ಬಿಗ್‌ ಬಾಸ್‌ ರೀ ಓಪನ್‌: ಸಚಿವ ರಾಮಲಿಂಗರೆಡ್ಡಿ ಹೇಳಿದ್ದೇನು..?

Untitled design 2025 10 09t160657.483

ಬೆಂಗಳೂರು: ರಿಯಾಲಿಟಿ ಶೋಗಳ ಜನಪ್ರಿಯತೆಯ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಕನ್ನಡ ಕಾರ್ಯಕ್ರಮವು ಇತ್ತೀಚೆಗೆ ತೀವ್ರ ಚರ್ಚೆಗೆ ಗುರಿಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ನಿಯಮ ಉಲ್ಲಂಘನೆಯ ಆರೋಪದ ಮೇಲೆ ಈ ಶೋಗೆ ನೋಟಿಸ್ ಜಾರಿಯಾಗಿದ್ದು, ಇದೀಗ ಶೋಗೆ ಬೀಗ ಹಾಕಲಾಗಿದೆ. ಈ ಬೆಳವಣಿಗೆಯ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಒಮ್ಮೆ ನೋಟಿಸ್ ಜಾರಿ ಮಾಡಿದ ಬಳಿಕ, ಸಮಸ್ಯೆ ಸರಿಪಡಿಸುವವರೆಗೂ ಶೋಗೆ ಮತ್ತೆ ಅನುಮತಿ ನೀಡುವುದು ಸೂಕ್ತವಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ, ಈ ಬಗ್ಗೆ ಮಾತನಾಡುವಾಗ, ಕೆಎಸ್‌ಪಿಸಿಬಿ ಅಧ್ಯಕ್ಷ ನರೇಂದ್ರ ಸ್ವಾಮಿ ಅವರು ಬಿಗ್ ಬಾಸ್ ಶೋದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಗಂಭೀರ ಆರೋಪ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿಸಿದರು. ನೋಟಿಸ್ ಜಾರಿಯಾದ ಬಳಿಕ, ಶೋ ಆಯೋಜಕರು ಯಾವುದೇ ಸ್ಪಷ್ಟನೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದ ಕಾರಣ, ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯಕ್ರಮಕ್ಕೆ ಬೀಗ ಹಾಕಿದೆ ಎಂದು ವಿವರಿಸಿದರು. ಆದರೆ, ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೋಗೆ ಮತ್ತೆ ಅನುಮತಿ ನೀಡುವಂತೆ ಸೂಚಿಸಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ಬಗ್ಗೆ ತಮಗೆ ಮಾಧ್ಯಮಗಳ ಮೂಲಕವೇ ಮಾಹಿತಿ ದೊರೆತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ನಾನು ಮಾಧ್ಯಮಗಳಲ್ಲಿ ಓದಿದ ಮಾಹಿತಿಯಷ್ಟೇ ತಿಳಿದಿದೆ. ಕೆಎಸ್‌ಪಿಸಿಬಿ ಸ್ವಾಯತ್ತ ಸಂಸ್ಥೆಯಾಗಿದ್ದು, ಅದು ತನ್ನ ಕರ್ತವ್ಯವನ್ನು ನಿರ್ವಹಿಸಿದೆ. ಒಂದು ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ, ಅದನ್ನು ಸರಿಪಡಿಸದೆ ಶೋಗೆ ಮತ್ತೆ ಅನುಮತಿ ನೀಡುವುದು ಸರಿಯಲ್ಲ ಎಂದು ರಾಮಲಿಂಗಾರೆಡ್ಡಿ ತಮ್ಮ ನಿಲುವನ್ನು ದೃಢಪಡಿಸಿದರು.

Exit mobile version