ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ, ಪಂದ್ಯ ವೀಕ್ಷಿಸಲು ಟಿಕೆಟ್ ಹಂಚಿಕೆ ವಿಚಾರದಲ್ಲಿ, ರಾಜ್ಯದ ಶಾಸಕರಿಗೆ ಪಂದ್ಯ ವೀಕ್ಷಿಸಲು ತಲಾ ಎರಡು (1+1) ಟಿಕೆಟ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಒಪ್ಪಿಗೆ ನೀಡಿದೆ.
ಶುಕ್ರವಾರ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಪದಾಧಿಕಾರಿಗಳ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಪಂದ್ಯಕ್ಕೆ ಅಧಿಕೃತ ಆಹ್ವಾನ ನೀಡಿತು. ಇದೇ ವೇಳೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಪಂದ್ಯ ವೀಕ್ಷಿಸಲು ಟಿಕೆಟ್ ನೀಡುವಂತೆ ಇಟ್ಟಿದ್ದ ಬೇಡಿಕೆಯನ್ನು ಸಿಎಂ ಮತ್ತು ಡಿಸಿಎಂ ಅವರು ಕೆಎಸ್ಸಿಎ ಗಮನಕ್ಕೆ ತಂದರು.
ಶಾಸಕರು ತಲಾ ನಾಲ್ಕು ಟಿಕೆಟ್ಗಳಿಗೆ ಬೇಡಿಕೆ ಇಟ್ಟಿದ್ದರು. ಆದರೆ, ನಾಳಿನ ಪಂದ್ಯದ ಎಲ್ಲಾ ಟಿಕೆಟ್ಗಳು ಈಗಾಗಲೇ ಮಾರಾಟವಾಗಿರುವ ಕಾರಣ, ತಕ್ಷಣಕ್ಕೆ ಪ್ರತಿ ಶಾಸಕರಿಗೆ ‘1+1’ (ಎರಡು) ಟಿಕೆಟ್ ನೀಡಲು ಸಂಸ್ಥೆ ಒಪ್ಪಿದೆ. ಆದರೆ, ಮುಂದಿನ ಪಂದ್ಯಗಳಲ್ಲಿ ಶಾಸಕರ ಬೇಡಿಕೆಯಂತೆ ತಲಾ ನಾಲ್ಕು ಟಿಕೆಟ್ಗಳನ್ನು ಒದಗಿಸುವುದಾಗಿ ಕೆಎಸ್ಸಿಎ ಭರವಸೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾನು ಕೆಎಸ್ಸಿಎ ಸದಸ್ಯನಾಗಿರಬಹುದು, ಅದು ಬೇರೆ ವಿಷಯ. ಆದರೆ ಶಾಸಕರು ಈ ವ್ಯವಸ್ಥೆ ಮತ್ತು ಸರ್ಕಾರದ ಭಾಗವಾಗಿದ್ದಾರೆ. ಅವರಿಗೆ ಪಂದ್ಯ ವೀಕ್ಷಿಸಲು ಟಿಕೆಟ್ ಕೇಳುವ ಸಂಪೂರ್ಣ ಹಕ್ಕಿದೆ. ನಾವು ಸಾಕಷ್ಟು ಒತ್ತಡಗಳ ನಡುವೆಯೂ ಪಂದ್ಯ ಆಯೋಜನೆಗೆ ಅನುಮತಿ ನೀಡಿದ್ದೇವೆ. ಹೀಗಾಗಿ ಶಾಸಕರಿಗೆ ಅವಕಾಶ ಕಲ್ಪಿಸಿಕೊಡುವಂತೆ ಸಂಸ್ಥೆಗೆ ಸೂಚಿಸಿದ್ದೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಶಾಸಕರಿಗೆ ಉಚಿತ ಟಿಕೆಟ್ ನೀಡುವುದು ಅನಗತ್ಯ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಟೀಕೆಗೆ ಉತ್ತರಿಸಿದ ಡಿಸಿಎಂ, ತೇಜಸ್ವಿ ಸೂರ್ಯ ಅವರು ಮೊದಲು ತಮ್ಮ ಪಕ್ಷದ ನಾಯಕರಿಗೆ ಬುದ್ಧಿ ಹೇಳಲಿ, ನಮಗಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಒಟ್ಟಿನಲ್ಲಿ, ನಾಳಿನ ಪಂದ್ಯಕ್ಕೆ ಜನಸಾಮಾನ್ಯರಿಗೆ ಟಿಕೆಟ್ ಸಿಗುವುದು ದುಸ್ತರವಾಗಿರುವ ಹೊತ್ತಿನಲ್ಲಿ, ಜನಪ್ರತಿನಿಧಿಗಳಿಗೆ ವಿಶೇಷ ಕೋಟಾದಡಿ ಟಿಕೆಟ್ ದೊರೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.





