ನೀಡಲಾಗಿತ್ತು. ಈ ವೇಳೆ ಅಶ್ವಿನಿ ಗೌಡ ಅವರನ್ನು ತಡೆಯಲು ಮುಂದಾದ ಚೈತ್ರಾ ಕುಂದಾಪುರ, ಅಶ್ವಿನಿ ಅವರನ್ನು ಬಗ್ಗಿಸಲು ಸಾಧ್ಯವಾಗದಿದ್ದಾಗ, ತಮ್ಮ ಉಗುರುಗಳಿಂದ ಅವರ ಕೈ ಮತ್ತು ಮೈಯನ್ನು ಪರಚಿದ್ದಾರೆ. ಚೈತ್ರಾ ಅವರ ಈ ಉಗುರಿನ ದಾಳಿಯಿಂದಾಗಿ ಅಶ್ವಿನಿ ಅವರ ಕೈಗಳ ಮೇಲೆ ರಕ್ತಸಿಕ್ತ ಗಾಯಗಳಾಗಿವೆ.
ಈ ಟಾಸ್ಕ್ನ ಉಸ್ತುವಾರಿ ವಹಿಸಿದ್ದ ಮನೆಯ ಕ್ಯಾಪ್ಟನ್ ರಾಶಿಕಾ ಅವರು, ಚೈತ್ರಾ, ಉಗುರಿನಿಂದ ಪರಚಬೇಡಿ, ಇದು ತಪ್ಪು ಎಂದು ಪದೇ ಪದೇ ಎಚ್ಚರಿಕೆ ನೀಡಿದರೂ ಚೈತ್ರಾ ಕಿವಿಗೊಡಲಿಲ್ಲ. ಬುದ್ಧಿಮಾತು ಹೇಳಿದವರ ಮೇಲೆಯೇ ಕಿರುಚಾಡಿ, ಅಶ್ವಿನಿ ಅವರನ್ನು ಹೀಯಾಳಿಸಿ, ಅವರಿಗೆ ಪರಚುವುದನ್ನು ಮುಂದುವರಿಸಿದರು.
ಕೇವಲ ದೈಹಿಕವಾಗಿ ಪರಚಿದ್ದು ಮಾತ್ರವಲ್ಲದೆ, ಚೈತ್ರಾ ಅವರ ವರ್ತನೆ ಮಿತಿ ಮೀರಿತು. ಟಾಸ್ಕ್ನ ಭರದಲ್ಲಿ ಅಶ್ವಿನಿ ಅವರ ಬಟ್ಟೆಯನ್ನು ಮೇಲೆ ಎತ್ತುವುದು ಹಾಗೂ ಅವರ ಮುಖಕ್ಕೆ ನೇರವಾಗಿ ಬಾಯಿಂದ ಎಂಜಲು ಉಗುಳಿ ವಿಕೃತಿ ಮೆರೆದಿದ್ದಾರೆ.
ಚೈತ್ರಾ ಅವರ ಉಗುರಿನ ಹಿಂಸೆ ಭರಿಸಲಾಗದೆ, ತನ್ನನ್ನ ರಕ್ಷಿಸಿಕೊಳ್ಳಲು ಅಶ್ವಿನಿ ಗೌಡ ಚೈತ್ರಾ ಅವರ ಕೈಯನ್ನು ಬಿಡಿಸಲು ಒಂದು ಏಟು ನೀಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಚೈತ್ರಾ, ತಾವು ಮಾಡಿದ ಗಾಯಗಳನ್ನು ಮುಚ್ಚಿಟ್ಟು, ನನ್ನ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡಲಾಗಿದೆ ಎಂದು ಮನೆಯಲ್ಲಿ ಬೊಬ್ಬೆ ಹಾಕುತ್ತಾ ಕಿರುಚಾಡಿದ್ದಾರೆ.
ಈಗಾಗಲೇ ಹಳೇ ಸೀಸನ್ಗಳಲ್ಲಿ ಇಂತಹದ್ದೇ ವರ್ತನೆ ತೋರಿದ್ದ ಚೈತ್ರಾ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕಳುಹಿಸಿದ್ದು ಎಷ್ಟು ಸರಿ ? ಆಕೆಯನ್ನ ಮನೆಯಿಂದ ಹೊರಕಳಿಸಿ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.





