ಧಾರವಾಡ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ದಾಳಿ ನಡೆಸುವುದನ್ನ ಮುಂದುವರಿಸಿದ್ದಾರೆ. ಇಂದು (ಮಾರ್ಚ್ 30, ಸೋಮವಾರ) ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ (DC) ಭರತ್ ಕುಮಾರ್ ಹೆಗ್ಡೆ ಆರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಕರಣದ ಹಿನ್ನೆಲೆ
ಅಂಕೋಲಾ ಮೂಲದ ಉದ್ಯಮಿ ವಿಶ್ವಜಿತ್ ನಾಯಕ್ ಎಂಬುವವರು ಈ ಪ್ರಕರಣ ಸಂಬಂಧಿಸಿದಂತೆ ದೂರು ನೀಡಿರುತ್ತಾರೆ. ಇವರು 2019 ರಲ್ಲಿ ಎಂಟು ಟಿಪ್ಪರ್ಗಳನ್ನು ಖರೀದಿಸಿದ್ದರು. ನಿಯಮದ ಪ್ರಕಾರ, ಈ ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಅವರಿಗೆ ಸುಮಾರು 60 ಲಕ್ಷ ರೂಪಾಯಿಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಲಭ್ಯವಿತ್ತು. ಇದರಲ್ಲಿ ವಿಶ್ವಜಿತ್ ಅವರು ಈಗಾಗಲೇ 34 ಲಕ್ಷ ರೂಪಾಯಿಗಳ ಐಟಿಸಿಯನ್ನು ಬಳಸಿಕೊಂಡಿದ್ದರು.
ಆದರೆ, ವಾಣಿಜ್ಯ ತೆರಿಗೆ ಇಲಾಖೆಯು ಈ ಪ್ರಕ್ರಿಯೆಯನ್ನು ಪ್ರಶ್ನಿಸಿತ್ತು. ವಿಶ್ವಜಿತ್ ಅವರು ನಿಯಮಬಾಹಿರವಾಗಿ ಈ ಕ್ರೆಡಿಟ್ ಪಡೆದಿದ್ದಾರೆ ಮತ್ತು ಅದನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಇಲಾಖೆಯು ತನಿಖೆ ಆರಂಭಿಸಿತ್ತು. ಈ ತನಿಖೆಯ ಉಸ್ತುವಾರಿಯನ್ನು ಉಪ ಆಯುಕ್ತ ಭರತ್ ಕುಮಾರ್ ಹೆಗ್ಡೆ ವಹಿಸಿದ್ದರು.
ಪದೇ ಪದೇ ನೋಟಿಸ್
ತನಿಖೆಯ ನೆಪದಲ್ಲಿ ಭರತ್ ಕುಮಾರ್ ಅವರು ವಿಶ್ವಜಿತ್ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ನಾಲ್ಕು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಕರೆಸಿದ್ದ ಅಧಿಕಾರಿ, ಇಂದು ಐದನೇ ಬಾರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ನಿಮ್ಮ ಮೇಲಿರುವ ಪ್ರಕರಣವನ್ನು ಮುಕ್ತಾಯಗೊಳಿಸಬೇಕಾದರೆ (Case Close) ದೊಡ್ಡ ಮೊತ್ತದ ಹಣದೊಂದಿಗೆ ಬನ್ನಿ ಎಂದು ಅಧಿಕಾರಿ ನೇರವಾಗಿಯೇ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಲಂಚ ನೀಡಲು ಇಷ್ಟವಿಲ್ಲದ ವಿಶ್ವಜಿತ್ ನಾಯಕ್ ಅವರು ಕೂಡಲೇ ಲೋಕಾಯುಕ್ತ ಪೊಲೀಸರ ಮೊರೆ ಹೋಗಿ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ತಕ್ಷಣವೆ ದೂರು ದಾಖಲಿಸಿಕೊಂಡಿದ್ದಾರೆ.
₹6 ಲಕ್ಷ ಪಡೆಯುವಾಗ ಲೋಕಾಯುಕ್ತ ದಾಳಿ
ಯೋಜನೆಯಂತೆ, ಇಂದು ವಿಶ್ವಜಿತ್ ಅವರು 6 ಲಕ್ಷ ರೂಪಾಯಿ ಹಣವನ್ನು ಹಿಡಿದುಕೊಂಡು ಅಧಿಕಾರಿಯ ಕಚೇರಿಗೆ ಬಂದಿದ್ದಾರೆ. ಭರತ್ ಕುಮಾರ್ ಹೆಗ್ಡೆ ಆ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ ಹೊಂಚು ಹಾಕಿದ್ದ ಲೋಕಾಯುಕ್ತ ತಂಡ ದಾಳಿ ನಡೆಸಿತು. ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದ ಪೊಲೀಸರು, ಅವರ ಕೈಗಳನ್ನು ರಾಸಾಯನಿಕ ದ್ರಾವಣದಲ್ಲಿ ಅದ್ದಿದಾಗ ಹಣ ಮುಟ್ಟಿರುವುದು ಸಾಬೀತಾಯಿತು.
ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ ದೇವರಾಜ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿಗಳಾದ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ರಾಜು ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದೆ. ಸದ್ಯ ಬಂಧಿತ ಅಧಿಕಾರಿಯಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯಲ್ಲಿರುವ ಇತರ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಂಡಿದೆ.





